ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ: ಬದ್ರುದ್ಧೀನ್ ಮಾಣಿ
ಪ.ಗೋ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮಂಗಳೂರು: ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ಧೀನ್ ಮಾಣಿ ತಿಳಿಸಿದ್ದಾರೆ.
ವಿಜಯವಾಣಿ ಹಿರಿಯ ಉಪ ಸಂಪಾದಕ ರಾಜೇಶ್ ಶೆಟ್ಟಿ ದೋಟ ಅವರಿಗೆ 2024ನೆ ಸಾಲಿನ ಪ.ಗೋ ಪ್ರಶಸ್ತಿಯನ್ನು ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನಗೈದು ಅವರು ಮಾತನಾಡಿದರು.
ಕಾಲ ಕಳೆದಂತೆ ಪತ್ರಿಕೋದ್ಯಮದ ಸವಾಲುಗಳು ಭಿನ್ನವಾಗುತ್ತಾ ಸಾಗಿದೆ. ಈಗ ತಂತ್ರಜ್ಞಾನ ಬೆಳೆದಿದೆ. ಪದ್ಯಾಣ ಗೋಪಾಲಕೃಷ್ಣರಂತಹ ಹಿರಿಯ ಪತ್ರಕರ್ತರನ್ನು ನೆನಪಿಸಿಕೊಳ್ಳುವುದು ತುಂಬಾ ಅಗತ್ಯವಿದೆ. ಕಿರಿಯ ಪತ್ರಕರ್ತರಿಗೆ ಅವರು ನಿಜವಾದ ಮಾರ್ಗದರ್ಶಕರಾಗಿದ್ದರು ಎಂದು ಬದ್ರುದ್ದೀನ್ ಮಾಣಿ ಹೇಳಿದರು.
ಆಡಳಿತದಲ್ಲಿ ಪಾರದರ್ಶಕವಾಗಿರಬೇಕು. ಭೃಷ್ಟಾಚಾರ ಮುಕ್ತವಾಗಿರಬೇಕು ಎನ್ನುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇಂತಹ ಕಾಯ್ದೆಯ ದುರ್ಬಳಕೆ ಆಗಬಾರದು. ಮಾಹಿತಿ ಹಕ್ಕು ಕಾಯ್ದೆಯು ಪತ್ರಕರ್ತರಿಗೆ ಸಾರ್ವಜನಿಕರಿಗೆ ಒಂದು ಅಸ್ತ್ರವಾಗಿದೆ. ಜನರಿಗೆ ನೆರವಾಗಲು ಮಾಹಿತಿ ಹಕ್ಕು ಕಾಯ್ದೆಯು ಒಂದು ವರದಾನವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಸಹಕಾರ ಅಗತ್ಯವಿದೆ ಎಂದರು.
ಪ.ಗೋ ಪ್ರಶಸ್ತಿ ಸ್ವೀಕರಿಸಿದ ರಾಜೇಶ್ ಶೆಟ್ಟಿ ದೋಟ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಾನು ಕಂಡ ಸಮಸ್ಯೆಯ ಬಗ್ಗೆ ವರದಿ ಮಾಡಿದೆ. ಅದರಿಂದ ಅಲ್ಲಿನ ಜನರಿಗೆ ದಾರಿ ನಿರ್ಮಾಣವಾಗಲು ಸಾಧ್ಯವಾಯಿತು. ಮೊರಂಟೆಬೈಲು ಪ್ರದೇಶದ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ಪ್ರಶಸ್ತಿಯ ಮೊತ್ತ 10,001 ರೂ.ವನ್ನು ನೀಡುವೆ ಎಂದರು.
ಈ ಚೆಕ್ಕನ್ನು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ನ ಮೋಹದಾಸ್ ಮಾರಕಡ ಸ್ವೀಕರಿಸಿದರು. ಈ ಸಂದರ್ಭ ವಾರ್ತಾ ಇಲಾಖೆಯ ನಿವೃತ್ತ ಸಿಬ್ಬಂದಿ ವಿಶ್ವನಾಥ ಜೋಗಿ ಅವರನ್ನು ವಯೋನಿವೃತ್ತಿಯ ಹಿನ್ನೆಲೆಯಲ್ಲಿ ಗೌರವಿಸಲಾಯಿತು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ಮಂಗಳೂರು ಸ್ಮಾರ್ಟ್ ಸಿಟಿ ಮಹಾಪ್ರಬಂಧಕ ಅರುಣ್ ಪ್ರಭ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್, ಮಂಗಳೂರು ಪ್ರೆಸ್ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ, ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕಾರ್ಯದರ್ಶಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







