ನೇತ್ರಾವತಿ ನದಿಗೆ ಕೇರಳದಿಂದ ತ್ಯಾಜ್ಯ ಪ್ರಕರಣ ಗಂಭೀರವಾಗಿದ್ದು, ಕ್ರಮ ಕೈಗೊಳ್ಳಲಾಗುವುದು: ನರೇಂದ್ರಸ್ವಾಮಿ

File Photo
ಮಂಗಳೂರು, ಫೆ. 22: ನಗರದ ನೇತ್ರಾವತಿ ನದಿಗೆ ಕೇರಳದಿಂದ ಘನ ಹಾಗೂ ದ್ರವ ತ್ಯಾಜ್ಯ ತಂದು ಸುರಿಯುತ್ತಿರುವ ಪ್ರಕರಣ ಗಂಭೀರ ವಿಚಾರವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದಿಂದ ನೇತ್ರಾವತಿಗೆ ದ್ರವ ತ್ಯಾಜ್ಯ ಸುರಿಯುತ್ತಿರುವ ಎರಡು ವಾಹನಗಳನ್ನು ಈಗಾಗಲೇ ಪೊಲೀಸ್ ಇಲಾಖೆ ವಶಪಡಿಸಿಕೊಂಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಲಾಗಿದೆ. ಬಯೋಮೆಡಿಕಲ್ ವೇಸ್ಟ್ ಕೂಡಾ ಡಂಪ್ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲೂ ಗಡಿ ಪ್ರದೇಶಗಳಲ್ಲಿ ಕೇರಳ, ತಮಿಳುನಾಡು ರಾಜ್ಯಗಳಿಂದ ತ್ಯಾಜ್ಯ ತಂದು ಸುರಿಯಲಾ ಗುತ್ತಿದೆ. ಮಂಗಳೂರಿನಲ್ಲಿ ಕೇರಳದಿಂದ ತ್ಯಾಜ್ಯವನ್ನು ತಂದು ನದಿಗೆ ಬಿಸಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಕಾನೂನು ಜಾರಿಗೆ ಎಲ್ಲರೂ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಮಂಗಳೂರಿನಲ್ಲಿ ಮುಂದಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಅವರು ಹೇಳಿದರು.