ನೇರಳಕಟ್ಟೆ | ವಿವಾಹ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಕೊಡಾಜೆ ಹಸೈನಾರ್ ಎಂಬವರ ಪುತ್ರ ನೌಶಾದ್ ರ ವಿವಾಹ ಮೇ 22ರಂದು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆದಿದ್ದು, ಈ ವೇಳೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಐಕ್ಯ ವೇದಿಕೆ ಕೊಡಾಜೆ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೆಪೊಯ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ರಫಾ ಪಾಲ್ತಾಡ್, ನವಾಝ್ ಕೊಡಾಜೆ, ಫಾರೂಕ್ ಬುಡೋಳಿ ಹಾಗೂ ಸಲ್ಮಾನ್ ಮಾಣಿ ಇವರ ಸ್ಮರಣಾರ್ಥ ಈ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲ ಮಾತನಾಡಿ, ವಿವಾಹ ಸಮಾರಂಭದ ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿರುವುದು ಶ್ಲಾಘನೀಯ ಎಂದರು.
ಸೈಯದ್ ಹಂಝ ತಂಙಳ್ ಪಾಟ್ರಕೋಡಿ ದುಆ ನೆರವೇರಿಸಿದರು, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಕೆ. ಶ್ರೀಧರ ರೈ ಕುರ್ಲೆತ್ತಿಮಾರು, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೆ. ಮಾಣಿ, ನೇರಳಕಟ್ಟೆ ಸಿ.ಎ. ಬ್ಯಾಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ ಮಾತನಾಡಿದರು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಜನಪ್ರಿಯ ಗಾರ್ಡನ್ ನ ಇಸ್ಮಾಯೀಲ್ ಹಾಜಿ ಕಂಬಳಬೆಟ್ಟು, ಡಾ.ಕೃಷ್ಣ, ಬ್ಲಡ್ ಡೋನರ್ಸ್ ನ ನಿಝಾಮ್ ಬೆಳ್ತಂಗಡಿ, ಇಬ್ರಾಹೀಂ ಹಾಜಿ ಮಾಣಿ, ಇಸ್ಮಾಯೀಲ್ ಮದನಿ ನೇರಳಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಶುಭ ಹಾರೈಸಿದರು. ಯುವ ಕವಿ ಸಲೀಂ ಮಾಣಿ ಕವನ ವಾಚಿಸಿದರು.
ಇದೇ ವೇಳೆ ಮದುಮಗ ನೌಶಾದ್ ಅವರ ತಂದೆ ಹಸೈನಾರ್ ಮಾಣಿ, ಸಹೋದರ ನೌಫಾಲ್ ಅವರನ್ನು ಅಭಿನಂದಿಸಲಾಯಿತು, ಬ್ಲಡ್ ಡೋನರ್ಸ್ ತಂಡ ಮತ್ತು ಶಿಬಿರದಲ್ಲಿ ಭಾಗವಹಿಸಿದ ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಗೌರವಿಸಲಾಯಿತು.
ಐಕ್ಯ ವೇದಿಕೆ ಕೊಡಾಜೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಐಕ್ಯ ವೇದಿಕೆಯ ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 60 ಮಂದಿ ರಕ್ತದಾನ ಮಾಡಿದರು.







