ಅಖಿಲ ಅಮೆರಿಕಾ ತುಳುವೆರೆ ಅಂಗಣ ಸಮಾವೇಶ: ವಿಶೇಷ ಅತಿಥಿಯಾಗಿ ಡಾ. ಸಾಯಿಗೀತಾ

ಡಾ. ಸಾಯಿಗೀತಾ
ಕೊಣಾಜೆ: ಅಖಿಲ ಅಮೆರಿಕಾ ತುಳುವೆರೆ ಅಂಗಣ (AATA) ದ ಮೊದಲ ಸಮಾವೇಶವು ಅಮೇರಿಕಾದ ನಾರ್ತ್ ಕ್ಯಾರೊಲಿನಾದ ರಾಲಿ ನಗರದಲ್ಲಿ ನಡೆಯಲಿದ್ದು, ಅದರಲ್ಲಿ ವಿಶೇಷ ಅತಿಥಿಯಾಗಿ ನಿಟ್ಟೆ ವಿಶ್ವ ವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸಾಯಿಗೀತಾ ಭಾಗವಹಿಸಲಿದ್ದಾರೆ.
ಮೂರು ದಿನ ನಡೆಯಲಿರುವ ಈ ಸಮಾವೇಶದಲ್ಲಿ ಅಮೇರಿಕಾ ಹಾಗೂ ಕೆನಡಾದಲ್ಲಿರುವ ತುಳು ಸಂಘಟನೆಗಳೆಲ್ಲವೂ ಜೊತೆಗೂಡಲಿದ್ದು ಭಾರತದಿಂದ ಘನ ಕರ್ನಾಟಕ ಸರಕಾರದ ಸಭಾಪತಿಗಳಾ ಗಿರುವ ಯು.ಟಿ. ಖಾದರ್ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಡಾ. ಸಾಯಿಗೀತಾ ಹೆಗ್ಡೆ, ಖತಾರ್ನಿಂದ ಅನಿವಾಸಿ ಭಾರತೀಯ ರವಿ ಶೆಟ್ಟಿ ಮೂಡಂಬೈಲು ಹಾಗೂ ಅಮೆರಿಕಾದ ಶೇಖರ್ ನಾಯ್ಕ್ ಅವರು ವಿಶೇಷ ಅತಿಥಿಗಳಾಗಿದ್ದಾರೆ.
ಡಾ. ಸಾಯಿಗೀತಾ ಹೆಗ್ಡೆ ತುಳು-ಕನ್ನಡಗಳಲ್ಲಿ ಸಂಶೋಧಕರಾಗಿ, ಸಾಹಿತಿಯಾಗಿ, ಅನುವಾದಕರಾಗಿದ್ದು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುಳು ಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ತುಳು ಪಿಎಚ್ ಡಿ ಪ್ರೌಢಪ್ರಬಂಧ ʼತುಳುವ ಪರಿಪುಡು ಪೊಣ್ಣಮೂಲ ಕಟ್ಟ್ʼ ಮೂಲಕ ತುಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮಾರ್ಗವೊಂದನ್ನು ತೆರೆದಿದ್ದಾರೆ. ತುಳು ಪದಕೋಶಗಳ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿರುವ ʼತುಳು ಜ್ಞಾತಿಪದ ಸಂಚಯʼವನ್ನು ಡಾ. ಪದ್ಮನಾಭ ಕೇಕುಣ್ಣಾಯರೊಡನೆ ಸಂಪಾದಿಸಿ ರುವ ಇವರು ಈಗಾಗಲೇ ತಮಿಳಿನ ನೀತಿಕಾವ್ಯ ʼತಿರುಕ್ಕುರಳ್ʼ ಹಾಗೂ ತಮಿಳು ವ್ಯಾಕರಣ ʼತೊಲ್ಕಾಪ್ಪಿಯಂʼ ಕೃತಿಗಳನ್ನು ತುಳುವಿಗೆ ಅನುವಾದಿಸಿದ್ದಾರೆ. ಇನ್ನೂ ಹಲವು ಕೃತಿಗಳ ಅನುವಾದ ಯೋಜನೆ ಕೊರಗ ಹಾಗೂ ಕೊಡವ ಭಾಷೆ-ಸಂಸ್ಕೃತಿಗಳ ಸಂಶೋಧನಾ ಯೋಜನೆಗಳು ಮುನ್ನಡೆಯುತ್ತಿವೆ.







