ಮಂಗಳೂರಿಗೆ ಪ್ರಧಾನಿ ಮೋದಿ, ಸ್ವಾಗತಕ್ಕೆ ಸಕಲ ಸಿದ್ಧತೆ ಪೂರ್ಣ: ನಳಿನ್ ಕುಮಾರ್ ಕಟೀಲು
![ಮಂಗಳೂರಿಗೆ ಪ್ರಧಾನಿ ಮೋದಿ, ಸ್ವಾಗತಕ್ಕೆ ಸಕಲ ಸಿದ್ಧತೆ ಪೂರ್ಣ: ನಳಿನ್ ಕುಮಾರ್ ಕಟೀಲು ಮಂಗಳೂರಿಗೆ ಪ್ರಧಾನಿ ಮೋದಿ, ಸ್ವಾಗತಕ್ಕೆ ಸಕಲ ಸಿದ್ಧತೆ ಪೂರ್ಣ: ನಳಿನ್ ಕುಮಾರ್ ಕಟೀಲು](https://www.varthabharati.in/h-upload/2024/04/12/1260177-whatsapp-image-2024-04-12-at-73721-pm.webp)
ಮಂಗಳೂರು: ದೇಶದ ಜನ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಅಭಿವೃದ್ಧಿಶೀಲ ಭಾರತ ವಿಕಸಿತ ಭಾರತವಾಗಿ ರೂಪುಗೊಳ್ಳುತ್ತಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಆಡಳಿತ, ಅಭಿವೃದ್ಧಿಪರವಾಗಿರುವ ಯೋಚನೆ ಮತ್ತು ಯೋಜನೆಗಳು, ಸಾಂಸ್ಕೃತಿಕ ಭಾರತದ ಅಭಿವೃದ್ಧಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿರುವುದು, ಕೋವಿಡ್ನ ಸಂಕಟದ ಪರಿಸ್ತಿತಿಯಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿರುವುದು, ಆರ್ಥಿಕವಾಗಿ ಭಾತವನ್ನು ಮುನ್ನಡೆಸಿದ ರೀತಿ- ಇವೆಲ್ಲದರ ಪರಿಣಾಮವಾಗಿ ಜಾಗತಿಕವಾಗಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ರೂಪುಗೊಂಡಿದೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಸ್ವಚ್ಛ, ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ನೀಡಿರುವುದು, ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳು, ವೈರಿ ರಾಷ್ಟ್ರಗಳಿಗೆ ಕೊಟ್ಟಿರುವ ಎಚ್ಚರಿಕೆಗಳು, ಕಾಶ್ಮೀರ ಮತ್ತು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸನ್ನಿವೇಶಗಳನ್ನು ಚಾಣಾಕ್ಷತನದಿಂದ ನಿರ್ವಹಿಸಿದ ರೀತಿ, ಅಪೂರ್ವವಾದ ದೇಶಭಕ್ತಿ- ಇವನ್ನೆಲ್ಲ ಕಂಡ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿಸಲು ತೀರ್ಮಾನಿಸಿದ್ದಾರೆ ಎಂದು ನಳಿನ್ ಹೇಳಿದರು.
10 ವರ್ಷಗಳ ಆಡಳಿತ, ಜಗತ್ತಿನ ಅತಿ ಹೆಚ್ಚಿನ ಜನಮನ್ನಣೆ ಪಡೆದ ಜನನಾಯಕ, ವಿಶ್ವನಾಯಕ ಮೋದಿಯವರು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ. ಅವರು ಹೋದ ಸ್ಥಳಗಳಲ್ಲೆಲ್ಲ ಲಕ್ಷಾಂತರ ಜನರು ಬಂದು ಸ್ವಾಗತ ಮಾಡುವ ದೃಶ್ಯಗಳು ಎಲ್ಲೆಡೆ ಕಾಣುತ್ತಿವೆ. ಅದೇ ರೀತಿ ಕರ್ನಾಟಕದಲ್ಲೂ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನ, ಮೆಚ್ಚುಗೆ, ಜನಬೆಂಬಲ ಜಾಸ್ತಿಯಾಗಿದೆ. ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲುವುದರಲ್ಲಿ ಸಂದೇಹವಿಲ್ಲ. ಕಳೆದ 1 ವರ್ಷದಲ್ಲಿ ಕಾಂಗ್ರೆಸ್ ಸರಕಾರ ನೀಡಿರುವ ಹೀನವಾದ ಆಡಳಿತ,, ಅಭಿವೃದ್ಧಿ ಕುಂಠಿತವಾಗಿರುವುದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಬಿಡುಗಡೆ ಆಗದಿರು ವುದು, ಭ್ರಷ್ಟಾಚಾರ ಮೇರೆ ಮೀರಿರುವುದು, ಯಾವುದೇ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಪಾವತಿ ಆಗದಿರುವುದು, ಕಾಂಗ್ರೆಸ್ ಸರಕಾರವೀಗ 80% ಸರಕಾರವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಜನತೆ ಇಂದು ಕಾಂಗ್ರೆಸ್ ಅನ್ನು ತಿರಸ್ಕರಿಸುವ ಪರಿಸ್ಥಿತಿಗೆ ಬಂದಿದ್ದಾರೆ. ಭ್ರಷ್ಟಾಚಾರ ರಹಿತವಾಗಿ ಪ್ರಧಾನಿ ಮೋದಿಯವರು ಕೊಟ್ಟಿರುವ ಆಡಳಿತ ಹಾಗೂ ಈಗ ಕಾಂಗ್ರೆಸ್ ನೀಡುತ್ತಿರುವ ಭ್ರಷ್ಟ ಹಾಗೂ ದುಷ್ಟ ಆಡಳಿತವನ್ನು ಜನತೆ ಹೋಲಿಕೆ ಮಾಡಿ ನೋಡುತ್ತಿದ್ದಾರೆ ಎಂದು ಸಂಸದ ನಳಿನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ನಿಕಟಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದ್ರೆ, ಪಕ್ಷದ ಹಿರಿಯ ಮುಖಂಡ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಯತೀಶ್ ಅರ್ವಾರ, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.