ಹಜ್ ತರಬೇತಿ ಶಿಬಿರವು ಅರ್ಥಪೂರ್ಣ, ಅಗತ್ಯದ ಕಾರ್ಯಕ್ರಮ: ಯೆನೆಪೊಯ ವೈ.ಅಬ್ದುಲ್ ಕುಂಞಿ

ಮಂಗಳೂರು: ಮುಸ್ಲಿಮರ ಐದು ಪ್ರಮುಖ ಧಾರ್ಮಿಕ ವಿಧಿ ವಿಧಾನಗಳಲ್ಲಿ ಹಜ್ ಯಾತ್ರೆಯೂ ಒಂದಾಗಿರುತ್ತದೆ. ಹಜ್ ಯಾತ್ರೆ ಮಾಡಬೇಕೆಂದು ಪ್ರತಿಯೊಬ್ಬನ ಕನಸಾಗಿರುತ್ತದೆ. ಹಜ್ ಯಾತ್ರಿಕರಿಗೆ ಏರ್ಪಡಿಸಲಾದ ತರಬೇತಿ ಶಿಬಿರವು ಅರ್ಥಪೂರ್ಣ ಮತ್ತು ಅಗತ್ಯವಾದ ಕಾರ್ಯಕ್ರಮವಾಗಿದೆ ಎಂದು ಯನೆಪೊಯ ಪರಿಗಣಿತ ವಿವಿ ಕುಲಪತಿ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ ಹೇಳಿದ್ದಾರೆ.
ಹಜ್ ಕಮಿಟಿ ಆಫ್ ಇಂಡಿಯಾ ಮೂಲಕ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಎಕ್ಕೂರಿನ ಇಂಡಿಯಾನ ಕನ್ವೆನ್ಶನ್ ಸೆಂಟರ್ನಲ್ಲಿ ಮಂಗಳವಾರ ಆಯೋಜಿಸಲಾದ ಹಜ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಜ್ ಎಂದರೆ ಕಾಬಾಕ್ಕೆ ಪ್ರಯಾಣ ಮಾಡುವ ಪವಿತ್ರ ಯಾತ್ರೆಯಾಗಿರುತ್ತದೆ. ಮುಸ್ಲಿಮರು ತಮ್ಮ ಎಲ್ಲ ಲೌಕಿಕ ಪಾಪಗಳಿಂದ ತಮ್ಮ ಆತ್ಮವನ್ನು ಶುದ್ಧೀಕರಿಸಲು ಕೈಗೊಳ್ಳುವ ಸುದೀರ್ಘ ಯಾತ್ರೆ ಇದಾಗಿರುತ್ತದೆ ಎಂದರು.
ಹಜ್ ಯಾತ್ರೆಯ ವೇಳೆ ಬೇಡವಾದ ವಿಷಯಗಳನ್ನು ಮಾತನಾಡಿ ಸಮಯವನ್ನು ಕಳೆದುಕೊಳ್ಳುವುದು ಬಹಳ ತಪ್ಪು. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು. ಎಲ್ಲ ಹಜ್ ಯಾತ್ರಿಕರು ಈ ಯಾತ್ರೆಯಲ್ಲಿ ಸದಾ ಪರಮಾತ್ಮನ ಧ್ಯಾನದಲ್ಲಿರ ಬೇಕಾಗಿರುವುದು ಅಗತ್ಯ. ಹಜ್ ಯಾತ್ರೆಯ ನಿಯಮಗಳ ಪ್ರಕಾರ ಎಲ್ಲ ಹಜ್ ಯಾತ್ರಿಕರು ಲಸಿಕೆ ಪಡೆದು ಕೊಳ್ಳಬೇಕಾಗಿದೆ. ಮುಂದೆ ಲಸಿಕೆ ವ್ಯವಸ್ಥೆಯನ್ನು ಮಾಡಲಾಗುವುದು. ಈ ಬಾರಿ ರಾಜ್ಯ ಹಜ್ ಕಮಿಟಿ ಸದಸ್ಯ ಆದೂರು ತಂಙಳ್ ಅವರು ಮಂಗಳೂರಿನ ಹಜ್ ಯಾತ್ರಿಕರಿಗೆ ಯಾತ್ರೆಯ ವೇಳೆ ಯಾವುದೇ ತೊಂದರೆಯಾಗದಂತೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಆದೂರು ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತರಬೇತಿ ಶಿಬಿರ ಯಶಸ್ವಿಯಾಗಿದ್ದು,
ದೇವರ್ಶೋಲ ಅಬ್ದುಸ್ಸಲಾಮ್ ಮುಸ್ಲಿಯಾರ್ ಮತ್ತು ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು ಕಾರ್ಯಾ ಗಾರದಲ್ಲಿ ಹಜ್ ಯಾತ್ರೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಪಂಪ್ವೆಲ್ನ ಮಜ್ಜಿದ್ ತಕ್ವಾದ ಖತೀಬ್ ಯಾಸೀರ್ ಸಖಾಫಿ ಅಲ್ ಅಝ್ಝರಿ ,ದ.ಕ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ , ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ , ಪ್ರಮುಖರಾದ ಸಿ. ಮಹಮೂದ್, ಅಹ್ಮದ್ ಬಾವಾ, ಸಿಎಚ್ ಉಳ್ಳಾಲ, ಬಿ.ಎಸ್.ಬಶೀರ್, ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್, ಶಿಯಾಬ್ ತಂಙಳ್ ಮದಕ, ಸಿ.ಮಹಮ್ಮದಾಲಿ ಸಖಾಫಿ ಸುರಿಬೈಲು , ರಾಜ್ಯ ಹಜ್ ಕಮಿಟಿ ಅಧಿಕಾರಿ ಮುಯರ್ ಬಾಷಾ, ಶೈಖ್ ಮುಸ್ತಾಕ್ ತಂಙಳ್ ಚಟ್ಟೆಕಲ್ಲು ಉಪಸ್ಥಿತರಿದ್ದರು.
1500ಕ್ಕೂ ಅಧಿಕ ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಎಸ್.ಎಂ.ರಶೀದ್ ಹಾಜಿ ಸ್ವಾಗತಿಸಿದರು. ಅಳಿಕೆ ಮದನಿ ಉಸ್ತಾದ್ ವಂದಿಸಿದರು.







