ಸಿಪಿಐ ಪ್ರಥಮ ಪ್ರಧಾನ ಕಾರ್ಯದರ್ಶಿ ಕಾ.ಎಸ್. ಘಾಟೆ ನುಡಿಸ್ಮರಣೆ ಕಾರ್ಯಕ್ರಮ

ಮಂಗಳೂರು: ಸತ್ಯ, ವೈಜ್ಞಾನಿಕತೆ ಇತ್ಯಾದಿಯನ್ನು ಬಚ್ಚಿಟ್ಟು ಸುಳ್ಳು ಅವೈಜ್ಞಾನಿಕತೆ, ಮೂಢನಂಬಿಕೆ ಗಳನ್ನು ಬಿತ್ತರಿಸಿ ಜನರನ್ನು ಮೂಢರಾಗಿಸುವ ಪ್ರಕ್ರಿಯೆ ಮೂಲಕ ದೇಶವನ್ನು ಏಕಾಧಿಪತ್ಯ ಆಡಳಿತಕ್ಕೆ ಬದಲಿಸಲು ಎಲ್ಲಾ ಪ್ರಯತ್ನಗಳು ಇತೀಚಿಗಿನ ವರ್ಷಗಳಲ್ಲಿ ನಡೆಯುತ್ತಿದೆ ಎಂದು ಖ್ಯಾತ ವೈದ್ಯ ಹಾಗೂ ಪ್ರಗತಿಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ಸಿಪಿಐ ದ.ಕ. ಹಾಗೂ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಪಕ್ಷದ ಶತಮಾನೋತ್ಸವ ಹಿನ್ನೆಲೆಯಲ್ಲಿ ವಿಶ್ವ ಕಾರ್ಮಿಕ ದಿನವಾದ ಗುರುವಾರ ನಗರದ ಬಿಜೈಯಲ್ಲಿರುವ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಭವನದಲ್ಲಿ ಕಾ.ಎಸ್. ಘಾಟೆ ಅವರ ನುಡಿಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರಿನ ಸುಪುತ್ರ ಎಸ್. ಘಾಟೆ ಮುಂಬೈಗೆ ತೆರಳಿ ಇತರರಂತೆ ವ್ಯಾಪಾರ ವಹಿವಾಟು ನಡೆಸದೆ, ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸ್ಥಿತಿಗತಿಗಳನ್ನು ಗಮನಿಸಿ ಅವರನ್ನು ದಾಸ್ಯದಿಂದ ಬಿಡುಗಡೆ ಮಾಡುವ ಸಾಹಸಕ್ಕೆ ಮುಂದಾದರು. ಮಾರ್ಕ್ಸ್ವಾದ ಲಿನಿನ್ ವಾದ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತ ಗಳನ್ನು ಆಳವಾಗಿ ಅಭ್ಯಾಸ ಮಾಡಿ ಕಮ್ಯುನಿಸ್ಟ್ ಚಿಂತಕರನ್ನು ಒಗ್ಗೂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ’ವನ್ನು 1925ರಲ್ಲಿ ಕಟ್ಟಿ ಅದರ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು ಎಂದು ಶ್ರಿನಿವಾಸ ಕಕ್ಕಿಲ್ಲಾಯ ಬಣ್ಣಿಸಿದರು.
ಎಸ್. ಘಾಟೆಯ ಸಂಬಂಧಿ ಸುಮನಾ ಘಾಟೆ ಮಾತನಾಡಿ ಅಜ್ಜ ಘಾಟೆಯವರು ಕುಟುಂಬದೊಂದಿಗೆ ಬಹಳ ಆತ್ಮೀಯವಾಗಿದ್ದರು. ಅವರೆಂದರೆ ಎಲ್ಲರಿಗೂ ಪ್ರೀತಿ, ವಿಶ್ವಾಸವಿತ್ತು. ನಾವು ಘಾಟೆಯ ಕುಟುಂಬಸ್ಥರು ಎನ್ನಲು ನಮಗೆ ಹೆಮ್ಮೆ ಇದೆ ಎಂದರು.
ನಿವೃತ್ತ ಪ್ರಾಂಶುಪಾಲ, ಜನಪರ ಚಿಂತಕ ಡಾ. ವಸಂತ ಕುಮಾರ್ ಮಾತನಾಡಿ ಯುವಪೀಳಿಗೆ ದೇಶದ ಭವಿಷ್ಯ.ಆದರೆ ಅವರನ್ನು ಧರ್ಮ, ಜಾತಿ, ರಾಷ್ಟ್ರೀಯತೆ ಹೆಸರಲ್ಲಿ ದಾರಿತಪ್ಪಿಸಲಾಗುತ್ತಿದೆ. ಅವರನ್ನು ಸರಿದಾರಿಗೆ ತರುವಲ್ಲಿ ನಾವು ಯಶಸ್ವಿಯಾದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಇಲ್ಲದಿದ್ದರೆ ದುರಂತ ವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಪಿಐ ದ.ಕ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖರ ಬಿ. ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಬೇರಿಂಜೆ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಬಂಟ್ವಾಳ ವಂದಿಸಿದರು.