ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ದ.ಕ.ಜಿಲ್ಲೆಗೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಂಸದ ಬ್ರಿಜೇಶ್ ಚೌಟ ಒತ್ತಾಯ

ಬ್ರಿಜೇಶ್ ಚೌಟ
ಮಂಗಳೂರು, ಫೆ.12: ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ (ಜಿಐಎಮ್- ಇನ್ವೆಸ್ಟ್ಮೆಂಟ್ ಕರ್ನಾಟಕ 2025) ಆರಂಭಗೊಂಡಿದ್ದು, ಈ ಬಾರಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಬ್ರಿಜೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕರ್ನಾಟಕದ ಆರ್ಥಿಕ ಸುಸ್ಥಿರ ಬೆಳವಣಿಗೆಗೆ ಪೂರಕವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸಿರುವ ಚೌಟ, ಹೆಚ್ಚಿನ ಉದ್ಯಮಶೀಲತಾ ಕೌಶಲ್ಯ, ನುರಿತ ಮಾನವ ಸಂಪತ್ತು, ವಿಶ್ವದರ್ಜೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕರಾವಳಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಭೌಗೋಳಿಕ ಆಕರ್ಷಣೆ, ಅತ್ಯುತ್ತಮ ಬಂದರು ಸಂಪರ್ಕ, ಬಲಿಷ್ಠ ಮೂಲ ಸೌಕರ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಸಂಶೋಧನೆ ಅಭಿವೃದ್ಧಿ(ಆರ್ಡಿ), ಮಾಹಿತಿ ತಂತ್ರಜ್ಞಾನ, ನವೀಕರಿಸ ಬಹುದಾದ ಇಂಧನ, ಸಾಗರ ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಆದರೆ, ಈ ಪ್ರದೇಶವು ಯುವಕರಲ್ಲಿ ನಿರುದ್ಯೋಗ ಸಮಸ್ಯೆ, ಕೌಶಲ್ಯಪೂರ್ಣ ಪ್ರತಿಭೆಗಳ ವಲಸೆ ಮತ್ತು ಸೀಮಿತ ದೊಡ್ಡ ಪ್ರಮಾಣದ ಕೈಗಾರಿಕಾ ಹೂಡಿಕೆಗಳು ಸೇರಿದಂತೆ ಕೆಲವೊಂದು ಸವಾಲು ಕೂಡ ಎದುರಿಸುತ್ತಿವೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಪರಿಸರ ಸ್ನೇಹಿ ವಾತಾವರಣ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಈ ಬಾರಿಯ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಜಿಲ್ಲೆಗೆ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬರುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಚೌಟ ಅವರು ಮನವಿ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಎನ್ಐಟಿಕೆ, ಮಣಿಪಾಲ್ನಂತಹ ಸಂಸ್ಥೆಗಳು ಪ್ರತಿಭಾನ್ವಿತ ನುರಿತ ಮಾನವ ಸಂಪತ್ತನ್ನು ತಯಾರಿ ಸುತ್ತಿದ್ದು, ಇಲ್ಲಿ ಜಿಸಿಸಿ, ಆರ್ಡಿ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಬಹುದು. ಆ ಮೂಲಕ, ಸೂಕ್ತ ಉದ್ಯೋಗಾವ ಕಾಶಗಳನ್ನು ಕಲ್ಪಿಸುವ ಮೂಲಕ ಪ್ರತಿಭಾ ಪಲಾಯನವನ್ನು ತಡೆಗಟ್ಟಬಹುದು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ತಂತ್ರಜ್ಞಾನ ನಾವೀನ್ಯತೆಯ ಪಾರ್ಕ್ ಸ್ಥಾಪಿಸುವ ಮೂಲಕ ಹೂಡಿಕೆದಾರರನ್ನು ಉತ್ತೇಜಿಸಬೇಕು. ಜತೆಗೆ ನವ ಮಂಗಳೂರು ಬಂದರಿನ ಅಭಿವೃದ್ಧಿ ಹಾಗೂ ಜಾಗತಿಕ ವ್ಯಾಪಾರ ಮತ್ತು ಉತ್ಪಾದನಾ ಕೈಗಾರಿಕೆಗಳನ್ನು ಆಕರ್ಷಿಸುವುದಕ್ಕೆ ಸಮಗ್ರ ಕರಾವಳಿ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಬೇಕೆಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.
ಮಂಗಳೂರು ವಿಶಾಲ ಕಡಲತೀರ ಹೊಂದಿರುವ ಹಿನ್ನೆಲೆಯಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಜೈವಿಕ ತಂತ್ರಜ್ಞಾನಗಳ ಉತ್ತೇಜನಕ್ಕೆ ಕರಾವಳಿ ಭಾಗದ ಸಮುದಾಯಗಳಿಗೆ ದೀರ್ಘಾವಧಿಯ ಉದ್ಯೋಗ ಒದಗಿಸುವ ಸುಸ್ಥಿರ ಮೀನುಗಾರಿಕೆ, ಸಮುದ್ರ ಸಂಶೋಧನೆ-ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರೋತ್ಸಾಹಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳ ಬೇಕು. ಇಕೋ-ಟೂರಿಸಂ ಹಾಗೂ ಆತಿಥ್ಯ ವಲಯದಲ್ಲಿ ಬಂಡವಾಳ ಆಕರ್ಷಿಸಲು ಎಡ್ವಂಚರ್ಸ್ ಟೂರಿಸಂನಂಥ ಪ್ರವಾಸಿ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಇಲ್ಲಿನ ಕೈಗಾರಿಕಾ ವಲಯಗಳ ಸಾರಿಗೆ-ವಿದ್ಯುತ್ ಸಂಪರ್ಕ ಉತ್ತಮಪಡಿಸುವ ಮೂಲಕ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕರಾವಳಿ ಭಾಗವನ್ನು ಬಂಡವಾಳ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿ ಮಾರ್ಪಡಿಸಬಹುದು. ಒಟ್ಟಾರೆ ದಕ್ಷಿಣ ಕನ್ನಡಕ್ಕೆ ಈ ಬಾರಿಯ ‘ಜಿಮ್’ನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾ ಗಲು ಎಲ್ಲ ರೀತಿಯ ಕ್ರಮ ತಮ್ಮ ನಾಯಕತ್ವದ ಸರಕಾರ ತೆಗೆದುಕೊಳ್ಳಬೇಕೆಂದು ಸಂಸದ ಚೌಟ ಅವರು ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.







