ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರವೇ ಬಂದಿಲ್ಲ: ಶಾಸಕ ಕಾಮತ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದಾಗಿರುವ ಹಾನಿ, ಕೈಗೊಂಡ ಪರಿಹಾರ ಕ್ರಮ ಸಹಿತ ಸಹಿತ ಜನಸಾಮಾನ್ಯರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದರು.
ಈ ಬಾರಿಯ ಪ್ರಕೃತಿ ವಿಕೋಪದಿಂದಾಗಿ ನಗರದ ಹಲವೆಡೆ ರಸ್ತೆ, ಚರಂಡಿ, ರಾಜ ಕಾಲುವೆ, ತಡೆಗೋಡೆ ಗಳಿಗೆ ವಿಪರೀತ ಹಾನಿಯಾಗಿದೆ. ಕಾನೂನಾತ್ಮಕವಾಗಿ ತಡೆಗೋಡೆಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ ದಿದ್ದರೂ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ 25ರಿಂದ 50 ಕೋ.ರೂ.ವರೆಗೂ ಅನುದಾನವನ್ನು ತಂದು ನಗರದಲ್ಲಿ ಪರಿಹಾರ ಕಾರ್ಯ ನಡೆಸಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಮಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಅನುದಾನವನ್ನೇ ನೀಡಿಲ್ಲ. ಈ ಹಿಂದಿನ ಮಳೆ ಹಾನಿಯ ಪರಿಹಾರ ಧನವೂ ಬಂದಿಲ್ಲ. ಈ ಬಾರಿಯ ಪರಿಹಾರದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಅದೂ ಬಾಕಿಯಾದರೆ ಕ್ಷೇತ್ರದ ಜನತೆ ತೀವ್ರ ಸಮಸ್ಯೆ ಎದುರಿಸಬೇಕಾ ಗುತ್ತದೆ ಎಂದರು.
ಇದೀಗ ರಾಜ್ಯ ಸರಕಾರ ಮನೆಗಳಿಗೆ ಅಲ್ಪಮೊತ್ತದ ಪರಿಹಾರ ನೀಡುತ್ತಿದ್ದರೂ ರಸ್ತೆ, ಚರಂಡಿ, ರಾಜ ಕಾಲುವೆ, ತಡೆಗೋಡೆಗಳಿಗೆ ಉಂಟಾಗಿರುವ ತೀವ್ರ ಹಾನಿಯ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದ ಶಾಸಕ ಕಾಮತ್, ಎರಡು ವರ್ಷಗಳಲ್ಲಿ ಆಗಿರುವ ಹಾನಿ ಹಾಗೂ ಮುಂದೆ ಅದನ್ನು ತಡೆಗಟ್ಟುವ ಬಗ್ಗೆ ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು ವಾರದೊಳಗೆ ಜಂಟಿಯಾಗಿ ವರದಿ ಸಿದ್ದಪಡಿಸಲು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಳೆಗಾಲ ಮುಗಿಯುತ್ತಿದ್ದಂತೆ ಸರಕಾರದ ಅನುದಾನ ಹೊಂದಿಸಿಕೊಂಡು ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಮನಪಾ ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.