ಪಡುಪೆರಾರ: ಸ್ವಚ್ಛತಾ ಕಾರ್ಯ

ಮಂಗಳೂರು: ಪಡುಪೆರಾರ ಗ್ರಾಪಂ ವ್ಯಾಪ್ತಿಯ ಬಜ್ಪೆ-ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯ ಪುಚ್ಚಳ, ಅಡ್ಕಬಾರೆ, ಪೆರಾರ ಮತ್ತಿತರ ಕಡೆ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಜಯಂತ ಪೂಜಾರಿ, ಪಿಡಿಒ ಉಗ್ಗಪ್ಪ ಮೂಲ್ಯ ನೇತೃತ್ವದ ಸ್ವಯಂ-ಸೇವಕರು ರವಿವಾರ ಹೆದ್ದಾರಿ ಬದಿಯಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದರು.
‘ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಂಡಿದ್ದೇನೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಸಾವಿರದಿಂದ 5000 ರೂ.ವರೆಗೆ ದಂಡ ಹೇರಿದ್ದೇನೆ. ಈ ಬಾರಿ ತ್ಯಾಜ್ಯ ತೆರವು ಕಾರ್ಯಾಚರಣೆ ವೇಳೆ ತ್ಯಾಜ್ಯ ರಾಶಿಯಲ್ಲಿ ಲಭಿಸಿರುವ ಕೆಲವು ಅಧಿಕೃತ ಕಾಗದಪತ್ರ ಆಧರಿಸಿ, ತಪ್ಪಿತಸ್ಥರ ವಿರುದ್ಧ ದಂಡ ಹೇರಲಾಗುವುದು’ ಎಂದು ಪಿಡಿಒ ಉಗ್ಗಪ್ಪ ಮೂಲ್ಯ ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂ ಸದಸ್ಯರಾದ ಅಮಿತಾ ಶೆಟ್ಟಿ, ಯಶವಂತ ಪೂಜಾರಿ, ಬಿಲ್ ಕಲೆಕ್ಟರ್ ಭೋಜ ನಾಯ್ಕ್, ಗ್ರಂಥಾಲಯ ಮೇಲ್ವಿಚಾರಕ ಭರತ್ ಕುಮಾರ್ ವಿ, ಪಡುಪೆರಾರ ಗ್ರಾಪಂ ಸ್ವಚ್ಚತಾ ವಾಹಿನಿಯ ಸಿಬ್ಬಂದಿ, ಪಂಚಾಯತ್ನ ಸಂಜೀವಿನಿ ಒಕ್ಕೂಟದ ಪ್ರಜ್ಞಾ ಮತ್ತು ಪೆರಾರ ಫ್ರೆಂಡ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.





