ಸುಳ್ಯ: ಮಹಿಳೆಯ ಕೊಲೆ ಪ್ರಕರಣ; ಆರೋಪಿ ಸೆರೆ
![ಸುಳ್ಯ: ಮಹಿಳೆಯ ಕೊಲೆ ಪ್ರಕರಣ; ಆರೋಪಿ ಸೆರೆ ಸುಳ್ಯ: ಮಹಿಳೆಯ ಕೊಲೆ ಪ್ರಕರಣ; ಆರೋಪಿ ಸೆರೆ](https://www.varthabharati.in/h-upload/2024/06/11/1271524-123.webp)
ಸುಳ್ಯ: ಮಹಿಳೆಯೋರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜೋಗಿಯಡ್ಕದ ಜಯರಾಮ ನಾಯ್ಕ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಾರೆಯ ಪಾಟಾಜೆಯ ನಳಿನಿ(55) ಎಂಬವರ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ರವಿವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ಹಿನ್ನೆಲೆ
ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಎಂಬವರ ಪತ್ನಿ ನಳಿನಿ ಅವರು ಎರಡು ವರ್ಷಗಳ ಹಿಂದೆ ಮನೆ ಬಿಟ್ಟಿದ್ದರು. ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ಅವರು ಬಸ್ ನಿಲ್ದಾಣ, ಮತ್ತಿತರ ಕಡೆಗಳಲ್ಲಿ ಮಲಗುತ್ತಿದ್ದರು. ಅದೇ ರೀತಿ ಮದ್ಯ ವ್ಯಸನಿಯಾಗಿದ್ದ ಆರೋಪಿ ಜಯರಾಮ ನಾಯ್ಕ ಕೂಡ ಮನೆ ಬಿಟ್ಟಿದ್ದ. ಈತನು ಕೂಡ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ರಾತ್ರಿ ತಂಗುತ್ತಿದ್ದ. ಕೊಲೆ ನಡೆದ ದಿನ ನಳಿನಿ ಮತ್ತು ಜಯರಾಮ ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ಹೋಗುವಾಗ ನಳಿಸಿ ಅವರ ಕಾಲಿಗೆ ಜಯರಾಮ ತುಳಿದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕುಡಿತದ ಅಮಲಿನಲ್ಲಿದ್ದ ಜಯರಾಮ ಕಲ್ಲನ್ನು ತಂದು ನಳಿನಿ ಅವರ ತಲೆಗೆ ಎತ್ತಿ ಹಾಕಿದ್ದು, ಗಂಭೀರವಾಗಿ ಗಾಯಗೊಂಡ ನಳಿನಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.