ಶಿರ್ತಾಡಿ ಸಹಕಾರಿ ಸಂಘ ಕಾಂಗ್ರೆಸ್ ಬೆಂಬಲಿತರ ವಶಕ್ಕೆ

ಮೂಡುಬಿದಿರೆ, ಜು.13: ಶಿರ್ತಾಡಿ ಸೇವಾ ಸಹಕಾರಿ ಸಂಘದ 11 ನಿರ್ದೇಶಕರುಗಳ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದ ಶಿರ್ತಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ರವಿವಾರ ಪ್ರಥಮ ಚುನಾವಣೆ ನಡೆಯಿತು. ಕಲ್ಲಬೆಟ್ಟು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ನೇತೃತ್ವದ ಕಾಂಗ್ರೆಸ್ ಬೆಂಬಲಿತ ತಂಡ ಎಲ್ಲಾ ಸ್ಥಾನಗಳನನ್ನು ಗೆದ್ದುಕೊಂಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಚುನಾವಣೆಯ ಪೂರ್ವ ರಾಜಿ ಸೂತ್ರದ ಮಾತುಕತೆ ನಡೆದಿತ್ತು. ಆ ಪ್ರಕಾರ ಎರಡೂ ಕಡೆಯವರು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಯ ಮೂಲಕ ತಲಾ 6-6 ಸ್ಥಾನಗಳನ್ನು ಹಂಚಿಕೊಳ್ಳುವುದೆಂದು ನಿರ್ಧರಿಸಲಾಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಎರಡೂ ಪಕ್ಷದ ಕೆಲವರಿಂದ ವಿರೋಧ ವ್ಯಕ್ತವಾದ ಕಾರಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು.
ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ಕುಮಾರ್, ಚಿಂತನ್ ಲೋಬೊ, ತಾರನಾಥ ಶೆಟ್ಟಿ, ಕೆ.ಎಚ್.ಲಕ್ಷ್ಮಣ, ಅಬ್ದುಲ್ ಖಾದರ್, ಸನತ್ ಶೆಟ್ಟಿ, ಆಗ್ನೆಸ್ ಡಿಸೋಜ, ಸುಗಂಧಿ, ರಾಘವ ಸುವರ್ಣ, ಸದಾನಂದ ಸುವರ್ಣ, ಉಮೇಶ್ ನಾಯ್ಕ್ ಗೆಲುವು ಸಾಧಿಸಿದರು. ಸುದೀಪ್ ಅವಿರೋಧ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ಶಿವಲಿಂಗಯ್ಯ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಮಾಜಿ ಸಚಿವ ಅಭಯಚಂದ್ರ ಜೈನ್ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿದರು.







