ಬಂಟ್ವಾಳ: ತಾಜುಲ್ ಉಲಮಾ ರಿಲೀಫ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮ್ಮಿಲನ, ಶೈಕ್ಷಣಿಕ ಕಾರ್ಯಾಗಾರ

ಬಂಟ್ವಾಳ : ತಾಜುಲ್ ಉಲಮಾ ರಿಲೀಫ್ & ಚಾರಿಟೇಬಲ್ ಟ್ರಸ್ಟ್ (ರಿ) ದ.ಕ. ಇದರ ಮಾಸಿಕ ರೇಷನ್ ಕಿಟ್ ಪಡೆಯುವ ಫಲಾನುಭವಿ ಕುಟುಂಬಗಳ ಸಮ್ಮಿಲನ ಹಾಗೂ ಶೈಕ್ಷಣಿಕ ಕಾರ್ಯಗಾರವು ಬಂಟ್ವಾಳ ಲಯನ್ಸ್ ಭವನದಲ್ಲಿ ಗುರುವಾರ ನಡೆಯಿತು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ತರಬೇತುದಾರ ಹಾಗೂ ಭಾಷಣಕಾರ ರಫೀಕ್ ಮಾಸ್ಟರ್ ಆತೂರು ಇವರಿಂದ ಮಕ್ಕಳಿಗೆ ತರಗತಿಯು ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಬಡತನವೆನ್ನುವುದು ಶಾಪವಲ್ಲ. ಜೀವನದ ಸವಾಲನ್ನು ಎದುರಿ ಸಲು ಕಲಿಸುವ ವರವಾಗಿದೆ. ಬಾಲ್ಯ ಕಾಲದಲ್ಲಿ ಬಡತನವನ್ನು ಅನುಭವಿಸುವ ಮಕ್ಕಳು ಉಳಿದ ಮಕ್ಕಳಿ ಗಿಂತ ಧೈರ್ಯವಂತ ಹಾಗೂ ಜೀವನದಲ್ಲಿ ಬಂದೆರಗುವ ಸವಾಲನ್ನು ಎದುರಿಸಲು ಶಕ್ತವಾಗಿರುತ್ತಾರೆ. ಹಾಗಾಗಿ, ಬಡತನದ ಬಗ್ಗೆ ಮಕ್ಕಳಲ್ಲಿ ಹತಾಶೆ ಮೂಡಿಸುವ ಬದಲಾಗಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು.
ಕುಲಾಲ್ ಜುಮಾ ಮಸ್ಜಿದ್ ಖತೀಬ್ ಮಸೂದ್ ಸಅದಿ, ಪ್ರಾರ್ಥನೆ ಹಾಗೂ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮುನೀರ್ ಸಖಾಫಿ ಉಳ್ಳಾಲ, ಅಬ್ದುಲ್ ರಶೀದ್ ಮುಸ್ಲಿಯಾರ್, ಮ್ಯಾನೇಜರ್ ಅಲ್ ಮದೀನಾ ಮಂಜನಾಡಿ, ಶರೀಫ್ ಮದನಿ ಪಾಂಡವರಕಲ್ಲು, ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಕರೀಮ್ ಕದ್ಕಾರ್, ತಾಜುಲ್ ಉಲಮಾ ರಿಲೀಫ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಎಸ್ಡಿಎಂಸಿ ಸಮನ್ವಯ ಸಮಿತಿಯ ಮೊಯ್ದೀನ್ ಪೆರ್ನೆ, ಇಲ್ಯಾಸ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ರಾಝಿಕ್ ಬಿಎಮ್ ಸ್ವಾಗತಿಸಿ, ಕರೀಮ್ ಕದ್ಕಾರ್ ಧನ್ಯವಾದ ಅರ್ಪಿಸಿದರು.







