ಸಜೀಪ ಮುನ್ನೂರು ಶ್ರೀ ಕ್ಷೇತ್ರದಲ್ಲಿ ಪರಿಸರ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ,ಬಿ .ಸಿ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಶ್ರೀ ಮುದೆಲು ಮುಟ್ಟಿ ಶ್ರೀ ನಾಲ್ಕೈತಾಯ ದೈವಸ್ಥಾನ ಸಜೀಪ ಮುನ್ನೂರು ಕ್ಷೇತ್ರದ ಪರಿಸರದಲ್ಲಿ ರವಿವಾರ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ಮಾತನಾಡಿ ಜೀವನದಿ ನೇತ್ರಾವತಿ ನದಿ ತೀರದ ಧಾರ್ಮಿಕ ಹಿನ್ನೆಲೆಯುಳ್ಳ ಗ್ರಾಮೀಣ ಭಾಗದ ಈ ಶ್ರದ್ಧಾ ಕೇಂದ್ರವಾಗಿ ಸಜೀಪ ಮುನ್ನೂರು ಶ್ರೀ ಕ್ಷೇತ್ರದ ಪರಿಸರವನ್ನು ಉಳಿಸಿ ಬೆಳೆಸಿದರೆ ನಾವು ಉಳಿಯುತ್ತೇವೆ ಎಂಬ ಚಿಂತನೆಯನ್ನು ಈ ಕಾರ್ಯ ಕ್ರಮದ ಅಳವಡಿಸಿಕೊಳ್ಳಲಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಮಾತನಾಡಿ ಪರಿಸರವನ್ನು ಸ್ವಚ್ಛವಾಗಿಸುವ, ಗಿಡಮರಗಳನ್ನು ನಾಟಿ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವಂತಾಗಬೇಕು ಎಂದು ತಿಳಿಸಿದರು.
ದೈವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ ಗಟ್ಟಿ ಮಾತನಾಡಿ ಪರಿಸರವನ್ನು ಉಳಿಸುವುದು ನಮ್ಮ ಒಳಿತಿಗಾಗಿ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಿದರೆ ಜನರು ಸುಖವಾಗಿ ಜೀವಿಸಬಹುದು ಎಂದರು.
ಗಡಿ ಪ್ರಧಾನರಾದ ಆಳ್ವ ರಪಾಲು ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ, ರಮಾನಾಥ ಶೆಟ್ಟಿ ಬೀರಿ, ಗ್ರಾಮ ಪಂಚಾಯತ್ ಸದಸ್ಯ ಪರಾರಿ ಗುತ್ತು ಧನಂಜಯ ಶೆಟ್ಟಿ ,ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್, ವಲಯ ಮೇಲ್ವಿಚಾರಕಿ ಶಿವ ಲಕ್ಷ್ಮಿ, ಶಾರದಾ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಗಟ್ಟಿ, ಸೇವಾ ನಿರತೆ ಬೇಬಿ ಮೊದಲಾದವರು ಉಪಸ್ಥಿತರಿದ್ದರು.
ಪರಿಸರದಲ್ಲಿ ಫಲ ವಸ್ತುಗಳ ಹಾಗೂ ಔಷಧೀಯ ಗುಣಗಳ ಸಸಿಗಳನ್ನು ನಾಟಿ ಮಾಡಲಾಯಿತು.