ಶಿಕ್ಷಣದ ಜೊತೆ ಕೌಶಲವೂ ಮುಖ್ಯ: ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್
ಬ್ಯಾರೀಸ್ ಫೆಸ್ಟಿವಲ್-2025ಕ್ಕೆ ಚಾಲನೆ

ಮಂಗಳೂರು, ಎ.19: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಬ್ಯಾರೀಸ್ ಫೆಸ್ಟಿವಲ್-2025 (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ ಉದ್ಯೋಗ ಮೇಳದ ಪ್ರಯೋಜನವನ್ನು ನಿರುದ್ಯೋಗಿಗಳು ಪಡೆಯಬೇಕು. ಆವಾಗ ಮಾತ್ರ ಸಂಘಟಕರ ಶ್ರಮ ಸಾರ್ಥಕವಾಗಲಿದೆ. ಉದ್ಯೋಗ ಸಿಗದವರು ಯಾವ ಕಾರಣಕ್ಕೂ ನಿರಾಶರಾಗ ಬಾರದು. ಕೇವಲ ಶಿಕ್ಷಣ ಪಡೆದರೆ ಸಾಲದು. ಕೌಶಲವೂ ಮುಖ್ಯ. ಅದನ್ನು ಅಭ್ಯರ್ಥಿಗಳು ಕರಗತ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೌಹಾರ್ದ ಸಮ್ಮಿಲನದ ಕಲ್ಪನೆಯಡಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಲ್ಲಿ ಸಮಾಜದ ಸರ್ವರೂ ಪಾಲ್ಗೊಳ್ಳಬೇಕು. ದ.ಕ.ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಹಾಗಾಗಿ ಇಲ್ಲಿ ಉದ್ಯೋಗ ಸೃಷ್ಟಿಸುವ ವಾತಾವರಣ ರೂಪುಗೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ ಬ್ಯಾರೀಸ್ ಫೆಸ್ಟಿವಲ್ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇಂದಿಲ್ಲಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅದಕ್ಕೆ ಸಾಕ್ಷಿಯಾಗಿದ್ದಾರೆ. ಸೌಹಾರ್ದ ಸಮಾಜ ರೂಪಿಸುವುದೇ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಬೆಂಗಳೂರು ಇದರ ನಿರ್ದೇಶಕಿ ಕೌಸರ್ ನಿಸಾರ್ ಅಹ್ಮದ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಎನ್ಆರ್ಐ ಫೋರಂನ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಉದ್ಯಮಿಗಳಾದ ಮುಸ್ತಫಾ ಭಾರತ್, ಝಕರಿಯಾ ಜೋಕಟ್ಟೆ, ಬಿಜೈ ಚರ್ಚ್ನ ಧರ್ಮಗುರು ರೆ.ಫಾ. ನಾರ್ಮನ್ ಡಿಸೋಜ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕಾಂಗ್ರೆಸ್ ಮುಖಂಡ ಪದ್ಮರಾಜ್ ರಾಮಯ್ಯ ಮಾತನಾಡಿದರು.
ನ್ಯಾಷನಲ್ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್ನ ರಾಜ್ಯ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ, ನಸೀಮಾ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಯು.ಟಿ. ಝುಲ್ಫಿಕರ್ ಅಲಿ, ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್, ಉದ್ಯಮಿಗಳಾದ ಶರೀಫ್ ವೈಟ್ಸ್ಟೋನ್, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಬೆಂಗಳೂರು ಇದರ ವೈಸ್ಚೆಯರ್ಮೆನ್ ಸುಹೈಲ್ ಅಹ್ಮದ್, ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ಅಧ್ಯಕ್ಷ ಇಕ್ಬಾಲ್ ಪರ್ಲಿಯಾ, ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಶೇಖ್ ಇರ್ಫಾನಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟೀಕೇಸ್ ಗ್ರೂಪ್ನ ಸ್ಥಾಪಕ ಉಮರ್ ಟೀಕೆ ಅವರಿಗೆ ಮೋಟಿವೇಶನಲ್ ಅವಾರ್ಡ್ ನೀಡಿ ಗೌರವಿಸಲಾಯಿತು. ಧರ್ಮಗುರು ಎಸ್.ಬಿ. ಮುಹಮ್ಮದ್ ದಾರಿಮಿ ದುಆಗೈದರು. ಸಂಘಟಕಿ ಯು.ಟಿ. ಫರ್ಝಾನ ಸ್ವಾಗತಿಸಿದರು. ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಬಿಸಿನೆಸ್ ಮೀಟ್ನಲ್ಲಿ ಮಾತನಾಡಿದ ಉಮರ್ ಟೀಕೆ ಬ್ಯಾರಿಗಳಿಗೂ ವ್ಯಾಪಾರಕ್ಕೂ ಅವಿನಾಭಾವ ಸಂಬಂಧವಿದೆ. ಕಸಬಿನ ಜೊತೆ ಅಭಿವೃದ್ಧಿಯೂ ಹೊಂದಿದ ಜನಾಂಗ ಬ್ಯಾರಿ ಆಗಿದೆ. ಬ್ಯಾರಿಗಳು ಧೈರ್ಯಶಾಲಿಗಳು. ಹಾಗಾಗಿ ಬ್ಯಾರಿಗಳು ಕೆಲಸ ಮಾಡುವುದು ಮಾತ್ರವಲ್ಲ ಉದ್ಯೋಗ ಸೃಷ್ಟಿಸುವಲ್ಲಿಯೂ ಇಂದು ಮುಂಚೂಣಿಯಲ್ಲಿದ್ದಾರೆ ಎಂದರು.
ಉತ್ಸವದ ಅಂಗವಾಗಿ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ ದೇಶ, ವಿದೇಶಗಳ 100ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿವೆ. ಸುಮಾರು 5,000ಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ ದ್ದರು. ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ, ವೈದ್ಯಕೀಯ ಮತ್ತು ರಕ್ತದಾನ ಶಿಬಿರ, ಬಿಸಿನೆಸ್ ಮೀಟ್, ಮೆಹಂದಿ ಸ್ಪರ್ಧೆಗಳು, ವಿವಿಧ ಗೋಷ್ಠಿಗಳು, ಯುವ ಸಮೂಹಕ್ಕೆ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ಮತ್ತು ದಫ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹುಸೈನ್ ಕಾಟಿಪಳ್ಳ ಬಳಗದಿಂದ ಬಹುಭಾಷಾ ಸೌಹಾರ್ದ ಸಂಗೀತ ಸಂಗಮ ನಡೆಯಿತು.
ಕವಿ ಬಶೀರ್ ಅಹ್ಮದ್ ಕಿನ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಖಡಕ್ ಕವಿಗೋಷ್ಠಿಯಲ್ಲಿ ಅಶ್ರಫ್ ಅಪೋಲೋ, ತಾಜುದ್ದೀನ್ ಅಮ್ಮುಂಜೆ, ಸರ್ಫ್ರಾಝ್ ಆಲಂಪಾಡಿ, ವಿ. ಇಬ್ರಾಹೀಂ ನಡುಪದವು ಕವನಗಳನ್ನು ವಾಚಿಸಿದರು.
ಬಹುಭಾಷಾ ಕವಿಗೋಷ್ಠಿ ಱಪಾಟ್ಲೇಸ್ನಲ್ಲಿ ಕವಯತ್ರಿಗಳಾದ ರಮ್ಯಾ ಮೂರ್ನಾಡು, ಸಾರಾ ಅಲಿ ಪರ್ಲಡ್ಕ, ಫೆಲ್ಸಿ ಲೋಬೋ, ರಮೀಝಾ ಎಂ.ಬಿ., ಫರ್ಹಾನಾ ಉಳ್ಳಾಲ್, ಆಯಿಶಾ ಪೆರ್ನೆ, ಅಸ್ಮತ್ ವಗ್ಗ ಕವನಗಳನ್ನು ವಾಚಿಸಿದರು. ಶಮೀಮಾ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.







