ಮುಲ್ಕಿ: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು

ಮುಲ್ಕಿ: ಮನೆಗೆ ಚಿಲಕ ಹಾಕಿ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಾರ್ಯಾಚರಣೆಯಿಂದ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿಯನ್ನು ಕಿಲ್ಪಾಡಿ ರೈಸ್ ಮಿಲ್ ಬಳಿಯ ನಿವಾಸಿ ಧನಂಜಯ ಅಮೀನ್ (66) ಎಂದು ಗುರುತಿಸಲಾಗಿದೆ.
ಮೃತ ಧನಂಜಯ ಅಮೀನ್ ಮೂಲತಃ ಮುಂಬೈ ನಿವಾಸಿಯಾಗಿದ್ದು ಮುಲ್ಕಿ ಸಮೀಪದ ಕಿಲ್ಪಾಡಿ ರೈಸ್ ಮಿಲ್ ಬಳಿ ನೂತನ ಮನೆ ಖರೀದಿಸಿ ನೆಲೆಸಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಏಕಾಏಕಿ ತಮ್ಮ ಮನೆಯ ನಾಲ್ಕು ಬದಿಯ ಕೋಣೆಗಳ ತಿಲಕವನ್ನು ಒಳಗಿನಿಂದ ಭದ್ರಪಡಿಸಿ ಒಳಗೆ ಇದ್ದರು.
ಈ ಬಗ್ಗೆ ಸಂಶಯದಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಕಾರ್ಯಾಚರಣೆಯಿಂದ ಮನೆಯ ಬಾಗಿಲು ತೆರೆದು ಅನಾರೋಗ್ಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಧನಂಜಯ ಅಮೀನ್ ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಪೊಲೀಸರು ಮುಂಬೈನಲ್ಲಿರುವ ಮೃತರ ಪತ್ನಿ ಹಾಗೂ ಮಕ್ಕಳಿಗೆ ತಿಳಿಸಿದ್ದು ಅವರು ಮುಲ್ಕಿಗೆ ಧಾವಿಸಿದ್ದಾರೆ.