ಕರಂಗಲ್ಪಾಡಿ: ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ

ಮಂಗಳೂರು: ನಗರದ ಕರಂಗಲ್ಪಾಡಿಯ ಎಸ್ಸೆಲ್ ಚೇಂಬರ್ ಕಟ್ಟಡದ ತಳ ಅಂತಸ್ತಿನ ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ಘಟಿಸಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ತೆರಳಿ ಬೆಂಕಿ ನಂದಿಸಿದೆ. ಆದಾಗ್ಯೂ ವಿದ್ಯುತ್ ನಿಯಂತ್ರಣ ಕೊಠಡಿಯು ಭಾಗಶಃ ಸುಟ್ಟು ಕರಕಲಾಗಿದೆ.
ಮಧ್ಯಾಹ್ನ ಸುಮಾರು 1:30ಕ್ಕೆ ಕಟ್ಟಡದ ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಏಕಾಏಕಿ ಸ್ಫೋಟದ ಸದ್ದು ಕೇಳಿಸಿತು ಎನ್ನಲಾಗಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಕಟ್ಟಡದ ಉಸ್ತುವಾರಿ ವಹಿಸಿಕೊಂಡವರು ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಅದರಂತೆ ಅಗ್ನಿಶಾಮಕದಳದ ವಿಭಾಗೀಯ ಅಧಿಕಾರಿ ಭರತ್ ಕುಮಾರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆ. ಅದಲ್ಲದೆ ಕದ್ರಿಯ ಅಗ್ನಿಶಾಮಕದಳ ವಾಹನವೂ ಆಗಮಿಸಿ ಸಹಕರಿಸಿತ್ತು. ಆದರೆ ವಿದ್ಯುತ್ ನಿಯಂತ್ರಣ ಘಟಕ, ಪರಿಕರಗಳು ಸಂಪೂರ್ಣ ಸುಟ್ಟುಹೋಗಿವೆ.
ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್, ಅಂಗಡಿಗಳು, ಸೂಪರ್ ಮಾರ್ಕೆಟ್, ವಕೀಲರ ಕಚೇರಿಗಳನ್ನು ಮುಚ್ಚಲಾ ಯಿತು. ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅನಾಹುತ ಸಂಭವಿಸಿದ್ದಾಗಿ ಅಗ್ನಿಶಾಮಕದಳ ಅಧಿಕಾರಿಗಳು ತಿಳಿಸಿದ್ದಾರೆ.





