ಸಮತೋಲಿತ, ಜನಪರ ಬಜೆಟ್: ಸಂಸದ ಬ್ರಿಜೇಶ್ ಚೌಟ
ಬಜೆಟ್ ಪ್ರತಿಕ್ರಿಯೆ

ನಿರ್ಮಲಾ ಸೀತಾರಾಮನ್
ಮಂಗಳೂರು, ಫೆ.1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ರಾಷ್ಟ್ರಕ್ಕೆ ಹೊಸ ಶಕ್ತಿ ಮತ್ತು ಭರವಸೆಯನ್ನು ನೀಡುವ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯತ್ತ ಕೊಂಡೊಯ್ಯುವ ಸಮಗ್ರ ಮತ್ತು ಸಮತೋಲಿತ, ಜನತಪರ ಬಜೆಟ್ ಇದಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮೋದಿ ಸರ್ಕಾರದ 3ನೇ ಅವಧಿಯ ಈ ಮೊದಲ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ದೇಶದ ಮಧ್ಯಮ ವರ್ಗ, ರೈತಾಪಿ ವರ್ಗ, ಸಣ್ಣ ಉದ್ದಿಮೆದಾರರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಉತ್ತೇಜನಕಾರಿ ಕೊಡುಗೆಗಳನ್ನು ಘೋಷಿಸುವ ಮೂಲಕ ಹೆಚ್ಚಿನ ವರದಾನವಾಗಲಿದೆ. ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಿಸಿದ್ದು, ತೆರಿಗೆದಾರರಿಗೆ 12 ಲಕ್ಷದವರೆಗೆ ವಿನಾಯಿತಿ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಯಾರು ಕೂಡ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ವಿನಾಯಿತಿ ದೊರೆಯಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ, ಈ ತೆರಿಗೆ ಮಿತಿ ಹೆಚ್ಚಳವು ಮಧ್ಯಮ ವರ್ಗದವರು ಹಾಗೂ ವೇತನದಾರರಿಗೆ ದೊಡ್ಡ ಆರ್ಥಿಕ ವರದಾನ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ದೃಷ್ಟಿಕೋನದಿಂದ ಇದೊಂದು ಸಮರ್ಪಕ ಬಜೆಟ್ ಆಗಿದ್ದು, ಬಜೆಟ್ನಲ್ಲಿ ಬೃಹತ್ ಹಡಗುಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗಿದ್ದು ಈ ಪಾತ್ರದಲ್ಲಿ ಮಂಗಳೂರು ತನ್ನ ಕೊಡುಗೆಯನ್ನು ನೀಡಬಹುದು ಹಾಗೂ ಈ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಮರುಸ್ಥಾಪಿಸುವ ಅವಕಾಶ ಇದೆ. ಬಜೆಟ್ನಲ್ಲಿ ಘೋಷಿಸಲಾದ 25,000 ಕೋಟಿ ರೂಪಾಯಿಗಳ ಕಾರ್ಪಸ್ನೊಂದಿಗೆ ಸ್ಥಾಪಿಸಲಾಗುವ ಶಿಪ್ ಬಿಲ್ಡಿಂಗ್ ಕ್ಲಸ್ಟರ್ಗಳು ಮತ್ತು ಮಾರಿಟೈಮ್ ಡೆವಲಪ್ಮೆಂಟ್ ಫಂಡಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಫಾಲೋ ಅಪ್ ನಡೆಸುವ ಭರವಸೆಯನ್ನು ಸಂಸದರು ನೀಡಿದ್ದಾರೆ.
ಟಯರ್ - 2 ನಗರಗಳಲ್ಲಿ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್(ಜೆಸಿಸಿ) ಗಳನ್ನು ಸ್ಥಾಪಿಸಲು ಯೋಜನೆ ರೂಪಿಸುವ ಪ್ರಸ್ತಾವನೆಯು ಖುಷಿ ಉಂಟು ಮಾಡಿದೆ. ಮಂಗಳೂರಿನಲ್ಲಿ ಜಿಸಿಸಿಗಳನ್ನು ಸ್ಥಾಪಿಸುವಂತೆ ಕೋರಿ ನಾವು ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಬರೆಯಲಾಗಿದ್ದು, ಆದಷ್ಟು ಬೇಗ ಇದರ ಸೌಲಭ್ಯವನ್ನು ಪಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಬಜೆಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಕೂಡ 3ರಿಂದ 5 ಲಕ್ಷ ರೂ. ಗೆ ಏರಿಕೆ ಮಾಡಿರುವುದು ದೇಶದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸಾಲ ಸೌಲಭ್ಯ ಪಡೆಯುವುದಕ್ಕೆ ಅನುಕೂಲವುಂಟು ಮಾಡಲಿದೆ. ಎಲ್ಇಡಿ ಟಿವಿ, ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಕ್ಯಾನ್ಸರ್ ಔಷಧ, ಚರ್ಮದ ಉತ್ಪನ್ನಗಳು, ಸ್ವದೇಶಿ ಬಟ್ಟೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಇಳಿಕೆ ಹಾಗೂ ಹೊಸ ಸ್ಟಾರ್ಟ್ ಅಪ್ಗಳಿಗೆ ವಿಶೇಷ ನಿಧಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 5 ಲಕ್ಷ ಮಹಿಳೆಯರಿಗೆ ಹೊಸ ಉದ್ಯಮ ಸ್ಥಾಪನೆಗೆ ಯೋಜನೆ ಆರಂಭ. ಅಲ್ಲದೆ ಕೃಷಿ ಕ್ಷೇತ್ರದ ಅಮೂಲಾಗ್ರ ಪ್ರಗತಿಗೆ ಪಿಎಂ ಧನ್ ಧಾನ್ಯ ಕೃಷಿ ಯೋಜನೆ ಎಂಬ ಹೊಸ ಸ್ಕೀಮ್ ಅನ್ನು ಪರಿಚಯಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮ. ಜತೆಗೆ ಮಹಿಳೆಯರು, ದುರ್ಬಲವರ್ಗದವರು, ಕಾರ್ಮಿಕ ವರ್ಗದವರ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಬಡತನ ಶೂನ್ಯಗೊಳಿಸುವ ಸಾಮಾಜಿಕ ಬದ್ಧತೆಯ ಬಜೆಟ್ ಇದಾಗಿದೆ ಎಂದು ಚೌಟ ಹೇಳಿದ್ದಾರೆ.
ಇನ್ನೊಂದೆಡೆ ದೇಶದ ಬಡವರ್ಗದವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಪಡೆಯುವಲ್ಲಿ ಕ್ಯಾನ್ಸರ್ ಸೇರಿದಂತೆ 36 ಜೀವ ರಕ್ಷಕ ಔಷಧಗಳನ್ನು ಸಂಪೂರ್ಣವಾಗಿ ಸುಂಕ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಉಡಾನ್ ಯೋಜನೆಯ ಪ್ರಸ್ತಾವನೆ, ಸ್ಟಾರ್ಟಪ್ ಗಳಿಗೆ 10 ಕೋಟಿಯಿಂದ 20 ಕೋಟಿ ರೂ.ವರೆಗೂ ಕಡಿಮೆ ಬಡ್ಡಿಯಲ್ಲಿ ಸಾಲ, ಉದ್ಯಮ ಕ್ಷೇತ್ರದಲ್ಲಿ ಎಸ್ಎಸಿ, ಎಸ್ಟಿ ಹಾಗೂ ಮಹಿಳೆಯರ ಉತ್ತೇಜನಕ್ಕೆ ಹೊಸ ಯೋಜನೆ, ದೇಶದ ಎಲ್ಲ ಜಿಲ್ಲೆಗಳಲ್ಲಿಯೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ, ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸೇವೆ ಹೀಗೆ ಪ್ರತಿಯೊಂದು ಆದ್ಯತಾ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹ. ಈ ಹಿನ್ನಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಈ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ವಿಕಸಿತ ಭಾರತದ ಕನಸನ್ನು ನನಸಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚೌಟ ಶ್ಲಾಘಿಸಿದ್ದಾರೆ.
‘‘ಕೇಂದ್ರದ ಬಜೆಟ್ಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್. ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ರಾಜ್ಯದ ಜನರಿಗೆ ಬಿಜೆಪಿ ಸಂಸದರಿಂದ ಪ್ರಯೋಜನವಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕಕ್ಕೆ ಯಾವುದೇ ಯೋಜನೆಯನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಮೇಲಿದ್ದ ಜನರ ಭರವಸೆ ಹುಸಿಯಾಗಿದೆ. ದೇಶದ ಭವಿಷ್ಯ ದೃಷ್ಟಿಯಿಂದ ಇದು ನಿರಾಶದಾಯಕ ಬಜೆಟ್. ಇದು ದೇಶವನ್ನು ವಿನಾಶ ಮಾಡುವಂತ ಬಜೆಟ್ ಆಗಿದ್ದು, ಸಬ್ ಕಾ ಲಾಸ್ ಬಜೆಟ್ ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸವಾಗಿದೆ".
-ಡಾ.ಮಂಜುನಾಥ ಭಂಡಾರಿ
(ಕೆಪಿಸಿಸಿ ಕಾರ್ಯಾಧ್ಯಕ್ಷರು, ಸದಸ್ಯರು ಕರ್ನಾಟಕ ವಿಧಾನ ಪರಿಷತ್)
"ಕೇಂದ್ರದ ಬಜೆಟ್ನಲ್ಲಿ ಜನಸಾಮಾನ್ಯರ ಬದುಕು ಬದಲಾಯಿಸುವಂಥ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಉದ್ಯೋಗ ಸೃಷ್ಟಿಗೆ ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಕಳೆದ ಹತ್ತ ವರ್ಷಗಳಿಂದಲೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗವುದು ಎಂದು ಹೇಳುತ್ತಾ ಬಂದಿದ್ದಾರೆ. ಅದು ಘೋಷಣೆಯಾಗಿ ಮಾತ್ರ ಉಳಿದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. 12 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ ಮತ್ತು ಕೆಲವೊಂದು ತೆರಿಗೆ ವಿನಾಯಿತಿ ಮಾಡಿರುವುದು ಮಾತ್ರ ಸ್ವಾಗತಾರ್ಹ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾ ಯಕ ಆಯವ್ಯಯ. ಕಳೆದ 10 ವರ್ಷಗಳಿಂದಲೂ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಬಡವರು, ರೈತರು, ಯುವಕರು, ಮಹಿಳೆಯರ ಬಾಳು ಹಸನಾಗಿಸುವ ಮಹತ್ವದ ಯಾಶವುದೇ ಯೋಜನೆಗಳಲ್ಲಿಲ್ಲ. ನಮ್ಮಕರಾವಳಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿನ ಸಂಸದರು ಸಚಿವರ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಅವರು ಆಯ್ಕೆಯಾಗಿದ್ದರೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ".
- ಪದ್ಮರಾಜ್ ಆರ್. ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ
ಕೇಂದ್ರ ಬಜೆಟ್ನಲ್ಲಿ ಕಾರ್ಮಿಕ ವರ್ಗಕ್ಕೆ ಮತ್ತು ಬಡಜನರಿಗೆ ಈ ಬಜೆಟಲ್ಲಿ ಯಾವುದೇ ಸಹಾಯ ಹಸ್ತ ಕಾಣುತ್ತಿಲ್ಲ. ಹೆಚ್ಚುತ್ತಿರುವ ಹಣದುಬ್ಬರ ತಡೆಗಟ್ಟಲು ಯಾವುದೇ ಕಾರ್ಯಕ್ರಮಗಳಿಲ್ಲ. ಯುವಕರಿಗೆ ಉದ್ಯೋಗದ ಬರವಸೆಗಳಿಲ್ಲ. ರೈತರಿಗೆ ಬೆಂಬಲ ಬೆಲೆ ಬಗ್ಗೆ ಚಕಾರವೆತ್ತಿಲ್ಲ. ಖಾಸಗೀಕರಣದ ಬೆನ್ನು ಹತ್ತಿರುವ ಕೇಂದ್ರ ವಿಮಾಕ್ಷೇತ್ರದಲ್ಲಿ ಶೇಕಡಾ 100 ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿದೆ.
ಆದಾಯ ತೆರಿಗೆ ಕಡಿತಗೊಳಿಸಿ ತಮ್ಮ ಜೊತೆಗಿರುವ ಮಧ್ಯಮ ವರ್ಗವನ್ನು ಮತ್ತಷ್ಟು ಹಿಡಿತದಲ್ಲಿರಿಸಿವ ಪ್ರಯತ್ನವಾಗಿದೆ. ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ಒದಗಿಸಿದ್ದರೂ ಅದು ಸಾಲದು. ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಉಚಿತವಾಗಿ ಸಿಗುವಂತಿರಬೇಕು. ಈ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮತ್ತು ಒತ್ತು ನೀಡಿದಲ್ಲಿ ಮಾತ್ರ ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆ ಸ್ಥಿರಗೊಳ್ಳುವುದು.
ಒಟ್ಟಾರೆಯಾಗಿ ಈ ಬಜೆಟ್ ಬಂಡವಾಳಿಗರಿಗೆ ಹಾಗೂ ವಿದೇಶಿ ಹೂಡಿಕೆದಾರರಿಗೆ ಅನುಕೂಲವಾಗಿದೆಯೇ ಹೊರತು ಜನಸಾಮಾನ್ಯರಿಗಲ್ಲ.
-ಶೇಖರ ಬಿ, ಸಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ