ಕಂಕನಾಡಿ ಮಸೀದಿ ರಸ್ತೆಯಲ್ಲಿ ಪ್ರಾರ್ಥನೆ: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸ್ಪಷ್ಟನೆ
ಮಂಗಳೂರು, ಮೇ 29: ನಗರದ ಕಂಕನಾಡಿ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ನಮಾಝನ್ನು ರಸ್ತೆಯಲ್ಲಿ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ವರದಿ ಮತ್ತು ಪ್ರತಿಕ್ರಿಯೆಗಳ ಬಗ್ಗೆ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಮಾಧ್ಯಮ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಮರು ಶುಕ್ರವಾರ ಮಧ್ಯಾಹ್ನ ನಮಾಜನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾಗಿದೆ. ಅದಕ್ಕಾಗಿ ತಮ್ಮ ಮನೆ ಪರಿಸರದ ಅಥವಾ ಕೆಲಸ ಮಾಡುವ ಸ್ಥಳಕ್ಕೆ ಸಮೀಪದ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುತ್ತಾರೆ. ಸಾಮಾನ್ಯ ವಾಗಿ ಎಲ್ಲ ಮಸೀದಿಗಳಲ್ಲೂ ಏಕಕಾಲದಲ್ಲಿ ಸಾಮೂಹಿಕ ನಮಾಜು ನಿರ್ವಹಿಸಲು ಸಾಕಷ್ಟು ಸ್ಥಳಾವಕಾಶ ಇರುತ್ತದೆ. ನಗರ ಪ್ರದೇಶಗಳಿಗೆ ಹೆಚ್ಚಿನ ಸಾರ್ವಜನಿಕರು ಆಗಮಿಸುವುದರಿಂದ ನಗರದ ಮಸೀದಿಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಹಾಗಾಗಿ ಅಧಿಕ ಜನರು ಸೇರಿದಾಗ ಕಾಂಪೌಂಡ್ ಒಳಗಡೆ ಇರುವ ಮಸೀದಿ ಕಟ್ಟಡದ ಹೊರಭಾಗದ ಖಾಲಿ ಸ್ಥಳದಲ್ಲಿ ಚಾಪೆ ಹಾಕಿ ನಮಾಝ್ ನಿರ್ವಹಿಸಲು ಬಹುತೇಕ ಮಸೀದಿಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಹೀಗಾಗಿ ಸಾರ್ವಜನಿಕ ರಸ್ತೆಯಲ್ಲಿ ನಮಾಜು ನಿರ್ವಹಿಸುವ ಅಗತ್ಯವೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಮಸೀದಿಯ ಕಾಂಪೌಂಡ್ ಹೊರಗಡೆ ಅಥವಾ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವಂತೆ ನಮಾಝ್ ನಿರ್ವಹಿಸಲು ಇಸ್ಲಾಮಿನ ನಿಯಮಗಳಲ್ಲಿ ಅವಕಾಶ ಇಲ್ಲ. ಆದರೆ ಕಂಕನಾಡಿ ಮಸೀದಿಯ ಒಳಭಾಗದಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಲು ಸ್ಥಳಾವಕಾಶದ ಕೊರತೆಯಾದಾಗ ಮಸೀದಿಯ ಪಕ್ಕದ ರಸ್ತೆಯ ಒಂದು ಬದಿಯಲ್ಲಿ ನಮಾಝ್ ನಿರ್ವಹಿಸಿದ್ದಾರೆ. ಆದರೆ ಈ ಘಟನೆ ತಕ್ಷಣಕ್ಕೆ ಮಸೀದಿ ಸಮಿತಿಯ ಗಮನಕ್ಕೆ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮಸೀದಿ ಆವರಣದ ಹೊರಗಿನ ರಸ್ತೆಯಲ್ಲಿ ಯಾರೂ ನಮಾಝ್ ನಿರ್ವಹಿಸದಂತೆ ಸೂಕ್ತ ವ್ಯವಸ್ಥೆಯನ್ನು ಮಸೀದಿ ಆಡಳಿತ ಸಮಿತಿ ಮಾಡಲಿದೆ ಎಂದು ತಿಳಿಸಿದ್ದಾರೆ.
ಆದರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದೆ. ಜಿಲ್ಲೆಯಲ್ಲಿ ನಡೆಯುವ ಹಲವು ಧಾರ್ಮಿಕ ಉತ್ಸವ, ಕಾರ್ಯಕ್ರಮಗಳಲ್ಲಿ ಪೂರ್ತಿ ರಸ್ತೆಯನ್ನೇ ಬಂದ್ ಮಾಡಿ, ವಾಹನ ಸಂಚಾರವನ್ನು ಬೇರೆ ರಸ್ತೆಗೆ ತಿರುಗಿಸುವ ವಿದ್ಯಮಾನಗಳು ನಿರಂತರವಾಗಿ ನಡೆಯುತ್ತವೆ. ಹಾಗಾಗಿ ಪೊಲೀಸ್ ಇಲಾಖೆಯ ಈ ಕ್ರಮವನ್ನು ಮತ್ತು ನಿಯಮವನ್ನು ಜಿಲ್ಲೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಡೆಯುವ ಎಲ್ಲ ಧಾರ್ಮಿಕ ಸ್ಥಳಗಳು, ಆಚರಣೆ, ಉತ್ಸವಗಳಿಗೂ ಅನ್ವಯಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.