ಆ.1ರಂದು ಅಂಗದಾನ- ಜೀವನ ಸಂಜೀವಿನಿ ಅಭಿಯಾನ; ಯೆನೆಪೋಯದಲ್ಲಿ ರಾಜ್ಯ ಮಟ್ಟದ ಅಂಗಾಂಗ ದಾನ ದಿನಾಚರಣೆ

ಮಂಗಳೂರು, ಜು. 30: ಭಾತೀಯ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಕಾರ್ಯಕ್ರಮ ಈ ಬಾರಿ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆ. 1ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ತಿಮ್ಮಯ್ಯ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ವಿಧಾನಸಭೆ ಸ್ಪೀಕರ್ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಇತರ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿ ಸಲಿದ್ದಾರೆ ಎಂದವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಡಿ ರಾಜ್ಯ ಅಂಗಾಂಗ ಮತ್ತು ಅಂಗಾಂಗ ಕಸಿ (ಎಸ್ಒಟಿಟಿಒ)- ಜೀವನ ಸಾಥಕತೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಜುಲೈ 30ರವರೆಗೆ 43,221 ಮಂದಿ ಸಾರ್ವಜನಿಕರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ರಾಜ್ಯದಲ್ಲಿ ಮಂಗಳೂರು ವಲಯ (ದ.ಕ, ಉಡುಪಿ, ಉ.ಕ., ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ) ನಾಲ್ಕನೆ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 2017ರಿಂದ 2025ರ ಜೂನ್ 30ರವರೆಗೆ 979 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ದಾನ ಮಾಡಲಾದ ಅಂಗಾಂಗಗಳಲ್ಲಿ ಮೂತ್ರಪಿಂಡಗಳ ಸಂಖ್ಯೆ 1481, ಯಕೃತ್ (ಲಿವರ್) 812, ಹೃದಯ 251, ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ 25, ಸಣ್ಣ ಕರುಳು 11, ಶ್ವಾಸಕೋಶಗಳು 129, ಯಕೃತ್ ಮತ್ತು ಮೂತ್ರಪಿಂಡಗಳು 44, ಹೃದಯದ ಕವಾಟ 396, ಕಾರ್ನಿಯಾ 1494, ಚರ್ಮ 106 ಹಾಗೂ ಕೈ 2 ಸೇರಿವೆ. ಮಂಗಳೂರು ವಲಯದಲ್ಲಿ 2019ರಿಂದ ಈವರೆಗೆ 141 ಮಂದಿ ಅಂಗಾಂಗ ದಾನ ಮಾಡಿದ್ದಾರೆ ಎಂದು ಅವರು ವಿವರ ನೀಡಿದರು.
ಟ್ರಾಮಾ ಕೇರ್ ಮತ್ತು ಎಮರ್ಜೆನ್ಸಿ ಸೆಂಟರ್ ಸೇರಿದಂತೆ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳ ನಾನ್ ಟ್ರಾನ್ಸ್ಪ್ಲಾಂಟ್ ಆರ್ಗನ್ ರಿಟ್ರೀವಲ್ ಸೆಂಟರ್ (ಎನ್ಟಿಒಆರ್ಸಿ)ಗಳಲ್ಲಿ ಮೆದುಳು ನಿಷ್ಕ್ರಿಯ ಗೊಂಡ ವ್ಯಕ್ತಿಯ ಶರೀರದಿಂದ ಪಡೆದು ಕಸಿ ಕೇಂದ್ರಗಳಿಗೆ ಗ್ರೀನ್ ಕಾರಿಡಾರ್ ಮೂಲಕ ತಲುಪಿಸಲಾಗುತ್ತದೆ. ಪ್ರತಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲಂ ಕಾಲೇಜುಗಳಲ್ಲಿ ಎನ್ಟಿಒಆರ್ಸಿ ಸ್ಥಾಪಿಸಲಾಗುವುದು. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಎನ್ಟಿಒಆರ್ಸಿ ಆಗಿ ನೋಂದಣಿ ಪಡೆದಿದ್ದು ಇಲ್ಲಿ ಅಂಗಾಂಗ ದಾನವೂ ನಡೆದಿದೆ ಎಂದು ಅವರು ಹೇಳಿದರು.
ಮೆದುಳು ನಿಷ್ಕ್ರಿಯ ಹೊದಂಇದ ರೋಗಿಗಳನ್ನು ಗುರುತಿಸಿ ಘೋಷಣೆ ಮಾಡಲು ಬ್ರೇನ್ ಡೆತ್ ಡಿಕ್ಲರೇಶನ್ ಕಮಿಟಿಗಳನ್ನು ಪ್ರತಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನಲ್ಲಿ ರಚಿಸಲಾಗುವುದು. ಸರಕಾರದ ವತಿಯಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ಎಎಸ್ಟಿ) ಅಡಿ ಮೂತ್ರಪಿಂಡ, ಹೃದಯ, ಯಕೃತ್ ಹಾಗೂ ಬಹು ಅಂಗಾಗಗಳಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ.
*ಕಿಡ್ನಿ ಕಸಿಗಾಗಿ 2 ಲಕ್ಷ ರೂ +ಇಮ್ಯುನೋ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ ಸೇರಿ ಒಟ್ಟು 3 ಲಕ್ಷ ರೂ.
*ಲಿವರ್ ಕಸಿಗಾಗಿ 11 ಲಕ್ಷ ರೂ. ಹಾಗೂ ಇಮ್ಯೂನೋ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ ಸೇರಿ ಒಟ್ಟು 12 ಲಕ್ಷ ರೂ.
*ಹೃದಯ ಕಸಿಗಾಗಿ 10 ಲಕ್ಷ ರೂ. ಹಾಗೂ ಇಮ್ಯುನೋ ಸಪ್ರೆಶನ್ ವೆಚ್ಚಕ್ಕೆ ವರ್ಷಕ್ಕೆ 1 ಲಕ್ಷ ಸೇರಿ 11 ಲಕ್ಷ ರೂ.
*ಶ್ವಾಸಕೋಶ ಕಸಿಗಾಗಿ 15 ಲಕ್ಷ ರೂ ಹಾಗೂ ಇಮ್ಯುನೋ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ 1 ಲಕ್ಷ ರೂ.ಸೇರಿ 16ಲಕ್ಷ ರೂ.
* ಹೃದಯ ಮತ್ತು ಶ್ವಾಸಕೋಶ ಕಸಿಗಾಗಿ 22.50 ಲಕ್ಷ ರೂ. ಮತ್ತು ಇಮ್ಯುನೋ ಸಪ್ರೆಶನ್ ವೆಚ್ಚಕ್ಕೆ ವರ್ಷಕ್ಕೆ 1 ಲಕ್ಷ ಸೇರಿ ಒಟ್ಟು 23.50 ಲಕ್ಷ ರೂ. ನಿಗದಿಪಡಿಸಲಾಗಿದೆ.
ಸರಕಾರಿ ಆಸ್ಪತ್ರೆಗಳಾದ ಬೆಂಗಳೂರಿನ ನೆಪ್ರೋ- ಯುರಾಲಜಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಕರ್ನಾಟಕ ವೈದ್ಯಕೀಯ ಸಂಸ್ಥೆ ಯಲ್ಲಿ ಕಿಡ್ನಿ ಕಸಿ, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಕಸಿ ಮತ್ತು ಇನ್ಸ್ಟಿಟ್ಟೂಟ್ ಆಫ್ ಗ್ಯಾಸ್ಟ್ರೋ ಎಂಟೆರಾಲಜಿ ಸಾಯನ್ಸಸ್ ಆಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ (ಐಜಿಒಟಿ)ಯಲ್ಲಿ ಲಿವರ್ ಕಸಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಅಂಗ ಕಸಿ ನೋಂದಣಿಗೆ ಬಯಸುವವರು www.jeevansarathakathe.karnataka.gov.in ಅಥವಾ ಮೊಬೈಲ್ ಸಂಖ್ಯೆ- 9845006768ನ್ನು ಸಂಪರ್ಕಿಸಬಹುದು.
‘ಮರಣ ನಂತರ ಮಣ್ಣಾಗುವ ಅಥವಾ ಬೂದಿಯಾಗುವ ಒಬ್ಬನ ದೇಹದ ಅಂಗಾಂಗಗಳು 8 ಮಂದಿಗೆ ನೆರವಾಗಲು ಸಾಧ್ಯವಾಗಲಿದೆ. ರಾಜ್ಯದಲ್ಲಿ 4582 ಮಂದಿ ಮೂತ್ರಪಿಂಡಗಳಿಗಾಗಿ, 133 ಮಂದಿ ಹೃದಯಕ್ಕಾಗಿ, 583 ಮಂದಿ ಯಕೃತ್ ಸೇರಿದಂತೆ ವಿವಿಧ ರೀತಿಯ ಅಂಗಾಂಗಗಳಿಗೆ ಎದುರು ನೋಡು ತ್ತಿದ್ದಾರೆ. ಜೀವನ ಸಾರ್ಥಕತೆ ಸಂಸ್ಥೆಯಡಿ ಅಂಗ ಅಥವಾ ಅಂಗಾಂಶ ದಾನಕ್ಕಾಗಿ ಪ್ರತಿಜ್ಞೆಯ ಬಯಸು ವವರು ಸರಕಾರದ ಅಧಿಕೃತ ಕ್ಯೂಆರ್ ಕೋಡ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.’
-ಡಾ. ತಿಮ್ಮಯ್ಯ, ಆರೋಗ್ಯ ಅಧಿಕಾರಿ, ದ.ಕ.







