ಪಾತಾಳರು ಸ್ತ್ರೀ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದವರು: ಡಾ.ಹರಿಕೃಷ್ಣ ಪುನರೂರು

ಮಂಗಳೂರು, ಜು.21: ಯಕ್ಷ ಶಾಂತಲೆಯಾಗಿ ಯಕ್ಷಗಾನ ರಂಗಸ್ಥಳದಲ್ಲಿ ಮೆರೆದ ಪಾತಾಳರು ಉಭಯ ತಿಟ್ಟುಗಳಲ್ಲೂ ಪಾರಮ್ಯವನ್ನು ಮೆರೆದು ಸ್ತ್ರೀ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದ ಅಪ್ರತಿಮ ಕಲಾವಿದರು ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಕಲ್ಕೂರ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಅಗಲಿದ ಕಲಾವಿದರಾದ ಪಾತಾಳ ವೆಂಕಟರಣ ಭಟ್ ಮತ್ತು ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ದಿವಂಗತರಿಗೆ ನುಡಿ ನಮನ ಸಲ್ಲಿಸಿದರು.
ಪರಂಪರೆಯ ದೈತ್ಯ ವೇಷಗಳಿಗೆ ಜೀವ ತುಂಬಿದ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಓರ್ವ ಅಪರೂಪದ ಕಲಾವಿದರು ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪಾತಾಳ ವೆಂಕಟರಮಣ ಭಟ್ಟರನ್ನು ಸ್ಮರಿಸುತ್ತಾ ಬೇಲೂರು ಶಿಲಾಬಾಲಿಕೆಯರ ಭಂಗಿಗಳನ್ನು ಅಭ್ಯಸಿಸಿ ರಂಗಸ್ಥಳದಲ್ಲಿ ಯಕ್ಷಗಾನ ಕಲೆಗೆ ಅನುಸಾರವಾಗಿ ಬಳಸಿಕೊಂಡ ಹಿರಿಮೆ ಪಾತಾಳರದ್ದು, ತನ್ನ ವೃತ್ತಿಜೀವನದ ಗಳಿಕೆಯ ಬಹುಪಾಲನ್ನು ಯಕ್ಷಗಾನ ಕಲಾವಿ ದರಿಗೆ ಸಮರ್ಪಿಸಿದ ಉದಾರ ಹೃದಯರು. ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಪಾರಂಪರಿಕ ಯಕ್ಷಗಾನ ಬಣ್ಣಗಾರಿಕೆಯ ಮೂಲಕ ನಿಜಾರ್ಥದ ದೈತ್ಯನಂತೆ ರಂಗಸ್ಥಳದಲ್ಲಿ ಮೆರೆದವರು ಎಂದು ಬಣ್ಣಿಸಿದರು.
ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ ಭಟ್ ಸೇರಾಜೆ, ಶಿವಾನಂದ ಪ್ರಭು, ಎಲ್ಲೂರು ರಾಮಚಂದ್ರ ಭಟ್,ಕೆ.ತಾರಾನಾಥ ಹೊಳ್ಳ , ಕೆ.ಶ್ರೀಕರ ಭಟ್,ವರ್ಕಾಡಿ ರವಿ ಅಲೆವೂರಾಯ , ವಿಜಯಲಕ್ಷ್ಮೀ ಬಿ.ಶೆಟ್ಟಿ, ಪೂರ್ಣಿಮಾ ಪೇಜಾವರ,ಸುಮ ಪ್ರಸಾದ್,ಜನಾರ್ದನ ಹಂದೆ,ಪ್ರಭಾಕರ ಪೇಜಾವರ,ಉಮೇಶ್ ಎನ್.ಶೆಟ್ಟಿ, ಸತೀಶ್ಎ.ಮಂಜೇಶ್ವರ,ಮಧುಸೂದನ್ ಅಲೆವೂರಾಯ, ಲಲಿತಾ ಆರ್.ಉಪಾಧ್ಯಾಯ, ಸುಧಾಕರ ರಾವ್ ಪೇಜಾವರ,ಪಿ.ಬಿ ಹರೀಶ್ ರೈ, ಯಂ.ಸುಂದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಅಗಲಿದ ಯಕ್ಷಗಾನ ಕಲಾವಿದದ್ವಯರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.







