ಕೆಲವು ಸಾಹಿತಿಗಳ ಬಗ್ಗೆ ಹೇಳದಿರುವುದೇ ಉತ್ತಮ: ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ
ಸಾಹಿತಿ-ಸಾಹಿತ್ಯ ರಸ ಪ್ರಸಂಗಗಳು-ಗೋಷ್ಠಿ

ಕೊಣಾಜೆ, (ಬಿ.ಎಂ.ಇದಿನಬ್ಬ ವೇದಿಕೆ), ಫೆ.22: ಸಾರ್ವಜನಿಕವಾಗಿ ಕೆಲವು ಸಾಹಿತಿಗಳ ಬರಹ, ಮಾತು, ಹೇಳಿಕೆಗೂ ಅವರ ವೈಯಕ್ತಿಕ ಬದುಕಿಗೂ ಅಜಗಜಾಂತರವಿದೆ. ಅಂತಹ ಸಾಹಿತಿಗಳ ಬಗ್ಗೆ ಏನನ್ನೂ ಹೇಳದಿರುವುದೇ ಉತ್ತಮ ಎಂದು ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಣಾಜೆಯ ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ 27ನೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಱಸಾಹಿತಿ-ಸಾಹಿತ್ಯ ರಸ ಪ್ರಸಂಗಗಳು ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಶಿವರಾಮ ಕಾರಂತರು ಮುಂಗೋಪಿಯಾದರೂ ಕೂಡ ಅವರಲ್ಲಿ ಹಾಸ್ಯಪ್ರಜ್ಞೆ ಇತ್ತು. ಸಂದರ್ಭಕ್ಕೆ ತಕ್ಕಂತೆ ಅವರಾಡುವ ಗಂಭೀರ ಮಾತು, ಚಾಟಿಯಲ್ಲೂ ಹಾಸ್ಯವಿರುತ್ತಿತ್ತು. ಅನಂತಮೂರ್ತಿಯ ವ್ಯಕ್ತಿತ್ವವೇ ವಿಚಿತ್ರವಾಗಿದೆ. ನಿಷ್ಠುರವಾದಿ ಯಾಗಿದ್ದರೂ ಸ್ವಲ್ಪಮಟ್ಟಿನ ಹೊಂದಾಣಿಕೆಯ ಸ್ವಭಾವ ಅವರದ್ದಾಗಿತ್ತು ಎಂದು ಜಯಪ್ರಕಾಶ ಮಾವಿನಕುಳಿ ಹೇಳಿದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ ಸಾಹಿತಿಗಳಾದ ಶಿವರಾಮ ಕಾರಂತ, ಚಂದ್ರಶೇಖರ ಪಾಟೀಲ್, ಜಿ.ಎಚ್. ನಾಯಕ್ರ ಮಾತು-ಕೃತಿಯಲ್ಲಿ ಹಾಸ್ಯ ಹೊಕ್ಕಾಗಿತ್ತು. ಅದನ್ನು ರಸವತ್ತಾಗಿ ಸ್ವೀಕರಿಸಲಾಗುತ್ತಿತ್ತು. ಆದರೆ ಈಗ ಸಾಹಿತಿಗಳ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಿ ಮುಗಿಬೀಳುವ ಸಾಧ್ಯತೆಯೇ ಹೆಚ್ಚಿವೆ. ಕರಾವಳಿ ಭಾಗದ ಸಾಹಿತ್ಯ ಗಳಲ್ಲಿ ಹಾಸ್ಯ ಎಂಬುದು ಕಾಲಹರಣ ಎಂಬಂತಾಗಿದೆ. ಮೆದುಳಿಗೆ ಮೇವು ನೀಡುವ ಹಾಸ್ಯ ಕಡಿಮೆಯಾಗುತ್ತಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ ತಾನು ಬೇರೆ ಬೇರೆ ಮಾಧ್ಯಮಗಳಿಗೆ ಸಾಹಿತಿಗಳನ್ನು ಸಂದರ್ಶನ ಮಾಡಲು ಹೋದಾಗಲೆಲ್ಲಾ ಅನೇಕ ಹಾಸ್ಯದ ಮಾತುಗಳನ್ನು ಕೇಳಿದ್ದೇನೆ. ಆ ಹಾಸ್ಯದಲ್ಲೂ ಮಾರ್ಮಿಕತೆ ಇತ್ತು ಎಂದರು.
ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಿ.ಪ್ರಭಾಕರ ಶಿಶಿಲ, ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಸಮನ್ವಯಕಾರರಾಗಿ ಸಹಕರಿಸಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಐದು ನಿರ್ಣಯಗಳ ಮಂಡನೆ
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಿ. ಪ್ರಭಾಕರ ಶಿಶಿಲ ಅವರ ಉಪಸ್ಥಿತಿ ಯಲ್ಲಿ ಶನಿವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಐದು ನಿರ್ಣಯಗಳನ್ನು ಮಂಡಿಸಲಾಯಿತು. ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ನಿರ್ಣಯ ಮಂಡಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
1. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಂಜೂರಾದ ಹುದ್ದೆಗಳು ಶಿಕ್ಷಕರ ನಿವೃತ್ತಿಯಿಂದ ಖಾಲಿಯಾಗಿದೆ. ಹಲವು ವರ್ಷಗಳಿಂದ ಆ ಹುದ್ದೆಗೆ ನೇಮಕಾತಿಯಾಗಿಲ್ಲ. ಈಗಾಗಲೇ 70 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಆದ್ದರಿಂದ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು.
2. ಅನುದಾನಿತ ಶಾಲೆಗಳಲ್ಲಿ ಹತ್ತಾರು ವರ್ಷಗಳಿಂದ ಯಾವುದೇ ಹುದ್ದೆಯನ್ನು ಭರ್ತಿ ಮಾಡಿಲ್ಲ. ಪರಿಣಾಮ ಹೆಚ್ಚಿನ ಶಾಲೆಗಳು ಶಿಕ್ಷಕರ ಕೊರತೆಯಿಂದ ಮುಚ್ಚಲ್ಪಟ್ಟಿವೆ. ಹಾಗಾಗಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹುದ್ದೆಗಳನ್ನು ತುಂಬದೆ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳು ಆಕರ್ಷಿತರಾಗುತ್ತಿದ್ದಾರೆ.
3. ಕನ್ನಡ ಶಾಲೆಗಳಲ್ಲಿ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ ಇನ್ನಿತರ ನೂರಾರು ಕೆಲಸಗಳು ಶಿಕ್ಷಕರ ಮೇಲೆ ಒತ್ತಡ ಹೆಚ್ಚಿಸುವುದರಿಂದ ಬೋಧನೆಗೆ ಕಾಲವಕಾಶ ಸಿಗುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿವೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಸರಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಓರ್ವ ಗುಮಾಸ್ತನನ್ನು ಕಡ್ಡಾಯ ವಾಗಿ ನೇಮಿಸಬೇಕು.
4. ಕರ್ನಾಟಕದ ಖಾಸಗಿ ಡೀಮ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣದ ಪದವಿ ತರಗತಿಗಳಲ್ಲಿ ಕನ್ನಡ ಭಾಷಾ ಕಲಿಕೆ ಹಾಗೂ ಕನ್ನಡ ಐಚ್ಛಿಕ ವಿಷಯಗಳನ್ನು ಪಠ್ಯಕ್ರಮದಲ್ಲಿ ಕೈ ಬಿಡುತ್ತಿರುವುದು ಖಂಡನೀಯ. ಪದವಿಯಲ್ಲಿ ನಾಲ್ಕು ಸೆಮಿಸ್ಟಾರ್ ಗಳಲ್ಲಿ ಕನ್ನಡವನ್ನು ಬೋಧಿಸುವುದನ್ನು ಕಡ್ಡಾಯ ಮಾಡಬೇಕು.
5.ಕರ್ನಾಟಕ ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಐಚ್ಚಿಕವನ್ನು ಕಡ್ಡಾಯ ಮಾಡಬೇಕು.