ಮಂಗಳೂರು ವಿವಿ: ರಾಷ್ಟ್ರೀಯ ಕಾರ್ಯಾಗಾರ ಸಮಾರೋಪ

ಕೊಣಾಜೆ: ಮಾಧ್ಯಮ ಕ್ಷೇತ್ರಗಳಲ್ಲಿ ಇಂದಿಗೂ ವಿಪುಲ ಅವಕಾಶಗಳಿವೆ. ಆದರೆ ಇಂದಿನ ಆಧುನಿಕತೆಯ ಸವಾಲು, ಆತಂಕದ ನಡುವೆ ಇದಕ್ಕೆ ಪೂರಕವಾಗಿ ನಮ್ಮೊಳಗೆ ಜ್ಞಾನ, ಕೌಶಲಗಳ ಜೊತೆಗೆ ಸೃಜನಶೀಲ ತೆಯನ್ನು ಬೆಳೆಸಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಸಿಬಂತಿ ಪದ್ಮನಾಭ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯ (ಪಿ ಎಂ ಉಷಾ) ಪ್ರಾಯೋಜಕತ್ವದಲ್ಲಿ ವಿಶ್ವವಿದ್ಯಾನಿಲಯದ ಡಾ. ಯು ಆರ್ ರಾವ್ ಸಭಾಂಗಣದಲ್ಲಿ 'ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು' ಎಂಬ ವಿಷಯಾಧಾರಿತವಾಗಿ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಾವೀಗ ಆರ್ಟಿಫಿಸಿಯಲ್ ಇಂಟಲಿಜೆನ್ಸಿ (ಕೃತಕ ಬುದ್ದಿಮತ್ತೆ) ಕಾಲದಲ್ಲಿದ್ದೇವೆ. ಅದು ಬರಿ ಲೇಖನ ಮಾತ್ರವಲ್ಲ ಕವನವನ್ನೂ ಬರೆಯುವುದರಿಂದ ಹಿಡಿದು ಎಲ್ಲವನ್ನು ಪರ್ಯಾಯವಾಗಿ ಮಾಡಿಕೊಡುವ ಹಂತಕ್ಕೆ ಬಂದಿದೆ. ನಮ್ಮ ಕೆಲಸಗಳನೆಲ್ಲ ಅದು ಕಸಿಯುವ ಆತಂಕವೂ ಇದೆ. ಹಿಂದೆ ಕಂಪ್ಯೂಟರ್ ಬಂದಾಗಲೂ ಉದ್ಯೋಗ ಕಸಿಯುವ ಆತಂಕ ಎದುರಾಗಿತ್ತು. ಎಲ್ಲಾ ಸವಾಲಿಗೆ ಪರ್ಯಾಯವಾಗಿ ತಯಾರಾಗಬೇಕಾದ ಅಗತ್ಯವಿದೆ ಎಂದರು.
ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ ಕೊಣಾಜೆ ಅವರು ಮಾತನಾಡಿ, ವಿದ್ಯಾರ್ಥಿಗಳು ಆಧುನಿಕತೆಯಲ್ಲಿ ಬಹು ಕೌಶಲ್ಯ, ಹೊಸತನದೊಂದಿಗೆ ಬೆಳೆಯಬೇಕಾದ ಅನಿವಾರ್ಯತೆ ಇದೆ ಎಂದರು.
ವಿವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮಾಧವ ಎಂ.ಕೆ ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆದ ಕಾರ್ಯಾಗಾರ ಅರ್ಥಪೂರ್ಣವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ ಎಂದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದಲ್ಲಿ ಮಾಧ್ಯಮ ಪಾತ್ರ ಮಹತ್ತರವಾದುದು. ಈ ಕ್ಷೇತ್ರದಲ್ಲಿ ದುಡಿಯಬೇಕಾ ದರೆ ಬಹಳ ಮುಖ್ಯ ಎಚ್ಚರಿಕೆಯೂ ಇರಬೇಕು ಜೊತೆಗೆ ನಮ್ಮ ಬರವಣಿಗೆಯೂ ಜವಾಬ್ಧಾರಿಯುತವಾಗಿರಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ ಅವರು ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಚಾಲಕರಾದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಡಾ.ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.