ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ವಿದ್ಯಾರ್ಥಿನಿಗೆ ವಂಚನೆ ಪ್ರಕರಣ: ನ್ಯಾಯ ಒದಗಿಸಲು ಮನವಿ

ಮಂಗಳೂರು: ವಿದ್ಯಾರ್ಥಿನಿಗೆ ಮದುವೆಯ ಭರವಸೆ ನೀಡಿ, ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿ, ವಂಚಿಸಿದ ಪ್ರಕರಣದಲ್ಲಿ ಪುತ್ತೂರು ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮಂಗಳೂರಿನ ಮಹಿಳಾ ಸಂಘಟನೆಗಳ ಪ್ರಮುಖರ ಜಂಟಿ ನಿಯೋಗವು ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿತು.
ಮದುವೆಯ ಭರವಸೆ ನೀಡಿ, ಕೊನೆಯ ಘಳಿಗೆಯಲ್ಲಿ ವಂಚಿಸಿದ ಆರೋಪಿ ಕೃಷ್ಣ ಜೆ. ರಾವ್ಗೆ ಹಲವರು ಪ್ರಚೋದನೆ ನೀಡಿರುವ, ಬೆಂಬಲ ಒದಗಿಸಿರುವ, ಪರಿಹಾರ ಧನ ಪಡೆದು ಗರ್ಭಪಾತ ಮಾಡುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಪ್ರಭಾವಿಗಳು ಒತ್ತಡ ಹೇರಿರುವ ಕುರಿತೂ ಆರೋಪಗಳಿವೆ. ಈ ಬಗ್ಗೆ ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಿ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಮಹಿಳಾ ಮುಖಂಡರು ಒತ್ತಾಯಿಸಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ನಗರಾಧ್ಯಕ್ಷೆ ಅಸುಂತಾ ಡಿಸೋಜ, ಕಾರ್ಯದರ್ಶಿ ಮಾಧುರಿ ಬೋಳಾರ, ಪ್ರಮುಖರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಸಂತಿ ಕುಪ್ಪೆಪದವು, ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆ ರಮಣಿ ಮೂಡುಬಿದಿರೆ, ವಿವಿಧ ಮಹಿಳಾ ಸಂಘಟನೆಗಳ ಲೀಡಿಯಾ, ಜೆಸಿಂತಾ, ಅರ್ಚನಾ ಆಚಾರ್ಯ, ಮೀನಾ ಟೆಲ್ಲಿಸ್ ಮತ್ತಿತರರು ನಿಯೋಗದಲ್ಲಿದ್ದರು.