ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಲು ಪ್ರಸ್ತಾವನೆ ಸಲ್ಲಿಕೆ
ಪ್ರಾಧಿಕಾರಗಳ ಒಕ್ಕೂಟದ ನಿಯೋಗದಿಂದ ಮೈಸೂರು ವಿಭಾಗ ಜಂಟಿ ನಿರ್ದೇಶಕರ ಭೇಟಿ

ಮಂಗಳೂರು, ಜೂ.23: ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದ ಅಧ್ಯಕ್ಷ ಸದಾಶಿವ ಉಳ್ಳಾಲ್ ನೇತೃತ್ವದ ನಿಯೋಗವು ನಗರ ಮತ್ತು ಗ್ರಾಮಾಟತರ ಯೋಜನೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಪಂಕಜಾ ಎಂ.ಎಸ್ ಅವರನ್ನು ಭೇಟಿಯಾಗಿ ಕರಾವಳಿಯ ಸಮಸ್ಯೆಗಳ ಪಟ್ಟಿ ಮತ್ತು ಬೇಡಿಕೆಗಳ ಮನವಿ ಸಲ್ಲಿಸಿತು.
ಭಿನ್ನವಾದ ಭೌಗೋಳಿಕ ಹಿನ್ನಲೆ ಹೊಂದಿರುವ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕು. ಹಾಲಿ ಇರುವ ನಗರ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿರುವ ವಲಯ ನಿಯಮಾವಳಿಗಳು ಕರಾವಳಿ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ನಿಯೋಗ ಮನವರಿಕೆ ಮಾಡಿತು.
ಒಕ್ಕೂಟದ ಸಂಚಾಲಕರಾದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರ್, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಜೈನ್, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ವಿವಿಧ ಪ್ರಾಧಿಕಾರದ ಸದಸ್ಯರಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ ಮತ್ತಿತರರು ನಿಯೋಗದಲ್ಲಿದ್ದರು.







