ಅಖಿಲ ಭಾರತ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ: ಬಂದರು ಶ್ರಮಿಕರ ಸಂಘದಿಂದ ಸಭೆ

ಮಂಗಳೂರು, ಜು.5: ಕಾರ್ಮಿಕರ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಿ ಕಾರ್ಮಿಕರ ಹಕ್ಕನ್ನು ದಮನಗೊಳಿಸುತ್ತಿರುವ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮತ್ತು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಜು.9ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕರ ಮುಷ್ಕರಕ್ಕೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಸಭೆ ಸೇರಿದ ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತ ನಾಡಿ ಕೇಂದ್ರದ ಬಿಜೆಪಿ ಸರಕಾರ ಕಾಪೋರೇಟ್ ಲಾಬಿಗೆ ಸಂಪೂರ್ಣ ಶರಣಾಗಿದೆ. ನರೇಂದ್ರ ಮೋದಿ ಸರಕಾರದ ತಪ್ಪುಆರ್ಥಿಕ ನೀತಿಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ದೇಶದ ಇತಿಹಾಸದಲ್ಲಿ ಎಂದೂ ಕಾಣದಷ್ಟು ನಿರುದ್ಯೋಗ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ ಎಂದರು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಮುಖರಾದ ಶಿವಾನಂದ ಪೆರುಮಾಲ್, ಸಿದ್ದಿಕ್ ಬೆಂಗರೆ, ಮಾಧವ ಕಾವೂರು, ಹಂಝ, ಲೋಕೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಫಾರೂಕ್ ಉಳ್ಳಾಲಬೈಲ್ ಸ್ವಾಗತಿಸಿ, ವಂದಿಸಿದರು.