ದೇರಳಕಟ್ಟೆ: ಕೆ.ಎಸ್ ಹೆಗ್ಡೆಯಲ್ಲಿ ವೈದ್ಯರ ದಿನಾಚಾರಣೆ; ನಾಲ್ವರು ಹಿರಿಯ ವೈದ್ಯರಿಗೆ ಸನ್ಮಾನ

ಕೊಣಾಜೆ: ವೈದ್ಯಕೀಯ ವೃತ್ತಿಗೆ ಕಾಲಿಟ್ಟ ಬಳಿಕ ನಾವು ಎಷ್ಟು ಜ್ಞಾನವಂತರಾಗುತ್ತೇವೆ, ಕೌಶಲ್ಯ ವೃದ್ಧಿಸಿ ಕೊಂಡಿದ್ದೇವೆ ಎಂಬುದು ಎಷ್ಟು ಮುಖ್ಯವಾಗುತ್ತದೆಯೋ ಹಾಗೆಯೇ ನಮ್ಮನ್ನು ಸಾಕಿ ಬೆಳೆಸಿದ ಪೋಷಕ ರನ್ನು ಹಾಗೂ ಶಿಕ್ಷಣ ನೀಡಿದ ಸಂಸ್ಥೆಯ ಕೊಡುಗೆ ಯಾವುದೇ ಕಾಲಕ್ಕೂ ಮರೆಯಬಾರದು ಎಂದು ಕ್ಷೇಮ ನಿವೃತ್ತ ಮಕ್ಕಳ ತಜ್ಞೆ ಡಾ. ವಿಜಯ ಶೆಣೈ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಎಬಿಎಸ್ಎಂಐಡಿಎಸ್ ನ ಆವಿಷ್ಕಾರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಡಾ. ಬಿ. ಸಿ. ರಾಯ್ ಜನ್ಮದಿನ ಪ್ರಯುಕ್ತ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ. ನಿಟ್ಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ಸಹ ಕುಲಾಧಿಪತಿ ಪ್ರೊ. ಎಂ. ಶಾಂತರಾಮ್ ಶೆಟ್ಟಿ ಅವರು, ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ಆಯಾ ದೇಶದ ಖ್ಯಾತ ವೈದ್ಯರ ಹೆಸರಿನಲ್ಲಿ ವೈದ್ಯರ ದಿನ ಆಚರಿಸಲ್ಪಡುತ್ತಿದ್ದು ಭಾರತದಾದ್ಯಂತ ಜು. 1ರಂದು ವೈದ್ಯರ ದಿನ ಆಚರಿಸಲಾ ಗುತ್ತಿದೆ. ಅದು ಡಾ. ಬಿ. ಸಿ. ರಾಯ್ ಜನ್ಮ ದಿನವಾಗಿದ್ದು ಅವರು ಎಲ್ಲ ಕ್ಷೇತ್ರದಲ್ಲಿ ಪಳಗಿದವರು. ವೈದ್ಯರು ಮುಖ್ಯಮಂತ್ರಿಗಳಾಗಬಹುದು ಎಂಬುದನ್ನು ತೋರಿಸಿ ಕೊಟ್ಟ ಸಾಧಕ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕುಟುಂಬ ವೈದ್ಯರುಗಳಾದ ಡಾ. ಎಂ. ನೀಲಯ್ಯ ಗಂಜೀಮಠ, ಡಾ. ರಾಮ ಚಂದ್ರ ಐತಾಳ್ ಹೆಬ್ರಿ, ಸಾಗರದ ಡಾ. ರಾಮಚಂದ್ರ ಕೆ. ಭಾಗವಾತ್ ಹಾಗೂ ಕ್ಷೇಮ ನಿವೃತ್ತ ಮಕ್ಕಳ ತಜ್ಞೆ ಡಾ. ವಿಜಯ ಶೆಣೈ, ಅವರನ್ನು ಸನ್ಮಾನಿಸಲಾಯಿತು.
ಉಪಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಹಾಗೂ ವೈಸ್ ಡೀನ್ ಡಾ. ಸುಕನ್ಯಾ ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇಮ ಡೀನ್ ಡಾ. ಸಂದೀಪ್ ರೈ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ, ಮಕ್ಕಳ ತಜ್ಞ ಡಾ. ಸುಮಂತ್ ಬೆಳ್ಳಿಪ್ಪಾಡಿ, ಡಾ. ಗಿರಿಧರ್ ಹಾಗೂ ಡಾ. ಚರಿತ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಎಲುಬು ಹಾಗೂ ಮೂಳೆ ರೋಗ ತಜ್ಞ ಡಾ. ಸಿದ್ದಾರ್ಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







