ಸೋಮೇಶ್ವರ| ಹದಗೆಟ್ಟ ಸೇತುವೆ ಯಿಂದ ಕೃಷಿಗೆ ಹಾನಿ: ದುರಸ್ತಿ ಮಾಡಿಸಲು ಸಾಮಾನ್ಯ ಸಭೆಯಲ್ಲಿ ಆಗ್ರಹ

ಉಳ್ಳಾಲ : ಪಿಲಾರ್ ನಲ್ಲಿ ಹದಗೆಟ್ಟಿದ್ದ ಸೇತುವೆ ಯನ್ನು ಒಡೆದು ಹಾಕಲಾಗಿದೆ.ಮಹಾಲಕ್ಷ್ಮೀ ಲೇ ಔಟ್ ಬಳಿ ಸೇತುವೆ ಹದಗೆಟ್ಟಿದೆ.ಇದರಿಂದ ನೀರು ಬ್ಲಾಕ್ ಆಗಿ ಕೃಷಿಗೆ ಹಾನಿಯಾಗಿದೆ. ಇಲ್ಲಿ ಅಪಾಯ ಸಂಭವಿಸುವ ಮೊದಲು ಈ ಸೇತುವೆ ದುರಸ್ತಿ ಮಾಡಬೇಕು ಎಂದು ಸೋಮೇಶ್ವರ ಪುರಸಭೆಯ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ಒತ್ತಾಯಿಸಿದರು.
ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪಿಲಾರ್ ನ ಸೇತುವೆ ದೊಡ್ಡದು. ಈ ಸೇತುವೆ ದುರಸ್ತಿಗೆ ಶಾಸಕರ ಅನುದಾನ ಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ಹೇಳಿದರು.
ಉಚ್ಚಿಲ ದಲ್ಲಿ ಹೂಳೆತ್ತುವ, ತಡೆಗೋಡೆ ನಿರ್ಮಾಣ ಆಗಿಲ್ಲ. ಇಲ್ಲಿಯದ್ದು ಹಳೆಯ ಸೇತುವೆ.ಇಲ್ಲಿ ಕಸ ತುಂಬಿ ಮಳೆ ನೀರು ಬ್ಲಾಕ್ ಆಗುತ್ತದೆ.ಇಲ್ಲಿನ ಕಸ ತೆಗೆಯುವ ಕೆಲಸ ಆಗಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ನೀರಾವರಿ ಇಲಾಖೆ ಇಂಜಿನಿಯರ್ ಆನಂದ್ ಅವರಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಇಂಜಿನಿಯರ್ ಆನಂದ್ ಅವರು ನಿರ್ವಹಣೆ ಕಾಮಗಾರಿಗಳಿಗೆ ದೊಡ್ಡ ಅನುದಾನ ಇರುವುದಿಲ್ಲ. ಆದರೂ ಈ ವಿಚಾರದಲ್ಲಿ ಒಂದು ಸಮಿತಿ ಮಾಡಿ ಕಾಯಕಲ್ಪ ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದರು.
ದೀಪಕ್ ಪಿಲಾರ್ ಮಾತನಾಡಿ, ಸೋಮೇಶ್ವರ ಬೀಚ್ ಬಳಿ ಅನಧಿಕೃತ ಅಂಗಡಿಗಳಿವೆ.ಈ ಅಂಗಡಿ ಗಳಿಂದ ತೆರಿಗೆ ವಸೂಲಿ ಆಗುತ್ತಿಲ್ಲ. ಇದಕ್ಕೆ ನೀರು, ವಿದ್ಯುತ್ ವ್ಯವಸ್ಥೆ ಇದೆ. ಅಂಗಡಿ ಬಳಿ ಸಮುದ್ರ ಕೊರೆತ ಆಗಿದೆ.ಇದರಿಂದ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಅಂಗಡಿಗಳಿಗೆ ನೋಟೀಸ್ ನೀಡಲಾಗುವುದು. ಡಿಸಿ ಸೂಚನೆ ಮೇರೆಗೆ ಪರಿಶೀಲನೆ ನಡೆಸಲಾಗಿದೆ. ಬೀದಿ ಬದಿಯ ವ್ಯಾಪಾರಸ್ಥರಿಗಾಗಿ ಬೀದಿ ಬದಿ ಸಮಿತಿ ಇದೆ.ತೆರಿಗೆ ವಿಧಿಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಆಗಬೇಕು ಎಂದು ಮುಖ್ಯಾಧಿಕಾರಿ ಮತ್ತಡಿ ಸಭೆಗೆ ತಿಳಿಸಿದರು.
ದೊಡ್ಡ ಅಂಗಡಿಗೆ ಅವಕಾಶ ನೀಡಬಾರದು. ತಳ್ಳು ಗಾಡಿಗೆ ಮಾತ್ರ ಅವಕಾಶ ನೀಡಿದರೆ ಸಾಕು ಎಂದು ಮನೋಜ್ ತಿಳಿಸಿದರು. ಬೊಂಡ, ಆಮ್ಲೇಟ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳ ತ್ಯಾಜ್ಯ ಜಾಸ್ತಿ ಇರುತ್ತದೆ.ಅವರಿಗೆ ಶುಲ್ಕ ನಿಗದಿ ಮಾಡಬೇಕು ಎಂದು ಹರೀಶ್ ಒತ್ತಾಯಿಸಿದರು.
ಈ ವಿಚಾರದಲ್ಲಿ ಸಮಿತಿ ರಚನೆ ಮಾಡಿ ದರ ನಿಗದಿ ಮಾಡಬೇಕು.ರಾತ್ರಿ ಕಸ ಸಂಗ್ರಹಿಸಿ ಹಣ ವಸೂಲಿ ಮಾಡಬೇಕು. ಒಂದೇ ರೀತಿಯ ದರ ಬೇಡ ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು.
ಆಮ್ಲೇಟ್,ಬೊಂಡದ ಅಂಗಡಿಗೆ ಮಾಸಿಕ 300 , ತಳ್ಳು ಗಾಡಿಗೆ ಮಾಸಿಕ 100 ರೂ.ತ್ಯಾಜ್ಯ ದರ ವಸೂಲಿ ಮಾಡಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಅಮೃತ್ 2.0 ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ಅವ್ಯವಸ್ಥೆ ಕಾಮಗಾರಿ ಬಗೆ ಪ್ರಶ್ನಿಸಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರನ್ನು ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ತರಾಟೆಗೈದು ಪಿಲಾರ್ ನಲ್ಲಿ ಮಾಡಿರುವ ಅರ್ಧಂಬರ್ಧ ಕಾಮಗಾರಿ ಶೀಘ್ರ ದುರಸ್ತಿ ಮಾಡುವಂತೆ ಆಗ್ರಹಿಸಿದರು.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಹುತೇಕ ಕಡೆ ರಸ್ತೆ ಅಗೆದು ಹಾಕಿದ್ದೀರಿ. ಕೆಲವು ಕಡೆ ಪೈಪ್ ಜೋಡಣೆ ಸರಿಯಾಗಿಲ್ಲ. ಬಹಳಷ್ಟು ಕಡೆ ಮಣ್ಣು ರಾಶಿ ಇದೆ. ಇದು ಅನಾಹುತಕ್ಕೂ ಕಾರಣ ಆಗುತ್ತದೆ.
ಪೆರಿಬೈಲ್ ನಲ್ಲಿ ರಸ್ತೆ ಅಗೆದು ಆರು ತಿಂಗಳು ಆಗಿದೆ.ಇದರಿಂದ ನಮ್ಮ ವಾಹನ ಕೊಂಡು ಹೋಗಲು ಆಗುವುದಿಲ್ಲ. ಅಗೆದ ರಸ್ತೆ, ಪೈಪ್ ಲೈನ್ ಕಾಮಗಾರಿ ಶೀಘ್ರ ದುರಸ್ತಿ ಮಾಡುವಂತೆ ಉಪಾಧ್ಯಕ್ಷ ರವಿಶಂಕರ್ ಅಮೃತ್ 2.0 ಸಹಾಯಕ ಶ್ರೀಕಾಂತ್ ರವರ ಗಮನ ಸೆಳೆದರು.
ಪುರಸಭೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರ ಕಮ್ಯುನಿಟಿ ಮೊಬೈಲೇಸೆರ್ಸ್ ಆಗಿ ಐದು ಮಂದಿ ಸಿಬ್ಬಂದಿ ಯನ್ನು ನೇಮಕ ಮಾಡಿದೆ. ಇವರಿಗೆ ಮನೆ ಮನೆ ತೆರಳಿ ಕಸ ವಿಂಗಡಣೆ ಮಾಡು ವುದು, ಮಾಹಿತಿ ನೀಡುವುದು, ತೆರಿಗೆ, ನೀರಿನ ಶುಲ್ಕ ವಸೂಲಿ ಜವಾಬ್ದಾರಿ ಇದೆ. ಇವರಿಗೆ ಮಾಸಿಕ ಭತ್ಯೆ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಮುಖ್ಯಾಧಿಕಾರಿ ಮತ್ತಡಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.







