ಬರಗಾಲ ಪರಿಹಾರದ ಬಗ್ಗೆ ಅಮಿತ್ ಶಾರಿಂದ ಸುಳ್ಳು ಹೇಳಿಕೆ: ದಿನೇಶ್ ಗುಂಡೂರಾವ್
ನೈತಿಕತೆ ಇದ್ದರೆ ಸುಪ್ರೀಂ ಕೋರ್ಟ್ಗೆ ದಾಖಲೆ ಒದಗಿಸಲು ಸವಾಲು
ದಿನೇಶ್ ಗುಂಡೂರಾವ್
ಮಂಗಳೂರು, ಎ.4: ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬರ ಪರಿಹಾರದ ಕುರಿತಂತೆ ಸುಳ್ಳು ಹೇಳಿಕೆ ನೀಡಿದ್ದಾರೆ. ರಾಜ್ಯಕ್ಕೆ 17,178 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರವನ್ನು ಕೋರಲಾಗಿದ್ದು, ನಯಾ ಪೈಸೆ ಬಿಡುಗಡೆ ಮಾಡದೆ ಸಬೂಬಗಳೊಂದಿಗೆ ಸುಳ್ಳು ಹೇಳಿರುವ ಗೃಹ ಸಚಿವರು, ನೈತಿಕತೆ ಇದ್ದರೆ, ಸುಪ್ರೀಂ ಕೋರ್ಟ್ಗೆ ಅಫಿದಾವಿತ್ ಮೂಲಕ ಮಾಹಿತಿ ಒದಗಿಸಲಿ ಎಂದು ರಾಜ್ಯದ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ತಡವಾಗಿ, ಅಸಮರ್ಪ ಕವಾಗಿ ಬರಗಾಲದ ವರದಿಯನ್ನು ನೀಡಿದ್ದು, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ. ಇದಕ್ಕಿಂತ ಮಹಾ ಸುಳ್ಳು ಇನ್ನೇನು ಎಂದು ಅವರು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಸರಕಾರವು ಕಳೆದ ಅಕ್ಟೋಬರ್ ತಿಂಗಳಲ್ಲೇ ಬರಗಾಲವನ್ನು ನಿರ್ವಹಿಸಲು ಮಾದರಿ ಕ್ರಮಗಳನ್ನು ಕೊಂಡಿರುವುದನ್ನು ಪ್ರಸ್ತಾಪಿಸಿ, ಅದನ್ನು ಅನುಸರಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜನವರಿಯಲ್ಲಿ ಕೇಂದ್ರ ಸರಕಾರದ ಜತೆ ಪತ್ರವ್ಯವಹಾರ ನಡೆಸಿದೆ. ಆದರೆ ಕೇಂದ್ರ ಸಚಿವರು ರಾಜ್ಯಕ್ಕೆ ಬಂದು ಚುನಾವಣಾ ಆಯೋಗದ ಮೇಲೆ ಗೂಬೆಕೂರಿಸಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಿದರೆ ಅವರನ್ನು ಸುಳ್ಳರೆನ್ನದೆ ಏನೆನ್ನಬೇಕು ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಬರಗಾಲ ನಿರ್ವಹಣೆಗೆ ಕೇಂದ್ರದಿಂದ ಸೂಕ್ತ ಪರಿಹಾರ ದೊರಕದಿರುವ ಬಗ್ಗೆ ವಿಧಿ ಇಲ್ಲದೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಗೃಹ ಸಚಿವರಿಗೆ ನೈತಿಕತೆ ಇದ್ದರೆ ಅಫಿದಾವಿತ್ ಮೂಲಕ ತಾವು ರಾಜ್ಯಕ್ಕೆ ಬಂದು ಹೇಳಿರುವ ಮಾತು ಗಳನ್ನು ದೃಢೀಕರಿಸಲಿ ಎಂದು ಸವಾಲು ಹಾಕಿದ ದಿನೇಶ್ ಗುಂಡೂರಾವ್, ಬರಗಾಲ ಪರಿಹಾರಕ್ಕೆ ಸಂಬಂಧಿಸಿ ರಾಜ್ಯ ದಿಂದ ವರದಿ ಹೋಗಿ, ಮುಖ್ಯಮಂತ್ರಿಯೇ ಖುದ್ದು ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿ ಸಭೆ ಕರೆಯುತ್ತೇನೆ ಎಂದು ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕರ್ನಾಟಕಕ್ಕೆ ಮಾಡಿರುವ ಮಹಾ ಮೋಸ ಎಂದು ಆರೋಪಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮತ್ತು ಗೃಹ ಸಚಿವರು ಈ ರೀತಿ ಸುಳ್ಳು ಹೇಳುತ್ತಿದ್ದರೆ ಅವರ ಬಿಜೆಪಿಯನ್ನು ಸುಳ್ಳು ಪಕ್ಷ ಎನ್ನಬೇಕಲ್ಲವೇ? ಕರ್ನಾಟಕಕ್ಕೆ ಎನ್ಡಿಎ ಬಂದ ಮೇಲೆ 4 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿರುವುದಾಗಿ ಭಿಕ್ಷೆ ಕೊಟ್ಟ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ರಾಜ್ಯವು ಕೇಂದ್ರಕ್ಕೆ ನೀಡಿರುವ ಕೇವಲ ತೆರಿಗೆ ಆದಾಯ 12 ಲಕ್ಷ ಕೋಟಿ ರೂ.ಗಳಲ್ಲಿ ನಮಗೆ ವಾಪಾಸು ಬಂದಿರುವುದು 2.29 ಲಕ್ಷ ಕೋಟಿ ರೂ. ಮಾತ್ರ. ಪ್ರತಿಯೊಬ್ಬ ಕನ್ನಡಿಗ ಜಿಎಸ್ಟಿ ರೂಪದಲ್ಲಿ 13428 ರೂ. ಕಟ್ಟುತ್ತಾರೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ಜಿಎಸ್ಟಿ ಕೊಡುಗೆ 2793 ರೂ., ಮಧ್ಯ ಪ್ರದೇಶದಲ್ಲಿ ಇದು 3075 ರೂ. ಕೇಂದ್ರದ ಬಜೆಟ್ನ 47,65,768 ಕೋಟಿ ರೂ.ಗಳಲ್ಲಿ ದಕ್ಷಿಣ ಭಾರತಕ್ಕೆ ಸಿಗುವ ಪ್ರಮಾಣ 1,92,725.7 ಕೋಟಿರೂ. ಮಾತ್ರ. ಇದರಲ್ಲಿ ಕರ್ನಾಟಕದ ಪಾಲು 44,485 ಕೋಟಿ ರೂ., ಉತ್ತರ ಪ್ರದೇಶಕ್ಕೆ ಕೇಂದ್ರಕ್ಕೆ ಸಿಗುವ ತೆರಿಗೆ ಪಾಲು 2,18,216 ಕೋಟಿ ರೂ.ಗಳು. 15ನೆ ಹಣಕಾಸು ಆಯೋಗವೇ ವಿಶೇಷ ಅನುದಾನವಾಗಿ 16,990 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಸಿಕ್ಕಿರುವುದು ಕೇವಲ 45 ಕೋಟಿ ರೂ. ಮಾತ್ರ. ಆದರೆ ಅದೇ ಉತ್ತರ ಪ್ರದೇಶಕ್ಕೆ 2117 ಕೋಟಿ ರೂ., ಮಧ್ಯಪ್ರದೇಶಕ್ಕೆ 759ಕೋಟಿರೂ., ಗುಜರಾತ್ಗೆ 431 ಕೋಟಿ ರೂ.ಗಳು. ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಅತೀ ಕಡಿಮೆ ತೆರಿಗೆ ಪಾಲು ಮಾತ್ರವಲ್ಲ, ಹಣಕಾಸು ಆಯೋಗದ ಶಿಫಾರಸ್ಸಿನ ಹೊರತಾಗಿಯೂ ಸಿಗುವ ವಿಶೇಷ ಅನುದಾನ ಅತ್ಯಲ್ಪ ಪ್ರಮಾಣದಲ್ಲಿರಬೇಕಾದರೆ ಇದು ಕರ್ನಾಟಕಕ್ಕೆ ಅನ್ಯಾಯವಲ್ಲದೆ ಮತ್ತೇನು? ಇದನ್ನು ನಾವು ಪ್ರಶ್ನಿಸಬೇಡವೇ ಎಂದು ದಿನೇಶ್ ಗುಂಡೂರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರು ಇನ್ನೊಬ್ಬ ಸುಳ್ಳುಗಾರ ಎಂದು ಟೀಕಿಸಿದ ದಿನೇಶ್ ಗುಂಡೂರಾವ್, ವಂಶರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿಯವರು, ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಮೌನವಾಗುತ್ತಾರೆ. ಶಿವಮೊಗ್ಗದಲ್ಲಿ ಯಾರಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಟ್ಟಿರುವುದು ಎಂದು ಪ್ರಶ್ನಿಸಿದರು.
ಚುನಾವಣಾ ಬಾಂಡ್ ವಿಷಯವನ್ನು ಪ್ರಸ್ತಾಪಿಸುತ್ತಾ, ಅಕ್ರಮ ಹಣವನ್ನು ಬಿಜೆಪಿ ಖಜಾನೆಗೆ ತುಂಬಿಸುವ ಕೊಳ್ಳುವ ಸಲುವಾಗಿಯೇ ಚುನಾವಣಾ ಬಾಂಡ್ ಕಾನೂನು ತರಲಾಗಿದೆ. ದೇಣಿಗೆದಾರರ ಹೆಸರನ್ನು ಗೌಪ್ಯವಾಗಿಟ್ಟು, ಇದೀಗ ನ್ಯಾಯಾಲಯದ ಛೀಮಾರಿ ಮೇಲೆ ಬಹಿರಂಗ ಆಗುವಂತಾಗಿದೆ. ಲಾಭವೇ ಇಲ್ಲದ ಕೆಲವೊಂದು ಖಾಸಗಿ ಕಂಪನಿಗಳು 434.23 ಕೋಟಿ ರೂ.ಗಳಷ್ಟು ಚುನಾವಣಾ ಬಾಂಡ್ಗಳನ್ನು ಬಿಜೆಪಿ ಹೆಸರಲ್ಲಿ ಖರೀದಿಸಿವೆ. ಅಲ್ಪಸ್ವಲ್ಪ ಲಾಭದಲ್ಲಿರುವ ಕೆಲ ಕಂಪನಿಗಳು 601 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ನೀಡಿರುವುದನ್ನು ಪತ್ರಿಕೆ ವರದಿ ಮಾಡಿವೆ. ಯಾವುದೇ ಲಾಭ ಇಲ್ಲದೆ ಈ ರೀತಿ ದೇಣಿಗೆ ನೀಡುವುದು ಯಾಕೆಂಬುದನ್ನು ಯಾರೂ ಬಿಡಿಸಿ ಹೇಳಬೇಕಾಗಿಲ್ಲ. ಕಾನೂನನ್ನು ಉಪಯೋಗಿಸಿಕೊಂಡು ಲೂಟಿ ಮಾಡುವುದು, ಧರ್ಮದ ಹೆಸರಿನಲ್ಲಿ ಪಾಪದ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆಪಾದಿಸಿದರು.
ಸುಮಲತಾ ಅವರು ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ಗೆ ನಷ್ಟವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ಬಗ್ಗೆ ಹೆಚ್ಚಿಗೆ ಮಾತನಾಡಲು ಇಚ್ಚಿಸುವುದಿಲ್ಲ ಎಂದು ಹೇಳಿದ ದಿನೇಶ್ ಗುಂಡೂರಾವ್, ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆ ರೀತಿಯ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಏನೂ ತೊಂದರೆ ಇಲ್ಲ ಎಂದರು.
ಗೋಷ್ಟಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶುಭೋದಯ ಆಳ್ವ, ಶಾಹುಲ್ ಹಮೀದ್, ನೀರಜ್ ಪಾಲ್, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಟಿ.ಕೆ. ಸುಧೀರ್, ಸುಹಾನ್ ಆಳ್ವ ಉಪಸ್ಥತರಿದ್ದರು.
ಕರಾವಳಿಯ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು
ರಾಜ್ಯದ ಕರಾವಳಿಯ ದ.ಕ., ಉಡುಪಿ- ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರಾವಳಿಯ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ಹೇಳಿದ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಆಗಮಿಸುವ ಬಗ್ಗೆ ಕೆಲ ದಿನಗಳಲ್ಲೇ ನಿರ್ಧಾರವಾಗಲಿದೆ ಎಂದರು.