ಸುರತ್ಕಲ್| ಯುವತಿಯ ಮೆಸೆಂಜರ್ ಹ್ಯಾಕ್ ಪ್ರಕರಣ: ಸಮಗ್ರ ತನಿಖೆಗೆ ನಾಗರಿಕ ಹೋರಾಟ ಸಮಿತಿ ಆಗ್ರಹ

ಸಾಂದರ್ಭಿಕ ಚಿತ್ರ
ಮಂಗಳೂರು: ಸುರತ್ಕಲ್ನ ಯುವತಿಯ ಮೆಸೆಂಜರ್ ಹ್ಯಾಕ್ ಮಾಡಿ ಆಕೆಯ ಸೋದರನಿಗೆ ಬೆದರಿಕೆ ಹಾಕಿದ ಪ್ರಕರಣ ಕೋಮು ಬಣ್ಣ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದ್ದು, ಇದರ ಸಮಗ್ರ ತನಿಖೆಗೆ ಸುರತ್ಕಲ್ನ ನಾಗರಿಕ ಹೋರಾಟ ಸಮತಿ ಆಗ್ರಹಿಸಿದೆ.
ಯುವತಿ ಅನುಮಾನ ವ್ಯಕ್ತಪಡಿಸಿ ಡೋಲೊ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಶಾರೀಕ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅದರೆ, ಬಂಧಿತ ಯುವಕ, ಆತನ ಕುಟುಂಬಸ್ಥರು, ಗೆಳೆಯರು, ಈ ಪ್ರಕರಣವನ್ನು ಹತ್ತಿರದಿಂದ ಗಮನಿಸಿದವರು ಬೇರೆಯೆ ಕತೆ ಹೇಳುತ್ತಿದ್ದಾರೆ. ಅವರ ಪ್ರಕಾರ ಈ ಮೆಸೆಂಜರ್ ಹ್ಯಾಕಿಂಗ್ ಪ್ರಕರಣಕ್ಕೂ, ಬಂಧಿತ ಯುವಕನಿಗೂ ಯಾವುದೇ ಸಂಬಂಧ ಇಲ್ಲ. ಆತನನ್ನು ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಬಜರಂಗ ದಳದ ಒತ್ತಡಕ್ಕೆ ಒಳಗಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ನಾಗರಿಕ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
ಮೆಸೆಂಜರ್ ಹ್ಯಾಕ್ ಮಾಡಿ ಸಂದೇಶ ಹರಿಯ ಬಿಡತೊಡಗಿದಾಗ ಸಂತ್ರಸ್ತೆ ಯುವತಿ ಪೊಲೀಸ್ ದೂರು ನೀಡಿದ್ದಾಳೆ. ಎಫ್ಐಆರ್ ದಾಖಲಿಸಿದ ಪೊಲೀಸರು ಯುವತಿ ಅನುಮಾನ ವ್ಯಕ್ತಡಿಸಿದವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಶಾರೀಕ್ನನ್ನೂ ಕರೆದು ಒಂದು ದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ಮೊಬೈಲ್ ಅನ್ನು ಪೂರ್ತಿ ತಪಾಸಣೆಗೆ ಒಳಪಡಿಸಿದ್ದಾರೆ. ಯಾವುದೇ ಸಾಕ್ಷ್ಯ ಸಿಗದಿರುವ ಕಾರಣ ಆತನ ಪಾತ್ರ ಇಲ್ಲದ ಎಂದು ನಿರ್ಧರಿಸಿ ಬಿಟ್ಟು ಕಳುಹಿಸಿದ್ದರು. ಅಷ್ಟು ಹೊತ್ತಿಗೆ ಬಜರಂಗ ದಳ, ಬಿಜೆಪಿ ಮಧ್ಯಪ್ರವೇಶ ಮಾಡಿದೆ. ಹುಡುಗಿಯನ್ನು ಕತ್ತರಿಸಿ 24 ತುಂಡು ಮಾಡುವುದಾಗಿ ಮೆಸೆಂಜರ್ನಲ್ಲಿ ಬೆದರಿಕೆ ಹಾಕಲಾಗಿದೆ, ಪೊಲೀಸರು ಶಾರೀಕ್ ನನ್ನು ರಕ್ಷಿಸುತ್ತಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳಿಗೆ ರಕ್ಷಣೆ ಇಲ್ಲ. ಎಂಬ ಆರೋಪಗಳನ್ನು ಮಾಡಿದ್ದಾರೆ. ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಈ ನಡುವೆ ದೂರುದಾರೆ ಹುಡುಗಿಯು ಶಾರೀಕ್, ಹಾಗೂ ಆತನ ತಾಯಿಯ ಹೆಸರು ಬರೆದಿಟ್ಟು ಡೋಲೊ ಮಾತ್ರೆಗಳನ್ನು ನುಂಗಿ ಅಸ್ವಸ್ಥಳಾಗಿದ್ದಾಳೆ ಎಂದು ಬಜರಂಗ ದಳ, ಬಿಜೆಪಿ ನಾಯಕರು ಹೇಳಿಕೆ ನೀಡಿರುವುದಾಗಿ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾದ ಸುರತ್ಕಲ್ ಪೊಲೀಸರು ಶಾರೀಕ್ನನ್ನು ಹೇಳಿಕೆ ಪಡೆಯುವ ನೆಪದಲ್ಲಿ ಮತ್ತೊಮ್ಮೆ ಠಾಣೆಗೆ ಕರೆಸಿದ್ದಾರೆ. ಹುಡುಗಿಯ ಹೇಳಿಕೆ ಆಧಾರದಲ್ಲಿ ಹೊಸ ಎಫ್ಐಆರ್ ಹಾಕಿ ನೇರ ಜೈಲಿಗೆ ಕಳುಹಿಸಿದ್ದಾರೆ. ಈಗ ಊರಿಡೀ ಇದೇ ಸದ್ದು. ಲವ್ ಜಿಹಾದ್, ಹಿಂದು ಹುಡುಗಿಯರ ಹಿಂದೆ ಬಿದ್ದಿರುವ ಮುಸ್ಲಿಂ ಯುವಕರು ಎಂಬ ಕತೆಗಳು ಎಗ್ಗಿಲ್ಲದೆ ಹರಿದಾಡುತ್ತಿದೆ. ಒಂದೆರಡು ಸ್ಥಳೀಯ ಖಾಸಗಿ ವಾಹಿನಿಗಳು, ಯೂ ಟ್ಯೂಬ್ ಚಾನಲ್ಗಳು ಕೆಂಡ ಉರಿದು ಬೆಂಕಿ ಏಳಲಿ ಎಂಬಂತೆ ಗಾಳಿ ಹಾಕುತ್ತಿವೆ. ಹುಡುಗಿಯ ದೂರಿನಲ್ಲಿ, ಹ್ಯಾಕ್ ಆದ ಮೆಸೆಂಜರ್ನಲ್ಲಿ ಎಲ್ಲಿಯೂ ಕಾಣಿಸದ 24 ತುಂಡು ಮಾಡುವೆ ಎಂದು ಬೆದರಿಸಿದ್ದಾರೆ ಎಂಬ ವಾಕ್ಯ ಸೃಷ್ಟಿಯಾಗಿದೆ. ಇದು ಬಜರಂಗ ದಳದ ಮುಖಂಡರ ಹೇಳಿಕೆಯಲ್ಲಿ, ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರಗೊಂಡು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಶತ ಪ್ರಯತ್ನ ನಡೆಸಲಾಗಿದೆ. ಜನತೆ ಒಂದಿಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.
ಸುರತ್ಕಲ್ಗೆ, ಮಂಗಳೂರಿಗೆ ಈ ರೀತಿ ಪ್ರಕರಣಗಳು ದಿಢೀರ್ ಎಂಬಂತೆ ಮತೀಯ ಬಣ್ಣ ಪಡೆದು ಗಂಭೀರ ಸ್ವರೂಪ ಪಡೆಯುವುದು ಹೊಸದಲ್ಲ. ಈ ಮೆಸೆಂಜರ್ ಹ್ಯಾಕಿಂಗ್, ಪ್ರೀತಿಸಲು ಬೆದರಿಕೆ ಒಡ್ಡಿದ ಪ್ರಕರಣ ಪ್ರಾಮಾಣಿಕ ತನಿಖೆಗೆ ಒಳಪಡಬೇಕು. ಶಾರೀಕ್ ಪಾತ್ರ ಇದರಲ್ಲಿ ಇದ್ದಲ್ಲಿ ಯಾವ ಮುಲಾಜೂ ಇಲ್ಲದೆ ಆತನ ವಿರುದ್ಧ ಕಾನೂನು ಕ್ರಮಗಳು ಜರುಗಬೇಕು. ಆದರೆ, ಬಿಜೆಪಿ ಶಾಸಕರ, ಬಜರಂಗ ದಳದ ಮುಖಂಡರ ಒತ್ತಡದ ಕಾರಣಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ಶಾರೀಕ್ ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಆಗಬಾರದು. ಬಜರಂಗ ದಳ ಆರೋಪಿಸಿದೆ, ಬೆದರಿಕೆ ಹಾಕುತ್ತಿದೆ ಎಂದ ತಕ್ಷಣ ಮುಸ್ಲಿಂ ಯುವಕರನ್ನು ವಿಚಾರಣೆ, ಸಾಕ್ಷಿ, ಆಧಾರ ಯಾವುದೂ ಇಲ್ಲದೆ ಅಪರಾಧಿ ಎಂದು ತೀರ್ಮಾನಿಸಿ ಜೈಲಿಗೆ ಕಳುಹಿಸುತ್ತೀರಿ ಅಂತಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ, ಮೌನ ವಹಿಸಲೂ ಸಾಧ್ಯವಿಲ್ಲ ಎಂದು ನಾಗರಿಕ ಹೋರಾಟ ಸಮತಿ ಹೇಳಿದೆ.
ಮೆಸೆಂಜರ್ ಹ್ಯಾಕಿಂಗ್ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ್ದು, ಶಾರೀಕ್ ತಪ್ಪಿತಸ್ಥ ಆದರೆ ತಾಂತ್ರಿಕ ತನಿಖೆಯಲ್ಲಿ ಅದು ಬಹಿರಂಗವಾಗಬೇಕು, ಆತನೇ ತಪ್ಪಿತಸ್ಥನಾಗಿದ್ದರೆ ಇನ್ನಷ್ಟು ಕಾನೂನು ಕ್ರಮಗಳು ಆತನ ಮೇಲೆ ಜರುಗಲಿ. ಆತನಲ್ಲ ದಿದ್ದರೆ ನೈಜ ಆರೋಪಿಗಳ ಪತ್ತೆಯಾಗಬೇಕು, ಹುಡುಗಿಗೆ ಮಾನಸಿಕ ಹಿಂಸೆ ನೀಡಿದ, ಬೆದರಿಸಿದವರು ಜೈಲು ಸೇರಲೇ ಬೇಕು. ಹ್ಯಾಕ್ ಮಾಡಿ ಸಂದೇಶ ಕಳುಹಿಸಿದವರನ್ನು ಪತ್ತೆ ಹಚ್ಚುವುದು ಸೈಬರ್ ವಿಂಗ್ಗೆ ನೀರು ಕುಡಿದಷ್ಟು ಸಲೀಸು ಕೆಲಸ. ಸುರತ್ಕಲ್, ಮಂಗಳೂರು ಪೊಲೀಸರಿಗೆ ಆ ಸಾಮರ್ಥ್ಯ ಇದೆ. ಪೊಲೀಸರು ಈ ಪ್ರಕರಣದಲ್ಲಿ ಏನೇನು ನಡೆದಿದೆ, ಯಾರ ಪಾತ್ರ ಏನೆಲ್ಲಾ ಇದೆ ಎಂಬುದನ್ನು ತನಿಖೆ ನಡೆಸಿ ಆದಷ್ಟು ಬೇಗ ಜನತೆಯ ಮುಂದಿಡಬೇಕು. ತನಿಖೆ ನ್ಯಾಯ ಯುತವಾಗಿ ನಡೆದಿದೆ ಎಂದು ದೂರುದಾರರಿಗೆ, ಜೈಲು ಸೇರಿದವರಿಗೆ, ಸುರತ್ಕಲ್ ನಾಗರಿಕರಿಗೂ ಖಾತ್ರಿ ಪಡಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







