ಬೋಳಿಯಾರ್ ಪ್ರಕರಣ: ಮತ್ತೆ ಐದು ಮಂದಿ ಬಂಧನ
ಕೊಣಾಜೆ : ಬೋಳಿಯಾರ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿದ್ದ ಪೊಲೀಸರು ಇದೀಗ ಮತ್ತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಮುಡಿಪು ಸಮೀಪದ ಬೋಳಿಯಾರ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಳಿಯಾರ್ ನಿವಾಸಿಗಳಾದ ಮಹಮ್ಮದ್ ಶಕೀರ್, ಅಬ್ದುಲ್ ರಝಾಕ್ , ಅಬೂಬಕರ್ ಸಿದ್ದೀಕ್, ಸವಾದ್, ಮೋನು ಯಾನೆ ಹಫೀಝ್, ಅಬೂಬಕ್ಕರ್ ಅವರನ್ನು ಪೊಲೀಸರು ಬಂಧಿಸಿ ಉಳಿದ ಆರೋಪಿಗಳಿಗೆ ಶೋಧ ಮುಂದುವರಿಸಿದ್ದರು.
ಇದೀಗ ಪೊಲೀಸರು ಬೋಳಿಯಾರ್ ನಿವಾಸಿಗಳಾದ ತಾಜುದ್ದೀನ್, ಸರ್ವಾನ್, ಮುಬಾರಕ್, ಅಶ್ರಫ್, ತಲ್ಲತ್ ಎಂಬವರನ್ನು ಬಂಧಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಬಿಜೆಪಿ ವತಿಯಿಂದ ಬೋಳಿಯಾರ್ ನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಮಸೀದಿಯೆದುರು ಕೂಡಾ ಕೆಲವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಮೆರವಣಿಗೆ ಬಳಿಕ ಮೂವರು ಕಾರ್ಯಕರ್ತರಾದ ಧರ್ಮನಗರದ ಹರೀಶ್, ನಂದನ್ ಕುಮಾರ್ ಹಾಗೂ ಕಿಶನ್ ಕುಮಾರ್ ಎಂಬವರಿಗೆ ತಂಡವೊಂದು ಚೂರಿಯಿಂದ ಹಲ್ಲೆ ನಡೆಸಿತ್ತು ಎನ್ನಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲದೆ ವಿಜಯೋತ್ಸವದ ಸಂದರ್ಭ ಬೋಳಿಯಾರ್ ಮಸೀದಿಯ ಮುಂದೆ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿರುವ ಬಗ್ಗೆ ಮಸೀದಿ ಅಧ್ಯಕ್ಷರು ದೂರು ನೀಡಿದ ಹಿನ್ನಲೆಯಲ್ಲಿ ಐವರು ಬಿಜೆಪಿ ಕಾರ್ಯಕರ್ತರಾದ ಸುರೇಶ್, ವಿನಯ್, ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿದೆ.