ಟಿಎಚ್ಒಗಳಲ್ಲಿ ಹೆರಿಗೆ, ಶಸ್ತ್ರ ಚಿಕಿತ್ಸೆಗಳಿಗೆ ಒತ್ತು; ತಲಾ ಇಬ್ಬರಂತೆ ಸ್ತ್ರೀರೋಗ, ಅರಿವಳಿಕೆ ತಜ್ಞರ ಕಡ್ಡಾಯಕ್ಕೆ ಕ್ರಮ: ದಿನೇಶ್ ಗುಂಡೂರಾವ್

ಮಂಗಳೂರು, ಆ.1: ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ ತಲಾ ಇಬ್ಬರಂತೆ ಸ್ತ್ರೀರೋಗ, ಅರಿವಳಿಕೆ ಹಾಗೂ ಮಕ್ಕಳ ತಜ್ಞರು ಕಡ್ಡಾಯಗೊಳಿಸಲು ಕ್ರಮ ವಹಿಸಲಾಗುತ್ತದೆ. ಅದಕ್ಕಾಗಿ ಹೆಚ್ಚಿನ ಒತ್ತಡ ಇಲ್ಲದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಈ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವೆನ್ಲಾಕ್ ಆರ್ಎಪಿಸಿಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ ಅಧ್ಯಕ್ಷತೆ ವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದರು.
ಮಕ್ಕಳ ತಜ್ಞ ಓರ್ವರಿದ್ದರೂ ಸಾಕಾಗುತ್ತದೆ. ಆದರೆ, ಅರಿವಳಿಕೆ ಹಾಗೂ ಸ್ತ್ರೀರೋಗ ತಜ್ಞರು ತಲಾ ಇಬ್ಬರು ಇದ್ದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಾಧ್ಯವಾಗಲಿದೆ. ಆ ಸಂದರ್ಭ ಹೆರಿಗೆ ಮತ್ತು ಇತರ ಶಸ್ತ್ರ ಚಿಕಿತ್ಸೆಗಳನ್ನೂ ತಾಲೂಕು ಮಟ್ಟದಲ್ಲಿ ನಡೆಸಲು ಸಾಧ್ಯವಾಗಲಿದೆ. ಸದ್ಯ ತಾಲೂಕು ಆಸ್ಪತ್ರೆ ಗಳಲ್ಲಿ ಈ ಎಲ್ಲಾ ಹುದ್ದೆಗಳ ಮಂಜೂರಾತಿ ಸಂಖ್ಯೆ ತಲಾ ಒಂದು ಆಗಿದೆ. ಬಹಳಷ್ಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒತ್ತಡ ಕಡಿಮೆ ಇದೆ. ಹಾಗಾಗಿ ಅಂತಹ ಕೇಂದ್ರಗಳಿಂದ ಈ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ಹೆಚ್ಚಿನ ಸೇವೆಯನ್ನು ಪಡೆಯಲು ಸಾಧ್ಯ ಎಂದವರು ಹೇಳಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಸಿದ್ಧಗೊಂಡಿರುವ ಕ್ಯಾಥ್ಲ್ಯಾಬ್ ಶೀಘ್ರವಾಗಿ ಕಾರ್ಯಾರಂಭಿ ಸಲಿರುವುದಾಗಿ ಸಭೆಯಲ್ಲಿ ಆಶ್ವಾಸನೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಂಜಿಯೋಪ್ಲಾಸ್ಟಿಯ ಮೂಲಕ ಸ್ಟಂಟ್ ಅಳವಡಿಕೆ ಸೇರಿದಂತೆ ಹೃದ್ರೋಗ ಶಸ್ತ್ರ ಚಿಕಿತ್ಸೆ ಗಳು ಉಚಿತವಾಗಿರಲಿದೆ. ಆದರೆ ಆಂಜಿಯೋಗ್ರಾಮ್ಗೆ ನಿಯಮಗಳ ಪ್ರಕಾರ ಬಿಪಿಎಲ್ದಾರರಿಗೆ 5000 ರೂ. ಕನಿಷ್ಟ ದರ ನಿಗದಿಪಡಿಸಲಾಗಿದೆ. ಆದರೆ ಈ ದರವನ್ನು ಕೂಡಾ ಉಚಿತವಾಗಿ ಮಾಡುವ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಹೃದಯಾಘಾತದ ಸಂದರ್ಭ ರೋಗಿಗೆ ಅಳವಡಿಸ ಲಾಗುವ ಸಿಂಗಲ್ ಸ್ಟಂಟ್ ಬೆಲೆ 60,000 ರೂ.ಗಳಿದ್ದು, ಎಪಿಎಲ್ ಕಾರ್ಡ್ದಾರರಿಗೆ 42,000 ರೂ., ಡಬಲ್ ಸ್ಟಂಟ್ಗೆ ನಿಗದಿತ 85,000 ರೂ.ಗಳ ಬದಲಿಗೆ ಎಪಿಎಲ್ನವರಿಗೆ 59500 ರೂ., ಹೆಚ್ಚುವರಿ ಸ್ಟಂಟ್ಗೆ ನಿಗದಿತ 28,849 ರೂ.ಗಳಾಗಿದ್ದು, ಎಪಿಎಲ್ನವರಿಗೆ 20,194 ರೂ. ಸೇರಿದಂತೆ ಆಂಜಿಯೋಗ್ರಾಮ್ ಹೊರತುಪಡಿಸಿ ಉಳಿದ ಹೃದಯ ಸಂಬಂಧಿ ಚಿಕಿತ್ಸೆಗೆ ಎಪಿಎಲ್ನವರಿಗೆ ಶೇ. 70:30 (ಶೇ. 30ರಷ್ಟು ಸರಕಾರ ಭರಿಸುತ್ತದೆ) ದರದಲ್ಲಿ ವೆನ್ಲಾಕ್ನ ಕ್ಯಾಥ್ಲ್ಯಾಬ್ನಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಎಪಿಎಲ್ನವರಿಗೆ ಆ್ಯಂಜಿಯೋಗ್ರಾಮ್ಗೆ 7000 ರೂ. ದರ ನಿಗದಿಯಾಗಿದೆ ಎಂದು ಸಭೆಯಲ್ಲಿ ವೆನ್ಲಾಕ್ ಆಧೀಕ್ಷಕ ಡಾ. ಶಿವಪ್ರಕಾಶ್ರವರು ವಿವರಿಸಿದರು.
ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್ಐ ಸ್ಕ್ಯಾನ್ ದರದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಎಂಆರ್ಪಿಎಲ್ ಸಂಸ್ಥೆಯವರು ಆಸ್ಪತ್ರೆಗೆ ಸಿಟಿ ಮತ್ತು ಎಂಆರ್ಐ ಸ್ಕ್ಯಾನ್ ಯಂತ್ರ ನೀಡುವ ಒಪ್ಪಿಗೆ ನೀಡಿದ್ದಾರೆ ಎಂದು ರಕ್ಷಾ ಸಮಿತಿಯ ಸದಸ್ಯರು ಸಭೆಯಲ್ಲಿ ಹೇಳಿದಾಗ, ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದಲೇ ಸಿಟಿ ಮತ್ತು ಎಂಆರ್ಐ ಸ್ಕ್ಯಾನ್ ವ್ಯವಸ್ತೆ ಮಾಡಲು ಸೂಚಿಸಲಾಗಿದೆ. ಎಂಆರ್ಪಿಎಲ್ನವವರು ವೆನ್ಲಾಕ್ಗೆ ಒದಗಿಸುವುದಾಗಿ ಹೇಳಿದ್ದರೆ ಅದನ್ನು ಕಾರ್ಯಗತಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದಾಗ, ಈ ಹಣಕಾಸು ವರ್ಷದಲ್ಲಿ ಯಂತ್ರ ಒದಗಿಸುವುದಾಗಿ ಎಂಆರ್ಪಿಎಲ್ನವರು ತಿಳಿಸಿದ್ದಾರೆ ಎಂದು ಡಾ. ಶಿವಪ್ರಕಾಶ್ ತಿಳಿಸಿದರು.
ಸಭೆಯಲ್ಲಿ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕರ್ಬೂರಿ ಉಪಸ್ಥಿತರಿದ್ದರು.







