ಮಂಗಳೂರು ವಿ.ವಿ. ಘಟಿಕೋತ್ಸವದಲ್ಲಿ ಕುಲಾಧಿಪತಿಗಳಿಂದ ದಿಢೀರ್ ಕಲಾಪದ ಬದಲಾವಣೆ
ಮಂಗಳೂರು: ವಿಶ್ವವಿದ್ಯಾನಿಲಯದ 42ನೆ ಘಟಿಕೋತ್ಸವದಲ್ಲಿ ಎಂದಿನಂತೆ ಘಟಿಕೋತ್ಸವದ ಕಲಾಪಗಳು ಮಂಗಳ ಗಂಗೋತ್ರಿ ಸಭಾಂಗಣದಲ್ಲಿ ಶನಿವಾರ ಆರಂಭಗೊಂಡಿತ್ತು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಕುಲಾಧಿಪತಿಗಳು ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಏಕಾಏಕಿ ಕೆಲವು ಬದಲಾವಣೆ ಮಾಡಲು ಹೊರಟರು.
ಈ ನಡುವೆ ಸ್ವಾಗತ ಮಾಡಿ ವೇದಿಕೆಯಲ್ಲಿ ಕಲಾಪ ನಡೆಸುತ್ತಿದ್ದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹಣೆಗೆ ಕೈ ಒತ್ತಿ ವೇದಿಕೆ ಯಲ್ಲಿ ಚಿಂತೆಗೀಡಾದಂತೆ ತಲೆ ಬಗ್ಗಿಸಿ ಕೆಲ ಕಾಲ ಮೌನವಾಗಿ ಕುಳಿತಿರುವುದು ಮತ್ತು ಈ ಸಂದರ್ಭ ರಾಜ್ಯಪಾಲರು ಮತ್ತೆ ಅವರನ್ನು ಸಮಾಧಾನ ಪಡಿಸಿರುವುದು ಕಂಡು ಬಂತು. ಬಳಿಕ ಪ್ರೊ. ಧರ್ಮ ಮತ್ತೆ ಕಲಾಪ ನಡೆಸಿದರು.
ಆದರೆ ರಾಜ್ಯಪಾಲರು, ಕುಲಾಧಿಪತಿಗಳು ವಿಶ್ವವಿದ್ಯಾಲಯದ ಘಟಿಕೋತ್ಸವದ ಪೂರ್ವ ನಿಗದಿತ ಕಲಾಪಗಳನ್ನು ಕಾರ್ಯ ಕ್ರಮ ಆರಂಭಗೊಂಡ ಬಳಿಕ ಏಕಾಏಕಿ ಬದಲಾಯಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಪಿಎಚ್ಡಿ ಪದವೀಧರರಿಗೆ ಪದವಿ ಪ್ರದಾನ ಮಾಡುವ ಕಲಾಪವು ಸಮಾನ್ಯವಾಗಿ ಪ್ರತಿವರ್ಷ ವೈಯುಕ್ತಿಕವಾಗಿ ಕರೆದು ಗೌರವಿಸಿ ಕಳುಹಿಸಲಾಗುತ್ತಿತ್ತು. ಆದರೆ ಈ ನಡುವೆ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಎಲ್ಲಾ ಪಿಎಚ್ಡಿ ಪದವೀಧರರನ್ನು ತಮ್ಮ ಹಿಂದೆ ವೇದಿಕೆಯಲ್ಲಿ ನಿಲ್ಲಿಸಿ ಫೋಟೋಗೆ ಪೋಸ್ ಕೊಡುವಂತೆ ಮಾಡಿ ಸಾಮೂಹಿಕವಾಗಿ ಪದವಿ ಪ್ರದಾನ ಮಾಡಿರುವುದಾಗಿ ಘೋಷಿಸಿದರು.
ಘಟಿಕೋತ್ಸವದ ಕಲಾಪಗಳ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಂಚಿತವಾಗಿ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅನುಮೋದನೆಯ ಬಳಿಕ ರಾಜ್ಯಪಾಲರ ಗಮನಕ್ಕೆ ಮುಂಚಿತವಾಗಿ ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ನಡೆದ ಬಳಿಕ ರಾಜ್ಯಪಾಲರು ಕಲಾಪದಲ್ಲಿ ದಿಢೀರ್ ಬದಲಾವಣೆ ಮಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ವಿಶ್ವವಿದ್ಯಾಲಯದ ಅಕಾಡೆಮಿಕ್ ಆದ ಕಾರ್ಯಕ್ರಮವನ್ನು ಅದೇ ಶಿಸ್ತಿನಿಂದ ಮಾಡುವ ಹೊಣೆ ಹೊತ್ತ ಕುಲಾಧಿಪತಿಗಳು ಶೈಕ್ಷಣಿಕ ಸಾಧಕರನ್ನು ವೇದಿಕೆಯಲ್ಲಿ ನಡೆಸಿಕೊಂಡ ರೀತಿ ಸಂಘಟಕರನ್ನು ಕೆಲ ಕಾಲ ಚಿಂತೆಗೀಡು ಮಾಡಿತು.