28 ರೂಟ್ಗಳಲ್ಲಿ ಸರಕಾರಿ ಬಸ್ಗಳಿಗೆ ಪರವಾನಿಗೆ| ಜಂಟಿ ಸರ್ವೆ ಆಗದೆ ಅವಕಾಶ ಬೇಡ: ಖಾಸಗಿ ಬಸ್ಸು ಮಾಲಕರು

ಮಂಗಳೂರು: ನಗರದ ವಿವಿಧ ಭಾಗಗಳಿಗೆ 28 ಹೊಸ ರೂಟ್ಗಳಲ್ಲಿ ಸರಕಾರಿ ಬಸ್ಗಳ ಸಂಚಾರಕ್ಕೆ ಪರವಾನಿಗೆ (ಪರ್ಮಿಟ್) ನೀಡುವ ಕುರಿತಂತೆ ಪರ - ವಿರೋಧ ವಾದಗಳಿಗೆ ಸೋಮವಾರ ನಡೆದ ಆರ್ಟಿಎ ಸಭೆ ಸಾಕ್ಷಿಯಾಯಿತು.
ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಪಡೀಲ್ನ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೆಎಸ್ಆರ್ಟಿಸಿಯಿಂದ ಸಲ್ಲಿಕೆಯಾಗಿರುವ ನೂತನ ರೂಟ್ಗಳಲ್ಲಿ ಬಸ್ಗಳ ಅಗತ್ಯವಿದೆಯೇ ಎಂಬ ಬಗ್ಗೆ ಜಂಟಿ ಸಮೀಕ್ಷೆಯ ನಡೆಸಿದ ಬಳಿಕವೇ ಪರವಾನಿಗೆ ನಿರ್ಧಾರ ಕೈಗೊಳ್ಳಬೇಕು ಎಂದು ಖಾಸಗಿ ಬಸ್ಸು ಮಾಲಕರ ಪರ ವಕೀಲರಾದ ಎಂ.ವಿ. ನಾಗೇಶ್, ಪರಸರ ಕುಮಾರ್ ವಾದಿಸಿದರು.
ಕೆಎಸ್ಆರ್ಟಿಸಿ ಪರವಾಗಿ ವಾದಿಸಿದ ಕೆಎಸ್ಆರ್ಟಿಸಿ ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ, ಸಾರ್ವಜನಿಕರಿಂದ ಹಲವು ರೂಟ್ಗಳಿಗೆ ಬಸ್ಗಳ ಬೇಡಿಕೆ ಬಂದಲ್ಲಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಖಾಸಗಿ ಬಸ್ಸುಗಳು ಇರುವಲ್ಲಿಯೂ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಸರಕಾರದಿಂದ ನಗರಕ್ಕೆ 100 ಇಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆಯ ಅನುಕೂಲ ನಗರದ ಮಹಿಳೆಯರಿಗೂ ಸಿಗಬೇಕೆಂಬ ಬೇಡಿಕೆ ಇದೆ. ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಪರ್ತಿಪಾಡಿ ಮಾತನಾಡಿ, ಸಾವಿರಾರು ಕೋಟಿ ರೂ. ತೆರಿಗೆ ಪಾವತಿಸುತ್ತಿರುವ ದ.ಕ. ಜಿಲ್ಲೆಯ ಖಾಸಗಿ ಬಸ್ಸು ಮಾಲಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 110ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಖಾಸಗಿ ಬಸ್ಸು ಮಾಲಕರಲ್ಲಿ ಕೆಲವೇ ಕೆಲವು ಮಂದಿ ಉಳಿದುಕೊಂಡಿದ್ದಾರೆ. ಇದೀಗ ನಗರ ವ್ಯಾಪ್ತಿಯಲ್ಲಿ ರೈಲ್ವೇ ಬೋಗಿಯಂತೆ ಬಸ್ಸುಗಳು ಸಂಚರಿಸುತ್ತಿರುವಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳನ್ನು ಹಾಕಿದರೆ ಖಾಸಗಿ ಬಸ್ಸುಗಳ ಮಾಲಕರು ಬೀದಿ ಪಾಲಾಗುವ ಪರಿಸ್ಥಿತಿ ಉಂಟಾಗಲಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ಸು ಸಂಚಾರವಿಲ್ಲದಲ್ಲ ಇ ಸರಕಾರಿ ಬಸ್ಸುಗಳನ್ನು ಓಡಿಸುವ ವ್ಯವಸ್ಥೆಯಾಗಲಿ. ನಗರ ವ್ಯಾಪ್ತಿಯಲ್ಲಿ ಅನಾರೋಗ್ಯಕರ ಸ್ಪರ್ಧೆಗೆ ಅವಕಾಶ ಬೇಡ ಎಂದು ಆಗ್ರಹಿಸಿದರು.
ಸಾರ್ವಜನಿಕರ ಬೇಡಿಕೆಯನ್ನು ಅನುಸರಿಸಿಯೇ ಕೆಎಸ್ಆರ್ಟಿಸಿಯಿಂದ ನಗರ ವ್ಯಾಪ್ತಿಯಲ್ಲಿ ಅಗತ್ಯವಿರುವಲ್ಲಿ ಪರವಾನಿಗೆ ಕೋರಲಾಗಿದೆ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಅರ್ಜಿ ಸಲ್ಲಿರುವ ರೂಟ್ಗಳಲ್ಲಿ ಸಂಚಾ ರಕ್ಕೆ ಅವಕಾಶ ಕಲ್ಪಿಸುವಂತೆ ರಾಜೇಶ್ ಶೆಟ್ಟಿ ವಾದಿಸಿದರು.
ಪ್ರಜಾಸೌಧಕ್ಕೆ ವಿವಿಧ ಕಡೆಗಳಿಂದ ಬಸ್ ಒದಗಿಸಿ
ಜಿಲ್ಲಾಧಿಕಾರಿ ಕಚೇರಿ ಪಡೀಲ್ಗೆ ಸ್ಥಳಾಂತರಗೊಂಡಿರುವ ಕಾರಣ ಕೃಷ್ಟಾಪುರ, ಕುಂಜತ್ತಬೈಲ್, ಮಂಗಳಾದೇವಿ, ಸುಲ್ತಾನ್ ಬತ್ತೇರಿ ಒದಲಾದ ಕಡೆಗಳಿಗೆ ನೇರ ಬಸ್ಸುಗಳ ಸೌಲಭ್ಯ ಒದಗಿಸಬೇಕು. ಇದರಿಂದ ಸ್ಟೇಟ್ಬ್ಯಾಂಕ್ ಸುತ್ತಮುತ್ತ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಡಿಎಂ ನೋಟಿಫಿಕೇಶನ್ ಕೂಡಾ ರದ್ದುಪಡಿಸಬಹುದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಸಭೆಯಲ್ಲಿ ಆಗ್ರಹಿಸಿದರು.
ನಗರದ ನಂತೂರ್, ಪಂಪ್ವೆಲ್ ಮೊದಲಾದ ಕಡೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕ ವಾಹನ ಸಂಚಾ ರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಗರದಲ್ಲಿ ಟ್ಯಾಂಕರ್ಗಳ ಸಂಚಾರಕ್ಕೆ ನಿಷೇಧ ಹೇರಬೇಕು ಎಂದು ಸಾರ್ವಜನಿಕರ ಪರವಾಗಿ ಜಿ.ಕೆ. ಭಟ್ ಆಗ್ರಹಿಸಿದಾಗ, ಈ ಬಗ್ಗೆ ಪರಿಶೀಲಿಸುವುದಾಗಿ ಎಸ್ಪಿ ಡಾ. ಅರುಣ್ ಕುಮಾರ್ ಹೇಳಿದರು.
ಸಭೆಯಲ್ಲಿ ಡಿಸಿಪಿ ರವಿಶಂಕರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.
ವಲಯ ವಿಂಗಡಣೆಗೆ ಇ ಆಟೋರಿಕ್ಷಾ ಚಾಲಕರ ವಿರೋಧ
ಇ ಆಟೋ ರಿಕ್ಷಾಗಳ ಪರವಾನಿಗೆಗೆ ಸಂಬಂಧ ರಾಜ್ಯ ಸರಕಾರದಿಂದ ಇತ್ತೀಚೆಗೆ ಹೊರಡಿಸಲಾಗಿರುವ ಆದೇಶದ ಕುರಿತಂತೆ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಲಯ ವಿಂಗಡಣೆಗೆ ಅವಕಾಶ ನೀಡದಂತೆ ಯಥಾಸ್ಥಿತಿ ಕಾಪಾಡ ಬೇಕು ಎಂಬ ಆಗ್ರಹ ಇ ಆಟೋ ರಿಕ್ಷಾ ಚಾಲಕರ ಪರವಾಗಿ ಮಾತನಾಡಿದ ವಿಶ್ವನಾಥ್, ಪ್ರಜೇಶ್, ಮುಹಮ್ಮದ್ ರಿಯಾಝ್ ಆಗ್ರಹಿಸಿದರು.
ಇದೇ ವೇಳೆ, ಇತರ ಆಟೋರಿಕ್ಷಾಗಳ ಪರವಾಗಿ ವಿವಿಧ ಆಟೋರಿಕ್ಷಾ ಸಂಘಟನೆಗಳ ಮುಖಂಡರು ಮಾತನಾಡಿ, ಈಗಾಗಲೇ ನಗರದಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಟೋರಿಕ್ಷಾಗಳು ಸಂಚರಿಸುತ್ತಿದ್ದು, ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಆಟೋರಿಕ್ಷಾ ನಿಲ್ದಾಣಗಳ ಕೊರತೆಯೂ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಮಾತನಾಡಿ, 1997ರಿಂದ ಆಟೋರಿಕ್ಷಾಗಳಿಗೆ ಹೊಸ ಪರವಾನಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಚಾಲನಾ ಪರವಾನಿಗೆ ಮತ್ತು ಬ್ಯಾಜ್ ಹೊಂದಿದವರಿಗೆ ಮಾತ್ರವೇ ಆಟೋ ಪರವಾನಿಗೆ ನೀಡಬೇಕು. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಆಟೋ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು.
ರಕ್ಷಣಾ ವೇದಿಕೆ ಆಟೋರಿಕ್ಷಾ ಘಟಕದ ಪರವಾಗಿ ಅರುಣ್ ಕುಮಾರ್, ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಕರ್ನಾಟಕ ಚಾಲಕರ ಯೂನಿಯನ್ ಆಟೋ ಘಟಕದ ಸಂಚಾಲಕ ಗಣೇಶ್ ಆರ್. ಮೊದಲಾದವರು ಮಾತನಾಡಿದರು.
*ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣ- ಸುರತ್ಕಲ್ -ಕಟೀಲು * ಕೆಎಸ್ಆರ್ಟಿಸಿ-ಸುರತ್ಕಲ್- ಪರಂಗಿಪೇಟೆ *ಕೆಎಸ್ಆರ್ಟಿಸಿ- ಪರಂಗಿಪೇಟೆ- ಸುರತ್ಕಲ್ * ಮಂಗಳೂರು ರೈಲ್ವೇ ನಿಲ್ದಾಣದಿಂದ ನಂತೂರು ಮೂಲಕ ಪಡೀಲ್ ಹಾಗೂ ಪಡೀಲ್ ಮೂಲಕ ಕೋಡಿಕಲ್ *ಮಂಗಳೂರು- ಉಳಾಯಿಬೆಟ್ಟು * ಸ್ಟೇಟ್ಬ್ಯಾಂಕ್- ಪರಂಗಿಪೇಟೆ ಹಾಗೂ ಸ್ಟೇಟ್ಬ್ಯಾಂಕ್ನಿಂದ ಮಂಗಲೂರು ರೈಲ್ವೇ ಜಂಕ್ಷನ್ * ಮಂಗಳೂರು ರೈಲ್ವೇ ಜಂಕ್ಷನ್- ಅದ್ಯುಪಾಡಿ ಹಾಗೂ ಕಂಕನಾಡಿ ಮಾರ್ಕೆಟ್- ಅದ್ಯಪಾಡಿ *ಸ್ಟೇಟ್ಬ್ಯಾಂಕ್- ಕನ್ನಗುಡ್ಡೆ ಹಾಗೂ ಸ್ಟೇಟ್ಬ್ಯಾಂಕ್ ನಿಂದ ಕಟೀಲು * ಸ್ಟೇಟ್ಬ್ಯಾಂಕ್- ಕ್ನಿನಿಗೋಳಿ* ಪಡೀಲ್- ಆಕಾಶಭವನ ಸೇರಿ 28 ರೂಟ್ಗಳಲ್ಲಿ 28 ಬಸ್ಸುಗಳ ಸಂಚಾರಕ್ಕೆ ಅವಕಾಶ ಕೋರಿ ಸಾರಿಗೆ ಪ್ರಾಧಿಕಾರಕ್ಕೆ ಕೆಎಸ್ಆರ್ಟಿಸಿಯಿಂದ ಅರ್ಜಿ ಸಲ್ಲಿಕೆಯಾಗಿದೆ.







