ಮಂಗಳೂರು ವಿವಿ ಕುಲಪತಿಯಿಂದ ಬೂಕರ್ ವಿಜೇತೆ ದೀಪಾ ಭಾಸ್ತಿಗೆ ಅಭಿನಂದನೆ

ಮಂಗಳೂರು, ಜೂ.9: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಮಡಿಕೇರಿಯ ಲೇಖಕಿ ದೀಪಾ ಭಾಸ್ತಿ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪಿ.ಎಲ್. ಧರ್ಮ ಅವರು ಮಡಿಕೇರಿಯ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಮಡಿಕೇರಿ ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ಭೇಟಿ ನೀಡಿದ ಕುಲಪತಿ ದೀಪಾ ಭಾಸ್ತಿ ಹಾಗು ಮನೆಯವರೊಡನೆ ಮಾತನಾಡಿ 2004 ರಿಂದ 2006 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡಿದ ದೀಪಾ ಭಾಸ್ತಿ ಅವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಕಾಲೇಜಿನ ದಿನಗಳಿಂದಲೂ ಸಾಹಿತ್ಯದ ಆಸಕ್ತಿ ಹೊಂದಿದ್ದ ದೀಪಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಬಹಳ ವಿಶೇಷವಾದುದು ಎಂದರು.
ದೀಪಾ ಭಾಸ್ತಿಯವರ ಸಾಧನೆಗೆ ಸಹಕಾರ ನೀಡಿದ ಪತಿ ಚೆಟ್ಟೀರ ನಾಣಯ್ಯ ಹಾಗೂ ಪೋಷಕರನ್ನು ಇದೇ ಸಂದರ್ಭ ಕುಲಪತಿ ಅಭಿನಂದಿಸಿದರು. ಹಾಗು ಇದೇ ಸಂದರ್ಭದಲ್ಲಿ ದೀಪಾ ಭಾಸ್ತಿಯವರನ್ನು ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿದರು.
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಕೊಡಗು ಕನ್ನಡ ಭವನದ ನಿರ್ದೇಶಕ ಅರುಣ್ ಕುಮಾರ್ ಪಿ. ಹಾಜರಿದ್ದರು.