ಕಲ್ಲಾಪು ಗ್ಲೋಬಲ್ ಮಾರ್ಕೆಟ್ನಲ್ಲಿ ಬೆಂಕಿ ಅವಘಡ: ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ
► 25 ಅಂಗಡಿಗಳು ಬೆಂಕಿಗಾಹುತಿ, ಕೋಟ್ಯಂತರ ರೂ.ನಷ್ಟ ► ಅಗ್ನಿಶಾಮಕ ದಳದ ವಿರುದ್ಧ ಆಕ್ರೋಶ
![ಕಲ್ಲಾಪು ಗ್ಲೋಬಲ್ ಮಾರ್ಕೆಟ್ನಲ್ಲಿ ಬೆಂಕಿ ಅವಘಡ: ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ ಕಲ್ಲಾಪು ಗ್ಲೋಬಲ್ ಮಾರ್ಕೆಟ್ನಲ್ಲಿ ಬೆಂಕಿ ಅವಘಡ: ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ](https://www.varthabharati.in/h-upload/2024/06/10/1271321-whatsapp-image-2024-06-10-at-84548-am.webp)
ಉಳ್ಳಾಲ, ಜೂ.10: ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಖಾಸಗಿ ಮಾಲಕತ್ವದ ಗ್ಲೋಬಲ್ ಮಾರ್ಕೆಟ್ನಲ್ಲಿ ರವಿವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಸುಮಾರು 25 ಹಣ್ಣಿನ ಅಂಗಡಿಗಳು ಸುಟ್ಟುಕರಕಲಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ.
ಸತತವಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆಯೂ ರವಿವಾರ ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮಾರ್ಕೆಟ್ ನೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದರಿಂದ 25 ಹಣ್ಣಿನ ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಬಹುತೇಕ ಅಂಗಡಿಗಳಲ್ಲಿದ್ದ ಸೇಬು, ಮಾವು, ಮೂಸಂಬಿ, ದ್ರಾಕ್ಷಿ, ದಾಳಿಂಬೆ, ಪಪ್ಪಾಯ ಇತ್ಯಾದಿ ಹಣ್ಣುಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಬೆಲೆ ಬಾಳುವ ಸೊತ್ತುಗಳು ಕೂಡ ಸುಟ್ಟು ಕರಕಲಾಗಿದೆ.
ಸ್ಪೀಕರ್ ಯು.ಟಿ. ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಉಳ್ಳಾಲ ತಹಶೀಲ್ದಾರ್ ಪ್ರದೀಪ್, ಉಳ್ಳಾಲ ನಗರಸಭಾ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಅಗ್ನಿಶಾಮಕ ದಳದ ವಿರುದ್ಧ ಆಕ್ರೋಶ: ಘಟನೆ ನಡೆದ ತಕ್ಷಣ ಅಗ್ನಿಶಾಮಕ ಠಾಣೆಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ಒಂದುವರೆ ಗಂಟೆ ತಡವಾಗಿ ಆಗಮಿಸಿದ್ದಾರೆ. ಈ ವಿಳಂಬದಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಈ ಮಾರ್ಕೆಟ್ನ ಆರಂಭದ ದಿನದಿಂದಲೇ ಹಲವಾರು ಮಂದಿ ಇಲ್ಲಿ ಸಣ್ಣಪುಟ್ಟ ವ್ಯಾಪಾರ ಮತ್ತು ಕೂಲಿ ಕೆಲಸ ಮಾಡಿ ನಾವು ನಮ್ಮ ಸಂಸಾರ ಸಾಗಿಸುತ್ತಿದ್ದೇವು. ಆದರೆ ಈ ಘಟನೆಯಿಂದ ನಮಗೆ ವ್ಯಾಪಾರ-ಕೆಲಸ ಇಲ್ಲದಂತಾಗಿದೆ. ನಮ್ಮ ಕುಟುಂಬ ಸಂಕಷ್ಟಕ್ಕೀಡಾಗಿವೆ. ಹಾಗಾಗಿ ಸರಕಾರ ನಮಗೆ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ವ್ಯಾಪಾರಿಗಳು, ಕಾರ್ಮಿಕರು ಒತ್ತಾಯಿಸಿದ್ದಾರೆ.
*ಈ ಮಾರ್ಕೆಟ್ ಆರಂಭಗೊಂಡಾಗ ನಾನು ತುಂಬಾ ಸಂತಸಗೊಂಡಿದ್ದೆ. ಆದರೆ ಈ ಬೆಂಕಿ ಅನಾಹುತದಿಂದ ನನಗೆ ತುಂಬಾ ಆಘಾತವಾಗಿದೆ. ಘಟನೆಯಿಂದ ಅನೇಕ ವ್ಯಾಪಾರಿಗಳಿಗೆ ನಷ್ಟವಾಗಿದೆ. ಹಾಗಾಗಿ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ಜೊತೆ ಚರ್ಚಿಸಿ ಗರಿಷ್ಟ ಪ್ರಮಾಣದ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.