ವಕ್ಫ್ ತಿದ್ದುಪಡಿ ವಿಧೇಯಕ ಮತ್ತು ಯುಸಿಸಿ ಜಾರಿಗೆ ಸುನ್ನಿ ಸಂಘಟನೆಗಳಿಂದ ಖಂಡನೆ

ಮಂಗಳೂರು, ಜ.29: ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ ಮೂಲಕ ಮುಸ್ಲಿಂ ಸಮುದಾಯವನ್ನು ತೀವ್ರ ಆತಂಕಕ್ಕೆ ತಳ್ಳಿದ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕವನ್ನು ಯಾವುದೇ ಬದಲಾವಣೆಯಿಲ್ಲದೆ ಅನುಮೋದಿಸಿರುವುದು ಅತ್ಯಂತ ನಿರಾಶಾದಾಯಕ ಬೆಳವಣಿಗೆಯಾಗಿದೆ. ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆ ಎಂದು ಸುನ್ನಿ ಸಂಘಟನೆಗಳ ಒಕ್ಕೂಟವು ಖಂಡಿಸಿದೆ.
ಭಾರತದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ಮುಸ್ಲಿಂ ಸಮುದಾಯವು ಆಡಳಿತ ವರ್ಗದಿಂದ ಅನ್ಯಾಯಕ್ಕೊಳಗಾಗುತ್ತಲೇ ಇದೆ. ಇದೀಗ ಕೇಂದ್ರ ಸರಕಾರವು ವಕ್ಫ್ ಕಾಯಿದೆಯನ್ನು ಬದಲಿಸಲು ಮುಂದಾದರೆ ಉತ್ತರಾಖಾಂಡ ಸರಕಾರವು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿ ಸಿದೆ. ಸರಕಾರಗಳ ಈ ನಡೆಗಳು ಸಂವಿಧಾನದತ್ತ ಹಕ್ಕುಗಳನ್ನು ಕಬಳಿಸುವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರುವ ಕೃತ್ಯವಾಗಿದೆ. ವಿಶೇಷವಾಗಿ ಮುಸ್ಲಿಮರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಎಲ್ಲರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನವನ್ನು ಗೌರವಿಸಿ ಇಂತಹ ಕೃತ್ಯಗಳಿಂದ ಸರಕಾರ ಹಿಂದೆ ಸರಿಯಬೇಕು ಎಂದು ಸುನ್ನಿ ನಾಯಕರು ಮನವಿ ಮಾಡಿದ್ದಾರೆ.
ಬಂಟ್ವಾಳದ ಕಾವಲಕಟ್ಟೆ ಅಲ್ ಖಾದಿಸ ವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಎನ್ಕೆಎಂ ಶಾಫಿ ಸಅದಿ ಠರಾವು ಮಂಡಿಸಿದರು. ಸುನ್ನಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಪಿ. ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸುನ್ನಿ ಉಲಮಾ ಒಕ್ಕೂಟದ ಕಾರ್ಯದರ್ಶಿ ಎಸ್.ಪಿ. ಹಂಝ ಸಖಾಫಿ ಉದ್ಘಾಟಿಸಿದರು. ಮುಸ್ಲಿಂ ಜಮಾಅತ್ ನಾಯಕರಾದ ಜಿ.ಎಂ. ಕಾಮಿಲ್ ಸಖಾಫಿ, ಎಸ್ವೈಎಸ್ ನಾಯಕ ಡಾ. ಝೈನಿ ಕಾಮಿಲ್, ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್, ಎಸ್ಜೆಎಂ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ. ಕಾಮಿಲ್ ಸಖಾಫಿ, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಮೀದ್ ಬಜಪೆ, ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಉಪಸ್ಥಿತರಿದ್ದರು.
ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ. ಸಾದಿಕ್ ಸ್ವಾಗತಿಸಿದರು. ಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ವಂದಿಸಿದರು.