'ಏಮ್ಸ್' ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ಲಾ ಮಾದುಮೂಲೆ

ಮಂಗಳೂರು: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಕಡಬದ ಏಮ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ) ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಖ್ಯಾತ ಲೆಕ್ಕ ಪರಿಶೋಧಕ, ಸಾಮಾಜಿಕ, ಧಾರ್ಮಿಕ ಮುಂದಾಳು ಅಬ್ದುಲ್ಲಾ ಮದುಮೂಲೆ ಅವರು ಆಯ್ಕೆಯಾಗಿದ್ದಾರೆ.
ಅಬುಧಾಬಿಯ ಪ್ರತಿಷ್ಠಿತ ಕಂಪೆನಿಯ ಫೈನಾನ್ಸ್ ವಿಭಾಗದ ಉನ್ನತ ಅಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅಬ್ದುಲ್ಲಾ ಮಾದುಮೂಲೆಯವರು ಅಬುಧಾಬಿ ಇಂಡಿಯನ್ ಸ್ಕೂಲ್ ನ ಬೋರ್ಡ್ ಸದಸ್ಯರಾಗಿ, ಎಸ್ ಡಿ ಎಂ ಕಾಲೇಜು ಉಜಿರೆಯ ಗ್ಲೋಬಲ್ ಅಲುಮ್ನಿ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಉಪ್ಪಿನಂಗಡಿಯ ಫೌಝಿಯಾ ಬಿ ಎಸ್ ಹಾಗು ಕಡಬದ ಸಮೀರಾ ಕೆ ಎ ಎಂಬ ಇಬ್ಬರು ಸ್ನೇಹಿತೆಯರು ಪ್ರಾರಂಭಿಸಿದ ಏಮ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಪ್ರೌಢ ಶಾಲೆಯಿಂದ ಪದವಿವರೆಗೆ ಶಿಕ್ಷಣ ನೀಡುತ್ತಿದೆ. ಮಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ. ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿದ್ದು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.







