ಡೆಂಗಿ: ನೀರು ನಿಲ್ಲದಂತೆ ತೀವ್ರ ನಿಗಾ ವಹಿಸಲು ಅಧಿಕಾರಿಗಳಿಗೆ ದ.ಕ. ಅಪರ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಡೆಂಗಿ ಪ್ರಕರಣಗಳು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಡೆಂಗಿ ನಿರ್ಮೂಲನೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು.ಈ ನಿಟ್ಟಿನಲ್ಲಿ ಅಧಿಕಾರಿಗಳು ಜನವಸತಿ ಪ್ರದೇಶ ಹಾಗೂ ತಮ್ಮ ಇಲಾಖಾ ವ್ಯಾಪ್ತಿಯ ಕಟ್ಟಡ, ಆವರಣಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಡೆಂಗಿ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದರು.
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ಕಂಡು ಬಂದಿದ್ದು, ಪಾಲಿಕೆಯ ಎಂಪಿಡಬ್ಲ್ಯು ಸಿಬ್ಬಂದಿ ಫೀಲ್ಡ್ ಗೆ ಹೋಗಬೇಕು, ಮುಂದಿನ ಎರಡು ದಿನಗಳಲ್ಲಿ ಪ್ರತಿ ವಾರ್ಡ್ಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹವನ್ನು ಗುರುತಿಸಿ ನಾಶಗೊಳಿಸಲು ಕ್ರಮವಹಿಸಬೇಕು.ಎಲ್ಲ ವಾರ್ಡ್ಗಳಿಗೆ ರಾಸಾಯನಿಕ ಸಿಂಪಡಿಸಬೇಕು.ಡೆಂಗಿ ನಿರ್ಮೂಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲಾ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಕಮಿಷನರ್ಗಳು ಹಾಗೂ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳು ಕೂಡಲೇ ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಮುಂದಿನ ಎರಡು ದಿನಗಳಲ್ಲಿ ಲಾರ್ವ ನಾಶಪಡಿಸಬೇಕು.ನೀರಿನ ಸಂಗ್ರಹ, ಟಯರ್, ಎಳನೀರು ಸಿಪ್ಪೆಗಳನ್ನು ತೆರವುಗೊಳಿಸಬೇಕು.ಸ್ಥಳೀಯ ಮಟ್ಟದಲ್ಲಿ ಜನರಿಗೆ ಡೆಂಗಿ ಬಗ್ಗೆ ಮಾಹಿತಿಯನ್ನು ನೀಡಬೇಕು, ಜಾಲತಾಣಗಳಲ್ಲಿ, ಕರಪತ್ರಗಳ ಮೂಲಕ ಜಾಗೃತಿ ವಹಿಸಬೇಕು, ಡೆಂಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಂಬಧಿಸಿದ ಇಲಾಖೆಗಳು ಮಾಹಿತಿ ನೀಡುವಂತೆ ಸೂಚಿಸಿದರು.
ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜ್ವರದ ಪ್ರಕರಣಗಳು ಕಂಡು ಬಂದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು.ಡೆಂಗಿ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.
ಇತ್ತೀಚೆಗೆ ಡೆಂಗಿ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಇಲಾಖೆಯಿಂದ ಆಯಾ ಪ್ರದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಶಾಲಾ ಕಾಲೇಜುಗಳಲ್ಲಿ ಡೆಂಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಯನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ವಿದ್ಯಾರ್ಥಿಗಳಿಗೆ ಲಾರ್ವ ಉತ್ಪತ್ತಿಯ ಬಗ್ಗೆ ಮಾಹಿತಿ ನೀಡಿ ತಮ್ಮ ತಮ್ಮ ಮನೆಗಳಲ್ಲಿ ಡೆಂಗಿ ನಿರ್ಮೂಲನೆಗೆ ಕ್ರಮವಹಿಸುವಂತೆ ಜಾಗೃತಿ ಯನ್ನು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್ ಹೇಳಿದರು.
ಶಾಲಾ ಆವರಣದಲ್ಲಿ ಮತ್ತು ಶಾಲಾ ಮೈದಾನಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಪ್ರತಿನಿತ್ಯವೂ ವಿದ್ಯಾರ್ಥಿ ಗಳು ಉಪಯೋಗಿಸುವ ಶೌಚಾಲಯಗಳನ್ನು ಶುಚಿಗೊಳಿಸಬೇಕು, ಸಾಧ್ಯವಾದರೆ ವಿದ್ಯಾರ್ಥಿಗಳಲ್ಲಿ ಉದ್ದ ತೋಳಿನ, ಮೈ ಕೈ ಮುಚ್ಚುವಂತಹ ಉಡುಪುಗಳನ್ನು ಧರಿಸಲು ತಿಳಿಸಿ ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ, ಡೇ ಕೇರ್ ಸೆಂಟರ್ಗಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಡೆಂಗಿ ರೋಗ ಹರಡದಂತೆ ಜಾಗೃತಿ ಮೂಡಿಸಬೇಕು.ಆಶಾ ಕಾರ್ಯಕರ್ತರಿಂದ ಗರ್ಭಿಣಿ ಮಹಿಳೆಯರ ಅರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಬೇಕು.ತಮ್ಮ ಆಯಾ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರ, ಡೇ ಕೇರ್ ಸೆಂಟರ್ ಗಳಲ್ಲಿ ಲಾರ್ವ ಉತ್ಪತ್ತಿಯ ಪ್ರಮಾಣವೂ ಶೂನ್ಯವಾಗಿ ಇರುವ ರೀತಿ ಕ್ರಮ ವಹಿಸಬೇಕು. ತೆಗೆದುಕೊಂಡ ಕ್ರಮಗಳ ಬಗ್ಗೆ ಜಿಪಿಎಸ್ ಫೋಟೋ ಮುಖಾಂತರ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ಹಾಸ್ಟೆಲ್ಗಳಲ್ಲಿ ಶುಚಿತ್ವ ಕಡ್ಡಾಯ:ಎಲ್ಲಾ ಸರಕಾರಿ ಹಾಸ್ಟೆಲ್ಗಳಲ್ಲಿ ಶುಚಿತ್ವ ಕಾಯ್ದುಕೊಳ್ಳುವಂತೆ ತಿಳಿಸಬೇಕು, ವಸತಿ ನಿಲಯಗಳಲ್ಲಿ ಪಾತ್ರೆಗಳನ್ನು ತೊಳೆದ ನೀರಿನ ತ್ಯಾಜ್ಯಗಳನ್ನು ಪ್ರತಿನಿತ್ಯವೂ ಶುಚಿಗೊಳಿಸುವಂತೆ ಆದೇಶಿಸಬೇಕು ಎಂದು ಸಂತೋಷ್ ಕುಮಾರ್ ಸೂಚಿಸಿದರು. ಹಾಸ್ಟೆಲ್ ಸುತ್ತಮುತ್ತ ಬೆಳೆದಿರುವ ಗಿಡ ಗಂಟೆಗಳನ್ನು ಕತ್ತರಿಸಿ ರಾಸಾಯನಿಕವನ್ನು ಸಿಂಪಡಿಸಬೇಕು. ಆರೋಗ್ಯ ಇಲಾಖೆಯಿಂದ ವಿತರಿಸಿದ ಸೊಳ್ಳೆ ಪರದೆಗಳನ್ನು ಬಳಸಬೇಕು.ಪ್ರತಿ ಷರ್ವೂ ಸೊಳ್ಳೆ ಪರದೆಗಳು ಹಾನಿಯಾಗದಂತೆ, ಕಳೆದುಹೋಗದಂತೆ ಜಾಗೃತರಾಗಿರಬೇಕು. ವಿದ್ಯಾರ್ಥಿ ನಿಲಯದಲ್ಲಿ ಬಳಸುವ ಶೌಚಾಲಯಗಳನ್ನು ಪ್ರತಿನಿತ್ಯ ಶುಚಿಗೊಳಿಸಬೇಕು ಎಂದರು.
ಖಾಸಗಿ ವಸತಿ ನಿಲಯಗಳ ಮುಖ್ಯಸ್ಥರು ಸೊಳ್ಳೆಗಳ ನಿರ್ಮೂಲನೆಯ ಬಗ್ಗೆ ಕ್ರಮ ವಹಿಸಬೇಕು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನಹರಿಸಬೇಕು, ಸೊಳ್ಳೆ ಪರದೆಗಳನ್ನು ಒದಗಿಸಬೇಕು.ಮುಖ್ಯವಾಗಿ ನಸಿರ್ಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿ ನಿಲಯಗಳಲ್ಲಿ ಡೆಂಗಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು ತಾವು ಕೆಲಸ ಮಾಡುವ ಜಾಗದಿಂದ ಅಥವಾ ತಾವು ವಾಸವಿರುವ ಜಾಗದಲ್ಲಿ ಡೆಂಗ್ಯೂ ಸೊಳ್ಳೆ ಕಚ್ಚಬಹುದು, ವಸತಿ ನಿಲಯಗಳಲ್ಲಿ ಲಾರ್ವ ಉತ್ಪತ್ತಿ ಕಂಡುಬಂದಲ್ಲಿ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗುವುದು ಹಾಗೂ ವಸತಿ ನಿಲಯಗಳ ಮುಖ್ಯಸ್ಥರ ಮೇಲೆ ದಂಡ ವಿಧಿಸಲಾಗುತ್ತದೆ ಎಂದರು.
*ಪ್ರತಿನಿತ್ಯವೂ ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ಗಮನ: ಹೊರ ರಾಜ್ಯದಿಂದ ಆಗಮಿಸಿದ ವಿದ್ಯಾರ್ಥಿಗೆ ಜ್ವರದ ಲಕ್ಷಣ ಗಳು ಕಂಡು ಬಂದಲ್ಲಿ ವಿದ್ಯಾರ್ಥಿಗೆ ಸರಿಯಾದ ಚಿಕಿತ್ಸೆ ಒದಗಿಸಬೇಕು. ಪ್ರತಿನಿತ್ಯವೂ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನಹರಿಸಿ ಜ್ವರದ ಪರೀಕ್ಷೆಯನ್ನು ಕೈಗೊಳ್ಳಬೇಕು ಎಂದರು.
ಇತ್ತೀಚೆಗೆ ನಗರಗಳಲ್ಲಿ ರಸ್ತೆ ಕಾಮಗಾರಿಯ ವೇಳೆಯಲ್ಲಿ ಬಳಸಲಾದ ಟ್ಯಾಂಕ್ಗಳಲ್ಲಿ ನೀರಿನ ಸಂಗ್ರಹ ಕಂಡುಬಂದಿದ್ದು ಲಾರ್ವ ಉತ್ಪತ್ತಿಯಾಗುವ ಸಾಧ್ಯತೆಗಳು ಇರುವುದರಿಂದ ಸಂಬಂಧಿಸಿದ ಇಲಾಖೆಯವರು ಕೂಡಲೇ ಅಂತಹ ಟ್ಯಾಂಕ್ ಗಳನ್ನು ಗುರುತಿಸಿ ತೆರವುಗೊಳಿಸಬೇಕು.ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ನೀರಿನ ಸಂಗ್ರಹವಾಗದಂತೆ ಸಂಬಂಧಪಟ್ಟ ಪಿಡಬ್ಲ್ಯುಡಿ ಇಂಜಿನಿಯರ್ಗಳು ಜಾಗೃತಿ ವಹಿಸಬೇಕು, ನಿರ್ಮಾಣ ಹಂತದ ಕಟ್ಟಡಗಳಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದರು.
ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹೊರ ರಾಜ್ಯದಿಂದ ಬಂದಂತಹ ವಲಸೆ ಕಾರ್ಮಿಕರು ಇರುವ ಜಾಗದಲ್ಲಿ ಶುಚಿತ್ವ ಕಾಪಾಡಿ ಕೊಳ್ಳುವಂತೆ ತಿಳಿಸಬೇಕು.ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ಡೆಂಗಿ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದರು.
ಕೃಷಿ ಇಲಾಖೆಯ ವತಿಯಿಂದ ಗ್ರಾಮೀಣ ಭಾಗಗಳಲ್ಲಿ ಮುಖ್ಯವಾಗಿ ಅಡಿಕೆ ತೋಟಗಳಲ್ಲಿ, ರಬ್ಬರ್ ತೋಟಗಳಲ್ಲಿ, ಜೇನು ಸಾಕಾಣಿಕ ಗೂಡಿನ ತಳಹದಿಯಲ್ಲಿ ಸಂಗ್ರಹವಾದ ನೀರಿನಲ್ಲಿ, ನರ್ಸರಿಗಳಲ್ಲಿರುವ ಹೂವಿನ ಕುಂಡಗಳಲ್ಲಿ ಲಾರ್ವ ಉತ್ಪತ್ತಿ ಯಾಗದಂತೆ ಕ್ರಮ ವಹಿಸಲು ಸೂಚಿಸಬೇಕು.ಗಪ್ಪಿ ಮೀನುಗಳನ್ನು ನೀರಿನ ಸಂಗ್ರಹಕ್ಕೆ ಬಿಡುವ ಕೆಲಸವಾಗಬೇಕು. ಈ ಬಗ್ಗೆ ಕೃಷಿಕರಿಗೆ ಸಭೆ ನಡೆಸಿ ಮಾಹಿತಿಯನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ಜಪ್ತಿಗೊಳಿಸಲಾದಂತಹ ಲಾರಿ ಹಾಗೂ ಇನ್ನಿತರ ವಾಹನಗಳಲ್ಲಿ, ಟಯರ್ಗಳಲ್ಲಿ, ಮೇಲ್ಛಾವಣಿ ಗಳಲ್ಲಿ ನೀರು ನಿಲ್ಲದಂತೆ ಲಾರ್ವ ಉತ್ಪತ್ತಿಯಾಗದಂತೆ ಪೊಲೀಸ್ ಇಲಾಖೆಯು ಕ್ರಮ ವಹಿಸಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರಿ ಕಟ್ಟಡಗಳ ಮೇಲ್ಚಾವಣಿಯಲ್ಲಿ ನೀರು ನಿಲ್ಲದೆ ಇರುವಂತೆ ನೋಡಿಕೊಳ್ಳಬೇಕು, ಪ್ರತಿ ಶುಕ್ರವಾರ ಕಡ್ಡಾಯವಾಗಿ ಹಾಗೂ ಪ್ರತಿದಿನ ಖುದ್ದು ಇಲಾಖೆಯ ಅಧಿಕಾರಿಗಳೇ ತಮ್ಮ ಇಲಾಖೆಯ ಸುತ್ತಮುತ್ತಲೂ ನೀರು ಸಂಗ್ರಹವಾಗಿದೆ ಎಂಬುದರ ಬಗ್ಗೆ ಪರೀಕ್ಷಿಸಬೇಕು.ನೀರು ಸಂಗ್ರಹವಾದ ಜಾಗಗಳು ಪತ್ತೆ ಆದಲ್ಲಿ ಕೂಡಲೇ ಶುಚಿಗೊಳಿಸಿ ಬ್ಲೀಚಿಂಗ್ ಮಾಡಬೇಕು, ಯಾವುದೇ ರೀತಿಯಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಲಾರ್ವ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ಎಂದು ಅದೇಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನರ್ಸಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.