ಹೊಸಮಜಲು: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಉಪ್ಪಿನಂಗಡಿ: ಮನೆಯವರೆಲ್ಲರೂ ಈಸ್ಟರ್ ಹಬ್ಬಕ್ಕೆಂದು ಚರ್ಚ್ ಗೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಎ.19ರಂದು ರಾತ್ರಿ ನಡೆದಿದೆ.
ಹೊಸಮಜಲು ನಿವಾಸಿ, ಕೃಷಿಕ ಸಿ.ಎ.ಅಬ್ರಹಾಂರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಬ್ರಹಾಂ, ಅವರ ಪತ್ನಿ ಲೀಲಾತಂಬಿ, ಪುತ್ರ ಅನಿಲ್ ಅಬ್ರಹಾಂ ಹಾಗೂ ಇಬ್ಬರು ಮೊಮ್ಮಕ್ಕಳು ಎ.19ರಂದು ಸಂಜೆ 6.30ಕ್ಕೆ ಮನೆಗೆ ಬೀಗ ಹಾಕಿ ಕೊಣಾಲು ಚರ್ಚ್ನಲ್ಲಿ ನಡೆಯುತ್ತಿದ್ದ ಈಸ್ಟರ್ ಹಬ್ಬದ ಕಾರ್ಯಕ್ರಮಕ್ಕೆ ತೆರಳಿದ್ದರು. 11.30ರ ವೇಳೆಗೆ ಅವರು ಮನೆಗೆ ಹಿಂತಿರುಗಿ ಬಂದಿದ್ದು ಈ ವೇಳೆ ಮುಂಬಾಗಿಲು ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯೊಳಗೆ ತೆರಳಿ ಪರಿಶೀಲನೆ ವೇಳೆ ಬೆಡ್ರೂಮ್ನ ಕಪಾಟಿನ ಬೀಗವನ್ನೂ ಮುರಿದು ಅದರಲ್ಲಿದ್ದ ಅಂದಾಜು 8 ಪವನ್ ಚಿನ್ನಾಭರಣ ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಮನೆಯವರು ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎ.20ರಂದು ಬೆಳಿಗ್ಗೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.





