ಮಣಿಪಾಲ: ಕೆಎಂಸಿ ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನಾಚರಣೆ

ಮಣಿಪಾಲ, ಮೇ 5: ಆಸ್ಪತ್ರೆಗಳಲ್ಲಿ ಹಾಗೂ ಎಲ್ಲಾ ಆರೋಗ್ಯ ಕೇಂದ್ರ ಗಳಲ್ಲಿ ಕೈ ನೈರ್ಮಲ್ಯ ಮಾನ ದಂಡಗಳ ಕುರಿತು ಜಾಗೃತಿ ಮೂಡಿಸಲು ಮೇ 5ರಂದು ಆಚರಿಸಲಾಗುವ ವಿಶ್ವ ಕೈ ನೈರ್ಮಲ್ಯ ದಿನವನ್ನು ಇಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಆಚರಿಸಲಾದ ವಿಶ್ವ ಕೈ ನೈರ್ಮಲ್ಯ ದಿನದಲ್ಲಿ ವಿಭಾಗ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಆದ ಡಾ. ಅಶ್ವಿನಿಕುಮಾರ್ ಮಾತನಾಡಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಕೈಗಳನ್ನು ಮುಖ್ಯವಾಗಿ ರೋಗಿಗ ಳೊಂದಿಗೆ ವ್ಯವಹರಿಸುವಾಗ ವೈಜ್ಞಾನಿಕವಾಗಿ ಏಳು ಹಂತಗಳಲ್ಲಿ ಸ್ವಚ್ಛ ನೀರು ಹಾಗೂ ಸೋಪ್ ಬಳಸಿ ತೊಳೆದರೆ ಮಾತ್ರ ಕೈಗಳಲ್ಲಿರುವ ಸೋಂಕಾಣುಗಳು ನಾಶಗೊಳ್ಳುವುದು. ಇದು ರೋಗಿಗಳು ಹಾಗೂ ವೈದ್ಯರ ಆರೋಗ್ಯ ಕಾಪಾಡಿ ಕೊಳ್ಳಲು ಸಹಾಯಕವಾಗುವುದು. ಅಲ್ಲದೇ ಅನಗತ್ಯ ಆ್ಯಂಟಿ ಬಯೋಟಿಕ್ಸ್ ಗಳ ಬಳಕೆ ಅಥವಾ ಸಾವುಗಳು ಉಂಟಾಗುವುದನ್ನು ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ವೈಜ್ಞಾನಿಕವಾಗಿ ಪ್ರಾತ್ಯಕ್ಷಿತೆ ವಿಡಿಯೋಗಳ ಮೂಲಕ ತರಬೇತಿ ನೀಡಲಾಯಿತು. ಸಹ ಪ್ರಾಧ್ಯಾಪಕಿ ಡಾ. ದಿವ್ಯ ಪೈ ತರಬೇತಿ ನೀಡಿದರು.





