ಮಂಗಳೂರು | ಕೆಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಆಯ್ಕೆ

ಮಂಗಳೂರು, ಮೇ 12: ಮಂಗಳೂರು ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26ನೇ ಸಾಲಿನ ಕೇಂದ್ರೀಯ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ನೂತನ ಕೇಂದ್ರೀಯ ಅಧ್ಯಕ್ಷರ ಆಯ್ಕೆ ಸರ್ವಾನುಮತದಿಂದ ನಡೆಯಿತು.
ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕ ಡಾ.ಜೆ.ಬಿ.ಸಲ್ಡಾನ ಚುನಾವಣೆಯ ಮೊದಲು ನೂತನ ಪೋಪ್ ಲಿಯೋ 14ರ ಚುನಾವಣೆಯನ್ನು ಸ್ಮರಿಸಿ ಅದೇ ರೀತಿ ಪ್ರಾರ್ಥನೆಯ ಮೂಲಕ ಚುನಾವಣೆ ನಡೆಸಲು ಮಾರ್ಗದರ್ಶನ ನೀಡಿದರು.
ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಥಮ ಉಪಾಧ್ಯಕ್ಷ ಲಾರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೇರೆಬೈಲ್, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್ ಮೂಡುಬಿದಿರೆ ಅಲಂಗಾರ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ ರಾಣಿಪುರ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹ ಚುನಾವಣಾಧಿಕಾರಿಯಾಗಿ ಮತ್ತು ಜೆರಿ ಪೀಟರ್ ರೊಡ್ರಿಗಸ್ ಚುನಾವಣಾ ವೀಕ್ಷಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.