ಮಂಗಳೂರಿನಿಂದ ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಹೆಚ್ಚುವರಿ ಸರ್ಕಾರಿ ಬಸ್ ಬೇಡಿಕೆ: ಸಾರಿಗೆ ಸಚಿವರಿಗೆ ಡಿವೈಎಫ್ಐ ಮನವಿ

ಮೊಂಟೆಪದವು: ದ. ಕ. ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಮಂಜನಾಡಿ, ನರಿಂಗಾನ, ಬಾಳೆಪುಣಿ ಗ್ರಾಮಗಳು ಸೇರಿದಂತೆ ಮೊಂಟೆಪದವು, ಮೋಂಟುಗೋಳಿ, ವಿದ್ಯಾನಗರ, ಕೈರಂಗಳ ಹಾಗೂ ಇನ್ನಿತರ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಸರಕಾರೀ ಬಸ್ಸುಗಳ ಕೊರತೆ ಇದ್ದು, ಖಾಸಗಿ ಬಸ್ಸುಗಳ ಅಸಮರ್ಪಕ ವ್ಯವಸ್ಥೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ, ಮಂಗಳೂರಿನಿಂದ ತೊಕ್ಕೊಟ್ಟು - ದೇರಳಕಟ್ಟೆ - ನಾಟೆಕಲ್ - ಮೊಂಟೆಪದವು ಮಾರ್ಗವಾಗಿ ಮುಡಿಪು ತನಕ ಹೆಚ್ಚುವರಿ ಸರಕಾರಿ ಬಸ್ ವ್ಯವಸ್ಥೆ ಒದಗಿಸಲು ಒತ್ತಾಯಿಸಿ ಇಂದು ಡಿವೈಎಫ್ಐ ಮೊಂಟೆಪದವು ಘಟಕದ ವತಿಯಿಂದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಜನಾಡಿ, ಮೊಂಟೆಪದವು, ಕೈರಂಗಳ ಸೇರಿದಂತ ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಹೆಚ್ಚಾಗಿ ನಗರ ಪ್ರದೇಶಗಳನ್ನೇ ಅವಲಂಬಿತರಾಗಿದ್ದಾರೆ. ಅಲ್ಲದೇ ಈ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ದೇರಳಕಟ್ಟೆ, ಉಳ್ಳಾಲ ಹಾಗೂ ಮಂಗಳೂರು ನಗರಕ್ಕೆ ದಿನಂಪ್ರತಿ ತೆರಳುತ್ತಾರೆ. ಆದರೆ ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಮಾತ್ರ ಅಸ್ತವ್ಸಸ್ಥವಾಗಿರುತ್ತದೆ. ಅಲ್ಲದೇ ಖಾಸಗೀ ಬಸ್ಸುಗಳಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇರುತ್ತದೆ.
ಹೀಗಿರುವಾಗ ಮಂಗಳೂರು ನಗರದಿಂದ ತೊಕ್ಕೊಟ್ಟು – ದೇರಳಕಟ್ಟೆ – ನಾಟೆಕಲ್ – ಮೊಂಟೆಪದವು ಮಾರ್ಗವಾಗಿ ಮುಡಿಪು ವಿಗೆ ಸರಕಾರೀ ಬಸ್ ಕಲ್ಪಿಸುವಂತೆ ಈ ಪ್ರದೇಶಗಳ ಸಾರ್ವಜನಿಕರು ನಿರಂತರ 13 ವರ್ಷಗಳಿಂದ ಬೇಡಿಕೆಯನ್ನಿಟ್ಟು ಹಲವು ಅಧಿಕಾರಿಗಳಲ್ಲಿ ಒತ್ತಾಯಿಸುತ್ತಾ ಮನವಿಯನ್ನು ಸಲ್ಲಿಸಿರು ತ್ತಾರೆ. ಅದರ ಭಾಗವಾಗಿ 2022 ರಲ್ಲಿ ಈ ಮಾರ್ಗದಲ್ಲಿ ಒಂದು ಸರಕಾರೀ ಬಸ್ಸನ್ನು ಒದಗಿಸಿದ್ದು ನಿರಂತರ ಈ ಮಾರ್ಗದಲ್ಲಿ ಓಡಾಡುತ್ತಿವೆ. ಅಲ್ಲದೇ ದಿನಂಪ್ರತಿ ಈ ಬಸ್ಸು ತುಂಬಿ ತುಳುಕುವುದರಿಂದಲೇ ಉತ್ತಮ ಕಲೆಕ್ಷನ್ ಕೂಡಾ ಇರುತ್ತವೆ. ಅಲ್ಲದೇ ಸಾರ್ವಜನಿಕರು ಕೂಡಾ ಈ ಸರಕಾರೀ ಬಸ್ಸಿಗಾಗಿಯೇ ಗಂಟೆಗಟ್ಟಲೆ ಕಾದು ಸದರಿ ಬಸ್ಸಿನ ಪ್ರಯೋಜನವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಬಂದಿರುತ್ತಾರೆ.
ಸದರಿ ಸರಕಾರೀ ಬಸ್ಸು ಹೊರತುಪಡಿಸಿದರೆ ಈ ಮಾರ್ಗದಲ್ಲಿ ಖಾಸಗೀ ಬಸ್ಸುಗಳೇ ಇದ್ದು, ಈ ಖಾಸಗೀ ಬಸ್ಸುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಂಚರಿಸುವುದರಿಂದ ಲೆಕ್ಕಕ್ಕಿಂತ ಹೆಚ್ಚು ಸಾರ್ವಜನಿ ಕರನ್ನು ಬಸ್ಸುಗಳಲ್ಲಿ ತುಂಬಿಸಲಾಗುತ್ತದೆ, ಮತ್ತು ಈ ಸಂದರ್ಭ ಶಾಲಾ ಕಾಲೇಜು, ಹಾಗೂ ಇತರ ವ್ಯವಹಾರಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವ ಉದ್ದೇಶದಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಎಂದಿಲ್ಲದೇ ಹಲವರನ್ನು ಬಸ್ಸಿನ ಫುಟ್ ಬೋರ್ಡ್ ಗಳಲ್ಲಿ ನೇತಾಡಿಸಿ ಕರೆದುಕೊಂಡು ಹೋಗಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರಿಗೆ ಖಾಸಗೀ ಬಸ್ಸುಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗುತ್ತದೆ. ಈ ಕುರಿತಂತೆ ಈ ಹಿಂದೆಯೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನೂ ಸಲ್ಲಿಸಲಾಗಿರುತ್ತದೆ. ಹಾಗಿದ್ದರೂ ಯಾವುದೇ ಸಮರ್ಪಕ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸದೇ ಇರುವುದರಿಂದ ಇಂದು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.
ಡಿವೈಎಫ್ಐ ನಿಯೋಗದಲ್ಲಿ ಡಿವೈಎಫ್ಐ ಮುಖಂಡರಾದ ರಝಾಕ್ ಮೊಂಟೆಪದವು, ಮೊಹಮ್ಮದ್ ಜೀಲಾನಿ ಮೊಂಟೆಪದವು, ಸಾಮಾಜಿಕ ಹೋರಾಟಗಾರರಾದ ಅಬೂಬಕ್ಕರ್ ಜಲ್ಲಿ, Dyfi ಮೊಂಟೆಪದವು ಘಟಕ ಅಧ್ಯಕ್ಷರಾದ ಶರೀಫ್ KA, ಕಾರ್ಯದರ್ಶಿ ಶಾಫಿ ಚಾಂದ್ , ಶಾಫಿ ಮುಡಿಪು ಮುಂತಾದವರಿದ್ದರು.







