ತುಂಬೆಯಲ್ಲಿ ಸಂಸ್ಥಾಪಕರ ದಿನಾಚರಣೆ| ಡಾ. ತುಂಬೆ ಮೊಯ್ದಿನ್ರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ

ತುಂಬೆ: ಡಾ. ಬಿ. ಅಹ್ಮದ್ ಹಾಜಿ ಅವರು ತುಂಬೆ ಗ್ರಾಮೀಣ ಪರಿಸರದಲ್ಲಿ 1964ರಲ್ಲಿ ಉದ್ಯಮವನ್ನು ಸ್ಥಾಪಿಸಿ, 1988ರಲ್ಲಿ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳಿಗೆ ಬುನಾದಿ ಹಾಕಿ ಅರ್ಹ ಪ್ರತಿಭಾವಂತ ಮತ್ತು ಗ್ರಾಮೀಣ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಯಾವುದೇ ಭೇದವಿಲ್ಲದೆ ಸದ್ಭಾವ- ಸಾಮರಸ್ಯದ ಹಾದಿಯಲ್ಲಿ ನಡೆದ ಹಾಜಿ ಅವರ ನಡೆ ಎಲ್ಲರಿಗೂ ಆದರ್ಶ ಹಾಗೂ ಸ್ಫೂರ್ತಿಯಾಗಿದೆ ಎಂಬುದಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2024ರ ವರ್ಷದ ಗೌರವ ಡಾಕ್ಟರೇಟ್ ಪಡೆದ ಅಲ್ಮಾನ್ ಯು.ಎ.ಇ ಯಲ್ಲಿನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಾಧಿಪತಿ ಹಾಗೂ ತುಂಬೆ ಗ್ರೂಪ್ ನ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಹೇಳಿದರು.
ಅವರು ತುಂಬೆ ಪದವಿ ಪೂರ್ವ ಕಾಲೇಜಿನ ಶಬನಾ ಬ್ಲಾಕ್ ಅಡಿಟೋರಿಯಂನಲ್ಲಿ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅವರು ಮಾತನಾಡುತ್ತ, ತಾನು ತನ್ನ ತಂದೆಯವರು ಸದುದ್ದೇಶದಿಂದ ಹಾಗೂ ದೂರ ದೃಷ್ಟಿಯನ್ನಿರಿಸಿ ಗ್ರಾಮೀಣ ಫಲಾನುಭವಿಗಳಿಗಾಗಿಯೇ ಸ್ಥಾಪಿಸಿದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಕೋವಿಡ್ ಪೂರ್ವದಲ್ಲಿ ನೀಡುತ್ತಿದ್ದ ಸಹಾಯವನ್ನು ಮತ್ತೆ ಮುಂದುವರಿಸುವುದಾಗಿ ಹೇಳಿದರಲ್ಲದೆ, ತುಂಬೆ ಕಾಲೇಜಿನೊಂದಿಗೆ ಈ ಹಿಂದೆ ಮಾಡಿರುವ ಒಡಂಬಡಿಕೆಯಂತೆ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿ/ನಿಗೆ ಉಚಿತ ಎಂ.ಬಿ.ಬಿ.ಎಸ್. ವೈದ್ಯಕೀಯ ಶಿಕ್ಷಣಕ್ಕೆ ಈ ವರ್ಷವೂ ಆಯ್ಕೆ ಮಾಡಿರುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ಮಾತನಾಡಿ ಗಲ್ಸ್ ಮೆಡಿಕಲ್ ಯುನಿವರ್ಸಿಟಿಯ ಕುಲಾಧಿಪತಿ ಡಾ. ತುಂಬೆ ಮೊಯ್ದಿನ್ ಅವರು ನಮ್ಮ ಸಂಸ್ಥೆಯ ಓರ್ವ ವಿದ್ಯಾರ್ಥಿಗೆ ನೀಡುವ ಎಂ.ಬಿ.ಬಿ.ಎಸ್. ಉಚಿತ ಸೀಟು ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ಫಾರ್ಮಸಿ, ಫಿಸಿಯೋಥೆರಪಿ ಹಾಗೂ ಹೆಲ್ತ್ ಕೇರ್ ಮ್ಯಾನೆಜ್ ಮೆಂಟ್ ನಲ್ಲಿ ತಲಾ ಒಂದು ಸೀಟನ್ನು ಮೆರಿಟ್ ಆಧಾರದಲ್ಲಿ ನೀಡಲು ಒಪ್ಪಿರುತ್ತಾರೆ ಎಂದು ತಿಳಿಸಿದರು ಹಾಗೂ ಡಾ. ತುಂಬೆ ಮೊಯ್ದಿನ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ಕಲಾ, ವಿಜ್ಞಾನ ವಿಭಾಗದ 100% ವಾಣಿಜ್ಯ ವಿಭಾಗದ 99% ಹಾಗೂ ಅಂಗ್ಲ ಮತ್ತು ಕನ್ನಡ ಮಾಧ್ಯಮದ 10ನೇ ತರಗತಿಯಲ್ಲಿ 100% ಫಲಿತಾಂಶ ತಂದ ಬೋಧಕರನ್ನು ಮತ್ತು ಸಾಧನೆಗೆ ಶ್ರಮಿಸಿದ ಬೋಧಕ -ಬೋಧಕೇತರ ಸಿಬ್ಬಂದಿಗಳಿಗೆ ಗೌರವ ಧನವನ್ನು ನೀಡಿ ಪುರಸ್ಕರಿಸಿದರು.
ಇದೇ ವೇಳೆ ವಿಭಾಗವಾರು ಟಾಪರ್ ಸ್ಥಾನ ಗಳಿಸಿದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ಅಮಿತ್ ಶುಕ್ಲ, ಖತೀಜತ್ ರಾಹಿಲ, ಪ್ರಸನ್ನ ಕುಮಾರ್ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಾದ ಅಮೀನಾ ಶಹಬ, ಥೋಮನ್ ರೆಕ್ಸ್ ಫೆರ್ನಾಂಡಿಸ್, ಕಾವ್ಯಶ್ರೀ ಇವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ತುಂಬೆ ಪದವಿ ಪೂರ್ವ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ, ಶುಭಾಶಂಸನೆಗೈದರು.
ಇದೇ ಸಮಾರಂಭದಲ್ಲಿ ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್ಗೆ ಪಾತ್ರರಾದ ಡಾ. ತುಂಬೆ ಮೊಯ್ದಿನ್ ಅವರಿಗೆ ಅವರ ತಾಯಿ ಬೀಪಾತುಮ್ಮ ಅಹ್ಮದ್ ಹಾಜಿಯವರು ಹಾರ ಹಾಕಿ ಸನ್ಮಾನಿಸಿದರು. ಟ್ರಸ್ಟೀ ಬಿ. ಎಂ. ಅಶ್ರಫ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹ್ಮದ್, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಶೀರ್ ತಂಡೇಲ್, ಮ್ಯಾಕ್ಸಿಂ ಕುವೆಲ್ಲೊ, ಶಾಫಿ ಅಮೆಮಾರ್ ಹಾಗೂ ಬಿ.ಎ. ಐ.ಟಿ.ಐ.ಪ್ರಾಂಶುಪಾಲರಾದ ನವೀನ್ ಕುಮಾರ್, ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಕೆ.. ರಾಜ ಶೆಟ್ಟಿ ಉಪಸ್ಥಿತರಿದ್ದರು.
ಅಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಪ್ರತಿಭಾನ್ವಿತರ ಪಟ್ಟಿ ವಾಚಿಸಿ, ಪರಿಚಯಿಸಿದರು. ಕಚೇರಿ ಅಧೀಕ್ಷಕ ಬಿ. ಅಬ್ದುಲ್ ಕಬೀರ್ ಪ್ರಸ್ತಾವನೆಗೈದರು. ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಶಿಕ್ಷಕ ಪದ್ಮನಾಭ ಉಪಾಧ್ಯಾಯ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ ವಂದಿಸಿದರು. ಶಿಕ್ಷಕಿಯರಾದ ಮೋಲಿ ಎಡ್ನಾ ಗೊನ್ಸಾಲ್ವಿಸ್, ಪ್ರತಿಮಾ, ಸೌಮ್ಯ ಪ್ರಾರ್ಥನೆಗೈದರು.







