ಕಾಂಗ್ರೆಸ್ನ ಲಿಂಗರಾಜ್ ಕಣ್ಣಿ ಡ್ರಗ್ಸ್ ಪ್ರಕರಣ; ಸಚಿವ ಪ್ರಿಯಾಂಕ ಖರ್ಗೆ ಮೌನ ಮುರಿಯಲಿ: ಶಾಸಕ ಭರತ್ ಶೆಟ್ಟಿ

ಮಂಗಳೂರು: ಮಾದಕ ವಸ್ತು ಕಳ್ಳ ಸಾಗಾಟ ಪ್ರಕರಣದಲ್ಲಿ ತನ್ನ ಆಪ್ತರಾಗಿರುವ ಲಿಂಗರಾಜ್ ಕಣ್ಣಿ ಸಿಕ್ಕಿಬಿದ್ದಿದ್ದರೂ ಸಚಿವ ಪ್ರಿಯಾಂಕ ಖರ್ಗೆ ಈ ವಿಚಾರದಲ್ಲಿ ಯಾಕೆ ಮೌನ ಮುರಿದಿಲ್ಲ. ತಮಗೂ ಕಣ್ಣಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಬಹಿರಂಗ ಹೇಳಿಕೆ ನೀಡಲಿ ಅಥವಾ ತಮ್ಮ ಸ್ಥಾನಕ್ಕೆ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಲಿ ಎಂದು ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಪಕ್ಷದವರು ವಿಧಾನ ಸಭೆಯಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಗಳಿಗೂ ಮಧ್ಯೆ ಪ್ರವೇಶಿಸಿ ಉತ್ತರ ನೀಡಲು ಆತುರ ತೋರುವ ಸಚಿವ ಖರ್ಗೆ ಅವರಿಗೆ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ಗೊತ್ತಿಲ್ಲವೇ ? ಅವರು ಇವರಿಗೆ ರಕ್ಷಣೆ ನೀಡಿದ್ದಾರೆಯೇ ? ಎಂದು ಪ್ರಶ್ನಿಸಿದರು.
ಕಲಬುರಗಿಯಲ್ಲಿ ಪ್ರಿಯಾಂಕ ಖರ್ಗೆ ಹುಕುಂ ಇಲ್ಲದೆ ಏನು ನಡೆಯುವುದಿಲ್ಲ. ಅಂತಹ ಕಲಬುರಗಿಯಲ್ಲಿ ನಡೆಯುತ್ತಿದ್ದ ಲಿಂಗರಾಜ್ ಕಣ್ಣಿಯ ಅಕ್ರಮ ಡ್ರಗ್ಸ್ ಸಾಗಾಟ ದಂಧೆಯ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ, ಆತನನ್ನು ಬಂಧಿಸಿ ಡ್ರಗ್ಸ್ ಸಾಗಾಟ ದಂಧೆಗೆ ಕಡಿವಾಣ ಹಾಕದಂತೆ ಪೊಲೀಸರನ್ನು ತಡೆದವರು ಯಾರೆಂದು ಬಹಿರಂಗವಾಗಲಿ ಎಂದು ಆಗ್ರಹಿಸಿದರು.
ಲಿಂಗರಾಜ್ ಕಣ್ಣಿ ಅವರು ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೂ ಆಪ್ತರಾಗಿದ್ದಾರೆ. ಅವರೂ ಕೂಡಾ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದು ಭರತ್ ಶೆಟ್ಟಿ ಆಪಾದಿಸಿದರು.
ಡ್ರಗ್ಸ್ನಲ್ಲಿ ರಾಜ್ಯವನ್ನು ಉಡ್ತಾ ಪಂಜಾಬ್ ಮಾಡಲು ಸರಕಾರ ಬಿಡುವುದಿಲ್ಲ ಎಂದು ಇತ್ತೀಚೆಗೆ ಮಂಗಳೂರಿ ನಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕಲಬುರಗಿಯ ಡ್ರಗ್ಸ್ ಹಾವಳಿಯ ಬಗ್ಗೆ ಗೊತ್ತಿರಲಿಲ್ಲವೇ ? ಎರಡು ತಿಂಗಳ ಹಿಂದೆ ಕಲಬುರಗಿಯಲ್ಲಿ ಡ್ರಗ್ಸ್ ಸಾಗಾಟ ಪ್ರಕರಣ ವೊಂದು ಪತ್ತೆಯಾಗಿತ್ತು. ಆ ಬಳಿಕ ಅದರ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿಲ್ಲ. ಅದು ಅಲ್ಲಿಗೆ ಮುಚ್ಚಿ ಹೋಗಿತ್ತು ಎಂದರು.
ಸಚಿವ ಪ್ರಿಯಾಂಕ ಖರ್ಗೆ ಅವರು ಮಂಗಳೂರಿನಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಮೂಲಸೌರ್ಕಯ ಒದಗಿಸುವ ವಿಚಾರದಲ್ಲೂ ಗಮನ ಹರಿಸಿಲ್ಲ. ಸರಕಾರ ಮಂಗಳೂರಿನಲ್ಲಿ ಐಟಿ ಕಂಪನಿಗಳ ವಿಚಾರದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಆರಂಭಗೊಂಡಿದ್ದ ಐಟಿ ಕೆಲಸ ಅರ್ಧದಲ್ಲಿ ನಿಂತಿದ್ದು, ಕಿಯೊನಿಕ್ಸ್ ಮೂಲಕ ಪೂರ್ಣ ಗೊಳಿಸುವ ಬಗ್ಗೆ ನೀಡಿದ ವಾಗ್ದಾನವನ್ನು ಸರಕಾರ ಪೂರ್ಣಗೊಳಿಸಿಲ್ಲ. ಕಿಯೊನಿಕ್ಸ್ ಆಡಳಿತ ನಿರ್ದೇಶಕರು ಎರಡು ಬಾರಿ ಮಂಗಳೂರಿಗೆ ಬಂದು ಹೋಗಿ ದ್ದರೂ ಏನು ಆಗಿಲ್ಲ ಎಂದು ಭರತ್ ಶೆಟ್ಟಿ ದೂರಿದರು.
ಕಾಂಗ್ರೆಸ್ ಶಾಸಕರು ಸಮಸ್ಯೆ ಬಗೆಹರಿಸಲಿ: ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಕೊರತೆಯ ವಿಚಾರದಲ್ಲಿ ಬಿಜೆಪಿ ಶಾಸಕರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ವೈ. ಭರತ್ ಶೆಟ್ಟಿ ಅವರು ‘ ರೈಗಳ ಹೇಳಿಕೆ ಒಂದು ಜೋಕ್ನಂತೆ ನನಗೆ ಭಾಸವಾಗುತ್ತದೆ. ಆಡಳಿತ ಪಕ್ಷದ ಶಾಸಕ ಅಶೋಕ್ ರೈ, ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಐವನ್ ಡಿ ಸೋಜ ಅವರಂತಹ ಘಟಾನು ಘಟಿಗಳು ಇದ್ದಾರಲ್ಲ. ಅವರು ಯಾಕೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಕೆಲವು ಮಂದಿ ಇತ್ತೀಚೆಗೆ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೂ ಬಿಸಿ ತಟ್ಟಿದೆ. ಬಿಜೆಪಿ ಸರಕಾರ ಇದ್ದಾಗ ಒಂದು ವಾರದೊಳಗೆ 272 ಮರಳು ಬ್ಲಾಕ್ ಗುತ್ತಿಗೆಯನ್ನು ನೀಡಲಾಗಿತ್ತು. ಈಗ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಧುರೀಣ ವಿಕಾಸ್ ಪುತ್ತೂರು, ಜಿಲ್ಲಾ ಬಿಜೆಪಿ ವಕ್ತಾರ ರಾಜಗೋಪಾಲ್ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.







