ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಮೂವರು ಆರೋಪಿಗಳ ಸುಳಿವು ನೀಡಿದವರಿಗೆ ಎನ್ಐಎ ಬಹುಮಾನ ಘೋಷಣೆ

ಸುಳ್ಯ : ಬಿಜೆಪಿ ಯುವ ಮೋರ್ಚಾ ಮುಖಂಡ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ನೀಡಿದವರಿಗೆ ಎರಡು ಲಕ್ಷ ರೂ. ಘೋಷಣೆ ಮಾಡಿ ಬೆಂಗಳೂರು ಎನ್.ಐ.ಎ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
2022 ಜುಲೈ 26ರಂದು ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಆರೋಪಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್ (32), ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಎನ್.ಐ.ಎ ಅಧಿಕಾರಿಗಳು ಈ ಮೊದಲೇ ಪಡಂಗಡಿಯಲ್ಲಿರುವ ಮನೆಗೆ ದಾಳಿ ಮಾಡಿದ್ದರು. ಈ ವೇಳೆ ನೌಷದ್, ನೆಟ್ಟಾರು ಕೊಲೆ ಪ್ರಕರಣ ನಡೆದ ಬಳಿಕ ನಾಪತ್ತೆಯಾಗಿದ್ದು, ಎನ್.ಐ.ಎ ಅಧಿಕಾರಿಗಳು ನೌಷಾದ್ ಬಗ್ಗೆ ನೋಟಿಸ್ ನೀಡಿ ಹೋಗಿದ್ದರು.
ಇನ್ನಿಬ್ಬರು ಆರೋಪಿಗಳಾದ ಸೋಮವಾರಪೇಟೆಯ ಕಲಕಂದೂರು ಅಬ್ದುಲ್ ರಹಿಮಾನ್ (36) ಮತ್ತು ಅಬ್ದುಲ್ ನಾಸಿರ್ (41) ಬಗ್ಗೆ ಸುಳಿವು ನೀಡಿದವರಿಗೆ ಎನ್.ಐ.ಎ ಅಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ. ಎನ್.ಐ.ಎ ಅಧಿಕಾರಿ ಗಳಿಗೆ ಮಾಹಿತಿ ನೀಡಿದ ವ್ಯಕ್ತಿಗಳನ್ನು ಗೌಪ್ಯವಾಗಿಟ್ಟು ಆ ವ್ಯಕ್ತಿಗೆ ಎರಡು ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್.ಐ.ಎ ಪ್ರಕಟಣೆ ಹೊರಡಿಸಿದ್ದಾರೆ.





