ಅಧಿಕಾರಿಗಳ ಗೈರು: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅರ್ಧದಲ್ಲೇ ಮೊಟಕು

ಉಳ್ಳಾಲ: ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಅರ್ಧದಲ್ಲೇ ಮೊಟಕುಗೊಳಿಸಿದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ನಲ್ಲಿ ಶುಕ್ರವಾರ ನಡೆದಿದೆ.
ಕೋಟೆಕಾರ್ ಪ.ಪಂ. ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮೆಸ್ಕಾಂ ಮತ್ತು ಅಮೃತ್ 2.0 ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಮಾತ್ರ ಹಾಜರಾಗಿದ್ದರು. ಪಿಡಬ್ಲ್ಯುಡಿ, ಕಂದಾಯ, ಆರೋಗ್ಯ ಸಹಿತ ವಿವಿಧ ಇಲಾಖಾಧಿಕಾರಿಗಳು ಗೈರಾಗಿದ್ದರು. ಇದನ್ನು ಗಮನಿಸಿದ ಸದಸ್ಯ ಸುಜಿತ್ ಮಾಡೂರು ಮಾತನಾಡಿ, ಅಧಿಕಾರಿಗಳು ಬಾರದೇ ಸಭೆ ನಡೆಸುವುದು ಬೇಡ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸಭೆ ಹಾಜರಾಗಿರುವ ಅಧಿಕಾರಿಗಳ ಜತೆ ಚರ್ಚಿಸಿ ಸಭೆ ಮುಂದುವರಿಸೋಣ ಎಂದರು.
ಅಮೃತ್ 2.0 ಕುಡಿಯುವ ನೀರು ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಪೂರ್ಣಗೊಂಡ ಹಾಗೂ ಹಾಗೂ ಬಾಕಿ ಉಳಿದಿರುವ ಪೈಪ್ ಲೈನ್ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಆಕ್ಷೇಪಿಸಿದ ಸುಜಿತ್ ಮಾಡೂರು, ಶ್ರೀಮಂತರ ಮನೆಯ ಪೈಲ್ ಲೈನ್ ಕಾಮಗಾರಿ ಮುಗಿಸಿ ಬಡವರಿಗೆ ಸಂಬಂಧಿಸಿದ ಕಾಮಗಾರಿ ಬಾಕಿ ಇಟ್ಟಿದ್ದೀರಿ ಎಂದು ದೂರಿದರು.
ವಿಪಕ್ಷದ ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಕಾಮಗಾರಿ ಅರ್ಧಂಬರ್ಧ ಮಾಡುವುದು ಬೇಡ. ಅಜ್ಜಿನಡ್ಕ, ಮುಳ್ಳುಗುಡ್ಡೆ ಬಳಿ ಪೈಪ್ ಲೈನ್ ಗೆ ಅಗೆದ ಗುಂಡಿಗಳು ಹಾಗೆಯೇ ಇವೆ. ಈ ಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಅಧ್ಯಕ್ಷ ದಿವ್ಯಾ ಸತೀಶ್ ಮಾತನಾಡಿ, ಒಂದು ದಿನ ನಾಲ್ಕು ವಾರ್ಡ್ ಗಳಿಗೆ ಭೇಟಿ ನೀಡಿ ಪೈಪ್ ಲೈನ್ ಕಾಮಗಾರಿಯನ್ನು ಪರಿಶೀಲಿಸಬೇಕು. ಕಾಮಗಾರಿ ನಡೆಸುವ ಮೊದಲು ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು. ತೆರೆದಿಟ್ಟ ಹೊಂಡಗಳನ್ನು ಶೀಘ್ರ ಮುಚ್ಚಬೇಕು ಎಂದು ಇಂಜಿನಿಯರ್ ಗೆ ಸೂಚನೆ ನೀಡಿದರು.
ಮೆಸ್ಕಾಂ ಎಇ ಮಾರಪ್ಪ ಮಾತನಾಡಿ, ವಿದ್ಯುತ್ ಎಚ್.ಟಿ. ಲೈನ್ ಹಾದು ಹೋಗಿರುವ ಜಾಗದಲ್ಲಿ ಮರಗಳು ಬೆಳೆದು ನಿಂತಿದ್ದು, ಅವುಗಳನ್ನು ಅರಣ್ಯ ಇಲಾಖೆ ತೆರವು ಮಾಡಿಲ್ಲ. ಆದ್ದರಿಂದ ಪಪಂ ಮರಗಳನ್ನು ಆದ್ಯತೆಯಲ್ಲಿ ತೆರವು ಮಾಡಬೇಕು ಎಂದು ವಿನಂತಿಸಿದರು.
ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಕೋಟೆಕಾರ್ ನಲ್ಲಿ ಮೆಸ್ಕಾಂ ಶಾಖಾ ಕಚೇರಿ ಬೇಕು. ಜತೆಗೆ ಬಿಲ್ ಪಾವತಿ ಮಾಡಲು ಪ.ಪಂ. ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಬೇಕು. ಕರೆ ಮಾಡಿದರೆ ಸ್ವೀಕರಿಸುವ ವ್ಯವಸ್ಥೆ ಕೂಡ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಗೆ ಪಿಡಬ್ಲ್ಯುಡಿ, ಕಂದಾಯ, ಆರೋಗ್ಯ ಸಹಿತ ವಿವಿಧ ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರಿಂದ ಯಾವುದೇನಿರ್ಣಯವನ್ನು ತೆಗೆದುಕೊಳ್ಳಲಾಗದೇ ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷೆ ದಿವ್ಯಾ ಶೆಟ್ಟಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬುಧವಾರಕ್ಕೆ ಮುಂಡೂಡಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ, ಪ.ಪಂ.ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.
ಅಧಿಕಾರಿಗಳು ಗೈರು ಹಾಜರಿಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತೀ ಸಭೆಗೂ ಮುನ್ನ ಸಂಬಂಧಪಟ್ಟ ಇಲಾಖೆಗೆ ನೋಟಿಸ್ ಕಳಿಸಲಾಗುತ್ತದೆ. ಜನರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಈ ಕಾರಣದಿಂದ ಸಭೆ ರದ್ದುಗೊಳಿಸಿ ಬುಧವಾರಕ್ಕೆ ಮುಂದೂಡಿದ್ದೇವೆ ಎಂದು ಸಭೆಯ ಬಳಿಕ ಅಧ್ಯಕ್ಷೆ ದಿವ್ಯಾ ಶೆಟ್ಟಿ ತಿಳಿಸಿದರು.







