ಅಕ್ರಮ ಒಂಟೆ, ಜಾನುವಾರು ಸಾಗಾಟ ಮತ್ತು ವಧೆ ನಿಯಂತ್ರಿಸಲು ದ.ಕ.ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಸೂಚನೆ

ಮಂಗಳೂರು: ಬಕ್ರೀದ್ ಹಬ್ಬದ ದಿನಗಳಲ್ಲಿ ಅನಧಿಕೃತ ಒಂಟೆ, ಜಾನುವಾರುಗಳ ಸಾಗಾಣಿಕೆ ಹಾಗೂ ಹತ್ಯೆಗಳನ್ನು ತಡೆಗಟ್ಟಲು ರಚಿಸಲಾದ ಜಿಲ್ಲಾ ಸಮಿತಿ ಸಭೆಯು ಸೋಮವಾರ ದ.ಕ.ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂಜಾಗ್ರತಾ ಕ್ರಮವಾಗಿ ಮಾಂಸ ಮಾರಾಟ ಅಂಗಡಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಅಕ್ರಮ ಒಂಟೆ, ಜಾನುವಾರು ಸಾಗಾಟ ಮತ್ತು ವಧೆ ನಿಯಂತ್ರಿಸಲು ಆಯಕಟ್ಟಿನ ಜಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲು ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲು ಸೂಚಿಸಲಾಯಿತು.
ಯಾವುದೇ ಬಗೆಯ ಅಕ್ರಮ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಮಾತಿ ನೀಡಲು ಮತ್ತು ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲು, ಹಬ್ಬದ ಸಂದರ್ಭ ಅನಧಿಕೃತ ಒಂಟೆ, ಜಾನುವಾರು ವಧೆ, ಸಾಗಾಟ ಹಾಗೂ ಅನಧಿಕೃತ ಮಾಂಸ ಮಾರಾಟವನ್ನು ತಡೆಗಟ್ಟುವಂತೆ ಸೂಚಿಸಿದರು.
ಅನಧಿಕೃತ ಜಾನುವಾರು ವಧೆ ಹಾಗೂ ಜಾನುವಾರುಗಳ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿಕೊಂಡವರಿಗೆ 3 ರಿಂದ 10 ವಷರ್ಗಳ ಕಾರಾಗೃಹ ಶಿಕ್ಷೆ ಅಥವಾ 10 ಲಕ್ಷ ರೂ.ವರೆಗಿನ ದಂಡ, ಕಟ್ಟಡಗಳಲ್ಲಿ ಅನಧಿಕೃತ ಒಂಟೆ, ಜಾನುವಾರು ವಧೆಯನ್ನು ಕಂಡು ಬಂದಲ್ಲಿ ಅಂತಹ ಕಟ್ಟಡಗಳನ್ನು ಜಪ್ತಿ ಮಾಡುವ ಅವಕಾಶ ಇದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್, ಮಂಗಳೂರು ನಗರ ಪೊಲೀಸ್ ಉಪಾಯುಕ್ತ ಸಿದ್ಧಾರ್ಥ ಗೋಯಲ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರು, ಮಂಗಳೂರು ತಹಶೀಲ್ದಾರರ ಸಹಿತ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







