ನಿಟ್ಟೆ ಸಮೂಹ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದೆ: ಸ್ಪೀಕರ್ ಯು.ಟಿ.ಖಾದರ್
"ಸಿಲ್ವರ್ ಬ್ಲಾಕ್" ಕಟ್ಟಡ ಹಾಗೂ ನೂತನ ವೈದ್ಯಕೀಯ ಸೌಲಭ್ಯಗಳ ಉದ್ಘಾಟನೆ
![ನಿಟ್ಟೆ ಸಮೂಹ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದೆ: ಸ್ಪೀಕರ್ ಯು.ಟಿ.ಖಾದರ್ ನಿಟ್ಟೆ ಸಮೂಹ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದೆ: ಸ್ಪೀಕರ್ ಯು.ಟಿ.ಖಾದರ್](https://www.varthabharati.in/h-upload/2024/06/10/1271361-photo-2024-06-10-20-34-51.webp)
ಕೊಣಾಜೆ: ಜನರಿಗೆ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವ ನಿಟ್ಟೆ ಸಮೂಹ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದೆ. ಗುಣ ಮಟ್ಟದ ಶಿಕ್ಷಣವು ಬಲಿಷ್ಟ ಭಾರತ ನಿರ್ಮಾಣಕ್ಕೆ ಪೂರಕ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ನಿಟ್ಟೆ ಸಂಸ್ಥೆಯ ಪಾತ್ರ ಮಹತ್ತರವಾದುದು ಎಂದು ಸ್ಪೀಕರ್ ಯು. ಟಿ.ಖಾದರ್ ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಬೆಳ್ಳಿ ಹಬ್ಬ ಸ್ಮರಣಾರ್ಥವಾಗಿ ನಿರ್ಮಿಸಲಾದ ನೂತನ "ಸಿಲ್ವರ್ ಬ್ಲಾಕ್" ಕಟ್ಟಡ ಹಾಗೂ ನೂತನ ವೈದ್ಯಕೀಯ ಸೌಲಭ್ಯಗಳನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕೆಲವೊಂದು ರೋಗಗಳು ನಮ್ಮ ಜೀವನಶೈಲಿ, ಆಹಾರ ಪದ್ಧತಿಗೆ ಅವಲಂಬಿತವಾಗಿವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯಕ್ಕೆ ಪೂರಕ ಆಹಾರ ಪದ್ಧತಿಯನ್ನು ಅಳವಡಿಸುವ ಜಾಗೃತಿ ಮೂಡಿಸಬೇಕು. ಅತ್ಯಂತ ಕಡಿಮೆ ಬೆಲೆ ಯಲ್ಲಿ ಆರೋಗ್ಯ ಸೇವೆ ನೀಡುವ ನಿಟ್ಟೆ ಸಂಸ್ಥೆಯು ಇಂದು ಹೆಮ್ಮರವಾಗಿ ನಿಂತಿದೆ ಎಂದು ಹೇಳಿದರು.
ವೈದ್ಯಕೀಯ ಚಿಕಿತ್ಸೆ ಜೊತೆ ರೋಗಗಳು ಭಾದಿಸದಿರಲು ವೈದ್ಯರು ಸಮಾಜದಲ್ಲಿ ಜನಜಾಗೃತಿಯನ್ನೂ ಮೂಡಿಸುವ ಅಗತ್ಯವಿದೆ. ಕರಾವಳಿ, ಕರ್ನಾಟಕ ಮಾತ್ರವಲ್ಲದೆ ದೇಶ, ವಿದೇಶದಿಂದ ಬರುವಂತಹ ಜನರು ನಿಟ್ಟೆ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಯ ಪ್ರಯೋಜನ ಪಡೆಯುತ್ತಿದ್ದು ಇದು ವಿನಯ ಹೆಗ್ಡೆಯವರು ಮಾಡುತ್ತಿರುವ ನಿಜವಾದ ದೇಶ ಸೇವೆಯಾಗಿದೆ. ನಿಟ್ಟೆ ಸಂಸ್ಥೆಯವರು ನ್ಯೂಕ್ಲಿಯರ್ ಮೆಡಿಸಿನ್ ಫೆಸಿಲಿಟಿ ಆರಂಭಿಸಿದ್ದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.
ನೂತನವಾಗಿ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಲ್ಲಿ ಮೊದಲ ಆಯ್ಕೆಯಾಗಿ ಪರಿಗಣಿಸುವ ಶಿಕ್ಷಣ ಸಂಸ್ಥೆಗಳಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವೂ ಒಂದಾಗಿದೆ. ದಕ್ಷಿಣ ಕನ್ನಡವು ಶೈಕ್ಷಣಿಕ ಹಬ್ ಆಗಿ ಖ್ಯಾತಿ ಪಡೆದಿದ್ದು, ಅದರಲ್ಲೂ ಉಳ್ಳಾಲ ಭಾಗವು ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಹೆಮ್ಮೆಯ ವಿಚಾರ ಎಂದರು. ನಮ್ಮ ದೇಶ ಇವತ್ತು ಸಧೃಡವಾಗಿ ಬೆಳೆದಿದೆ. ದೇಶದ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳದ್ದೂ ದೊಡ್ಡ ಪಾತ್ರವಿದೆ. ರಾಜ್ಯ ಸರಕಾರವು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗುಣ ಮಟ್ಟವನ್ನ ಸುಧಾರಿಸಲು ಒತ್ತು ಕೊಡುತ್ತಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರಿಗೆ ವಾರ್ಷಿಕವಾಗಿ ಕೋಟ್ಯಂತರ ರೂ. ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದು ಶೈಕ್ಷಣಿಕವಾಗಿಯೂ ನಿಟ್ಟೆ ಸಂಸ್ಥೆ ಶುಲ್ಕದಲ್ಲಿ ರಿಯಾಯಿತಿ ನೀಡುತ್ತಾ ಬಂದಿದೆ. ಶುಲ್ಕ ರಿಯಾಯಿತಿ, ಉಚಿತ ವೈದ್ಯಕೀಯ ಸೇವೆಯ ಬಗ್ಗೆ ಮನಸಿಗೆ ನೆಮ್ಮದಿ ಇದ್ದು ಜನರು ನಮ್ಮ ಮೇಲಿಟ್ಟ ನಂಬಿಕೆ ವಿಶ್ವಾಸ ಉಳಿಸಿಕೊಂಡಿರುವ ಸಂತೃಪ್ತಿ ಇದೆ ಎಂದರು.
ನಿಟ್ಟೆ ಪರಿಗಣಿತ ವಿವಿಯ ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ರಿಜಿಸ್ಟ್ರಾರ್ ಹರ್ಷ ಹಾಲಹಳ್ಳಿ, ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್ ಉಪಸ್ಥಿತರಿದ್ದರು.
ನಿಟ್ಟೆ ಪರಿಗಣಿತ ವಿವಿಯ ಸಹ ಕುಲಾಧಿಪತಿ ಡಾ.ಎಂ. ಶಾಂತಾರಾಂ ಶೆಟ್ಟಿ ಸ್ವಾಗತಿಸಿದರು. ಕುಲಪತಿ ಪ್ರೊ.ಡಾ. ಎಂ. ಎಸ್. ಮೂಡಿತ್ತಾಯ ವಂದಿಸಿದರು. ನ್ಯೂರೋಲಾಜಿಯ ಪ್ರೊ.ಡಾ.ಸುಹಾನ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
"ಮಧುಮೇಹ, ರಕ್ತದೊತ್ತಡ ಇರುವ ರೋಗಿಗಳ ಮನೆಗಳಿಗೆ ತೆರಳಿ ಪರೀಕ್ಷಿಸಿ, ಔಷಧಗಳನ್ನ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನ ಸರಕಾರದಿಂದ ಹಾಕಿಕೊಂಡಿದ್ದೇವೆ. ಸಮಾಜದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಮಾನವೀಯತೆಗೆ ಬೆಲೆ ಕೊಟ್ಟು ಮೊದಲು ಮನುಷ್ಯರಾಗಿ ನಾವು ಬಾಳ ಬೇಕಿದೆ. ಯುವ ಜನರು ಶಿಸ್ತಿನ ಜೀವನವನ್ನ ಜೀವಿಸಿದರೆ ಆರೋಗ್ಯ, ನೆಮ್ಮದಿ ವೃದ್ಧಿಸುವುದು".
- ದಿನೇಶ್ ಗುಂಡೂರಾವ್, ಆರೋಗ್ಯ, ಕುಟುಂಬ ಕಲ್ಯಾಣ ಸಚಿವರು