ಮಂಗಳೂರು ವಿವಿಯಲ್ಲಿ ಪ್ರೊ.ಎ.ಎಂ.ಖಾನ್ ರಿಗೆ ಅಭಿನಂದನೆ

ಕೊಣಾಜೆ: ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಇದೀಗ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.ಎ.ಎಂ.ಖಾನ್ ಅವರನ್ನು ಮಂಗಳೂರು ವಿವಿ ವತಿಯಿಂದ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕ ರಾಗಿದ್ದ ಪ್ರೊ.ಎ.ಎಂ.ಖಾನ್ ಅವರು ಆಡಳಿತ ವಿಭಾಗದಲ್ಲೂ ಉತ್ತಮ ಅನುಭವ ಹೊಂದಿದ್ದಾರೆ. ವಿವಿಧ ಸಂಶೋಧನೆ ಯೋಜನೆ ಸೇರಿದಂತೆ ಮಂಗಳೂರು ವಿವಿಯ ಅಭಿವೃದ್ಧಿಗೆ ಅನೇಕ ರೀತಿಯ ಕೊಡುಗೆ ನೀಡಿದ್ದಾರೆ. ಅವರ ಸಮರ್ಥ ನಾಯಕತ್ವದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಇನ್ನಷ್ಟು ಅಭಿವೃದ್ಧಿಹೊಂದುವಂತಾಗಲಿ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ನೂತನ ಕುಲಪತಿ ಪ್ರೊ.ಎ.ಎಂ.ಖಾನ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ, ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಡಾ.ಕೆ.ಆರ್.ಶಾನಿ, ಡಾ.ವಜೀದಾ ಭಾನು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಶಿಕ್ಷಕೇತರ ಸಂಘದ ವತಿ ಯಿಂದಲೂ ಪ್ರೊ.ಎ.ಎಂ.ಖಾನ್ ಅವರನ್ನು ಅಭಿನಂದಿಸಲಾಯಿತು.





